Devotion and Destiny: ಪೂಜೆ ಪುನಸ್ಕಾರ ಮಾಡುವುದರಿಂದ ನಿಜವಾಗಿಯೂ ಕಷ್ಟಗಳಿಂದ ಮುಕ್ತಿ ಸಿಗುತ್ತಾ?
ಕಷ್ಟ-ಸುಖಗಳು ಜೀವನದ ಸಹಜ ಭಾಗ. ಪೂಜೆ, ಪುನಸ್ಕಾರಗಳು ಕರ್ಮಫಲವನ್ನು ಪೂರ್ಣವಾಗಿ ನಿವಾರಿಸದಿದ್ದರೂ, ಸಮಸ್ಯೆಗಳನ್ನು ಎದುರಿಸುವ ಶಕ್ತಿ, ಧನಾತ್ಮಕ ಚಿಂತನೆ ಹಾಗೂ ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ. ಭಗವಂತನಿಗೆ ಕಷ್ಟಗಳನ್ನು ನಿವಾರಿಸಲು ಕೇಳುವುದಕ್ಕಿಂತ, ಅವುಗಳನ್ನು ಎದುರಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸುವುದು ಮುಖ್ಯ. ಮಾನಸಿಕ ಭಕ್ತಿಯು ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತದೆ ಎಂದು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ.

ಪೂಜೆ ಪುನಸ್ಕಾರಗಳಿಂದ ಕಷ್ಟಗಳು ನಿವಾರಣೆಯಾಗುತ್ತವೆಯೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಮಾನವರಾಗಿ ಹುಟ್ಟಿದ ಮೇಲೆ ಕಷ್ಟ-ಸುಖಗಳು ಜೀವನದ ಸಹಜ ಭಾಗ. ಅವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪೂರ್ವಜನ್ಮದ ಕರ್ಮಫಲ ಅಥವಾ ಹಣೆಬರಹವನ್ನು ಹರಿಹರರೂ ಸಹ ಬದಲಾಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ.
ಆದರೂ, ಈ ಪೂಜೆ, ಪುನಸ್ಕಾರ, ಹವನ, ಹೋಮ, ಯಜ್ಞ, ಯಾಗಾದಿ, ಜಪಗಳನ್ನು ಆಚರಿಸುವುದರಿಂದ ಆ ಸಮಸ್ಯೆಗಳನ್ನು, ಕಷ್ಟಗಳನ್ನು ಸಹಿಸಿಕೊಳ್ಳುವ, ಎದುರಿಸುವ ವಿಶೇಷ ಶಕ್ತಿ ನಮ್ಮಲ್ಲಿ ಉದ್ಭವಿಸುತ್ತದೆ. “ಮನನಾತ್ ತ್ರಾಯತೇ ಇತಿ ಮಂತ್ರಃ” ಎಂಬಂತೆ, ಮಂತ್ರ ಅಥವಾ ಪೂಜೆ ಮಾಡುವ ಸಮಯದಲ್ಲಿ, ಕಷ್ಟಗಳಿಂದ ಆಚೆ ಬರುತ್ತಿದ್ದೇನೆ, ಪರಿಹಾರ ಸಿಗುತ್ತದೆ ಎಂಬ ಧನಾತ್ಮಕ ಆಲೋಚನೆಗಳು ಫಲ ನೀಡುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.
ಭಗವಂತನಿಗೆ ಕಷ್ಟಗಳನ್ನು ನಿವಾರಣೆ ಮಾಡುವಂತೆ ನೇರವಾಗಿ ಕೇಳುವುದು ಸೂಕ್ತವಲ್ಲ. ಬದಲಿಗೆ, “ನನಗೆ ತುಂಬಾ ಕಷ್ಟವಾಗುತ್ತಿದೆ, ಕುಟುಂಬದಲ್ಲಿ ಸಮಸ್ಯೆಗಳಿವೆ, ಈ ಕಷ್ಟಗಳಿಂದ ಹೊರಬರಲು ಶಕ್ತಿ ನೀಡು” ಎಂದು ಪ್ರಾರ್ಥಿಸುವುದು ಸರಿಯಾದ ವಿಧಾನ. ನಿತ್ಯ ಪೂಜೆ, ಪ್ರತಿನಿತ್ಯದ ಪ್ರಾರ್ಥನೆಗಳು, ನಾಮಸ್ಮರಣೆ, ಜಪ, ತಪ ಇವೆಲ್ಲವೂ ಕೂಡ ಅವಶ್ಯಕವೇ ಆದರೂ, ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತನನ್ನು ನೆನೆಯಲು ಈ ಎಲ್ಲ ಬಾಹ್ಯ ಆಚರಣೆಗಳಿಗಿಂತ ಮಾನಸಿಕ ಪೂಜೆಗೆ ಹೆಚ್ಚು ಪ್ರಾಶಸ್ತ್ಯವಿದೆ. ಯಾವುದೇ ವಸ್ತುಗಳ ಅಗತ್ಯವಿಲ್ಲದೆ, ಮನಸ್ಸಿನಲ್ಲೇ ಭಗವಂತನನ್ನು ಪ್ರಾರ್ಥಿಸಿದಾಗಲೂ ದಾರಿಗಳು ದೊರೆಯುತ್ತವೆ.
ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಪ್ರತಿಯೊಬ್ಬ ವ್ಯಕ್ತಿಯು ಜನನ ಮತ್ತು ಮರಣದ ಮಧ್ಯೆ ವಿಚಿತ್ರ ಸಂಕಷ್ಟಗಳನ್ನು ಎದುರಿಸುತ್ತಾನೆ. ಇವುಗಳು ಪೂರ್ವಜನ್ಮದ ಕರ್ಮಗಳ ಫಲವೂ ಆಗಿರಬಹುದು. ಸತ್ಯವೇನೆಂದರೆ, ಈ ಪೂಜೆ, ಜಪ, ತಪ ಮತ್ತು ನಿತ್ಯಾನುಷ್ಠಾನಗಳಿಂದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬಂದೇ ಬರುತ್ತದೆ. ಅಂದರೆ ಕಷ್ಟಗಳು ಪರಿಪೂರ್ಣವಾಗಿ ನಿವಾರಣೆಯಾಗುವುದಿಲ್ಲ, ಬದಲಿಗೆ ಅವುಗಳಿಗೆ ಸೂಕ್ತ ಮಾರ್ಗಗಳು ಸಿಗುತ್ತವೆ.
ಕಷ್ಟಗಳ ನಿವಾರಣೆಗೆ ಪೂಜೆಗಳು, ಮಾರ್ಗಗಳನ್ನು ಹುಡುಕಲು ನೆರವಾಗುವ ಒಂದು ಹಡಗು ಇದ್ದಂತೆ. ನಿರಂತರ ನಾಮಸ್ಮರಣೆಯನ್ನು ಎಂದಿಗೂ ಬಿಡಬಾರದು. ನಾವು ಕಷ್ಟವನ್ನು ಪಕ್ಕಕ್ಕಿಟ್ಟು ಭಗವಂತನ ಸ್ಮರಣೆ ಮಾಡಿದಾಗ, ಆ ಕಷ್ಟವೂ ಕರಗಿ ಹೋಗುತ್ತದೆ. ಭಗವಂತನ ಪೂಜೆ ಎಂಬುದು, ನಮಗೆ ನಾವೇ ಮಾಡಿಕೊಳ್ಳುವಂಥದ್ದಾಗಿದ್ದು, “ಯದ್ಭಾವಂ ತದ್ಭವತಿ” ಎಂಬಂತೆ, ನಿಮ್ಮ ಸರಳ ಮತ್ತು ಪರಿಶುದ್ಧ ಹೃದಯದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
