ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಲು ಪ್ರವಾಸ ಆಯೋಜಿಸುತ್ತಾರೆ. ಧಾರ್ಮಿಕ ಕ್ಷೇತ್ರಗಳ ಭೇಟಿ ಎಂದಾಕ್ಷಣ ಮೊದಲು ನೆನಪಾಗುವುದೇ ಧರ್ಮಸ್ಥಳ. ಹಾಗಿದ್ರೆ ನೀವೂ ಕೂಡ ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ರೆ ಈ ಮಾಹಿತಿ ನಿಮಗಾಗಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನದ ಜೊತೆಗೆ ಸಮೀಪವಿರುವ ಈ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ.
ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದ ಬಳಿಕ ನೀವು ರತ್ನಗಿರಿ ಬೆಟ್ಟದ ಮೇಲ್ಭಾಗದಲ್ಲಿರುವ ಬಾಹುಬಲಿ ದೇವಾಲಯಕ್ಕೆ ಭೇಟಿ. ಇದು ಧರ್ಮಸ್ಥಳದ ದೇವಸ್ಥಾನದಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ನೀವು ಸುಮಾರು 39 ಅಡಿ ಎತ್ತರದ ಬಾಹುಬಲಿ ವಿಗ್ರಹವನ್ನು ಕಣ್ತುಂಬಿಸಿಕೊಳ್ಳಬಹುದು.
ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳು ಅಮೃತ ಶಿಲ್ಪಗಳಿಂದ ಪ್ರತಿಷ್ಠಾಪಿಸಲಾಗಿದೆ. ಇದನ್ನು 2003 ರಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಧಾರ್ಮಿಕ ಭಕ್ತರು ಭೇಟಿ ನೀಡುತ್ತಾರೆ. ದಕ್ಷಿಣದ ಅಯೋಧ್ಯೆ ಎಂದೇ ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ನೀವೂ ಭೇಟಿ ನೀಡಿ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲ್ವಿಚಾರಣೆಯಲ್ಲಿರುವ ಮಂಜೂಷಾ ಮ್ಯೂಸಿಯಂಗೂ ಭೇಟಿ ನೀಡಲು ಮರೆಯದಿರಿ. 35 ವರ್ಷಗಳ ಕಾಲ ವಿಶೇಷ ಮುತುವರ್ಜಿ ವಹಿಸಿ ಸಂಗ್ರಹಿಸಿದ ಆಭರಣಗಳು, ವರ್ಣಚಿತ್ರಗಳು, ಶಿಲ್ಪಗಳು, ಕಾರುಗಳು, ಅಮೂಲ್ಯ ಕಲ್ಲುಗಳು ಮತ್ತು ಇತರ ಕಲಾಕೃತಿಗಳ ಅಪಾರ ಸಂಗ್ರಹ ಇಲ್ಲಿದೆ. ಮೌರ್ಯರ ಕಾಲದ (ಕ್ರಿ.ಪೂ 1 ನೇ ಶತಮಾನ) ಟೆರಾಕೋಟಾ ನಾಣ್ಯಗಳು, 300 ವರ್ಷಗಳಷ್ಟು ಹಳೆಯದಾದ ವೀಣೆ ಮತ್ತು ವಿಲಕ್ಷಣ ವಿಂಟೇಜ್ ಕಾರುಗಳ ದೊಡ್ಡ ಪಡೆ ಮಂಜೂಷಾ ವಸ್ತುಸಂಗ್ರಹಾಲಯದ ಪ್ರಮುಖ ಆಕರ್ಷಣೆ.
ಸಮಯ: ಮಂಜೂಷಾ ವಸ್ತುಸಂಗ್ರಹಾಲಯವು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ. ಮಂಜೂಷಾ ಮ್ಯೂಸಿಯಂ ಒಳಗೆ ಛಾಯಾಗ್ರಹಣಕ್ಕೆ ಅನುಮತಿ ಇಲ್ಲ. ಫೋಟೋ ಮತ್ತು ಪ್ರದರ್ಶನಗಳ ವಿವರಗಳನ್ನು ಪ್ರದರ್ಶಿಸುವ ಕಿರುಪುಸ್ತಕವನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಬೇಸಿಗೆ ರಜೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುವ ಯೋಚನೆ ಇದ್ಯಾ? ಹಾಗಿದ್ರೆ ಉಪಯುಕ್ತ ಮಾಹಿತಿ ಇಲ್ಲಿದೆ
ಬೆಂಗಳೂರಿನಿಂದ ಧರ್ಮಸ್ಥಳವೂ ಸುಮಾರು 295.0 km ದೂರದಲ್ಲಿದೆ. ನೀವು ಇಲ್ಲಿಗೆ ಬಸ್ ಹಾಗೂ ರೈಲಿನ ಮೂಲಕ ಪ್ರಯಾಣಿಸಬಹುದು. ಇದಲ್ಲದೇ ಬೇರೆ ರಾಜ್ಯಗಳಿಂದ ಬರುವವರಿದ್ದರೆ ಮಂಗಳೂರಿನ ತನಕ ವಿಮಾನದಲ್ಲೂ ಪ್ರಯಾಣಿಸಬಹುದು.
ರಾಜ್ಯದ ಎಲ್ಲೆಡೆಯಿಂದ ಧರ್ಮಸ್ಥಳ ತಲುಪಲು ಕರಾರಸಾನಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಪಡೆಯಬಹುದು ಮಹಿಳರಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಖಾಸಗಿ ಬಸ್ಸುಗಳಾದ ಹವಾನಿಯಂತ್ರಿತವಲ್ಲದ ಸ್ಲೀಪರ್ / ಸೀಟರ್ ಗಳು ಧರ್ಮಸ್ಥಳಕ್ಕೆ ಸಮೀಪದ ನಗರಗಳಲ್ಲಿ ಕೂಡ ಸಂಚರಿಸುತ್ತವೆ.
ಇದನ್ನೂ ಓದಿ: ಕಡಲತೀರಗಳ ಸೌಂದರ್ಯ ಸವಿಯಲು ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಿ
ಧರ್ಮಸ್ಥಳಕ್ಕೆ ಹತ್ತಿರದ ರೈಲ್ವೆ ಜಂಕ್ಷನ್ ಅಂದರೆ ಅದು 74 ಕಿಮೀ ದೂರದಲ್ಲಿರುವ ಮಂಗಳೂರು ರೈಲು ನಿಲ್ದಾಣ. ರೈಲು ನಿಲ್ದಾಣ ಭಾರತದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೂ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳು ಅಥವಾ ಬಸ್ಸುಗಳನ್ನು ಬಾಡಿಗೆಗೆ ತೆಗೆದುಕೊಂಡು ಧರ್ಮಸ್ಥಳ ತಲುಪಬಹುದು.
ಬೆಂಗಳೂರಿನಿಂದ ಹೊರಡುವುದಾದರೆ ಕನ್ನೂರು ಎಕ್ಸ್ಪ್ರೆಸ್ ಮತ್ತು ಕಾರಾವಾರ ಎಕ್ಸ್ಪ್ರೆಸ್ನಲ್ಲಿ ಒಂದು ತಿಂಗಳ ಮುಂಚೆಯೇ ಕಡಿಮೆ ಖರ್ಚಿನಲ್ಲಿ ಸೀಟ್ ಬುಕ್ ಮಾಡಿಕೊಳ್ಳಿ. ಹಾಗೆಯೇ ಕಬಕ ಪುತ್ತೂರು ರೈಲು ನಿಲ್ದಾಣ ಧರ್ಮಸ್ಥಳದಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಹಾಗೆಯೇ ಸುಬ್ರಮಹ್ಯ ರೈಲು ನಿಲ್ದಾಣ 74 ಕಿಲೋ ಮೀಟರ್ ದೂರದಲ್ಲಿದೆ.
ನೀವು ಮುಂಬೈ, ಬೆಂಗಳೂರು, ಗೋವಾ ಹಾಗೂ ಇತರ ರಾಜ್ಯಗಳಿಂದ ಬರುವವರಾಗಿದ್ದರೆ ಮಂಗಳೂರು ವಿಮಾನ ನಿಲ್ದಾಣ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರಿಗೆ ಹತ್ತಿರದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಸೇವೆ ಸಲ್ಲಿಸುತ್ತಿದೆ. ಬಾಜ್ಪೆ ಏರ್ಪೋರ್ಟ್ ಧರ್ಮಸ್ಥಳದಿಂದ ಸುಮಾರು 65 ಕಿಮೀ ದೂರದಲ್ಲಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Thu, 20 March 25