
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುವ ಗಣೇಶೋತ್ಸವವು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ಬುದ್ಧಿವಂತಿಕೆ, ಸಮೃದ್ಧಿ ಮತ್ತು ವಿಘ್ನನಿವಾರಕನಾದ ಶ್ರೀ ಗಣೇಶನನ್ನು ಪ್ರತಿಯೊಬ್ಬ ಭಕ್ತನೂ ತನ್ನ ಮನೆಗೆ ಅಪಾರ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾನೆ. 2026 ರ ಗಣೇಶೋತ್ಸವವು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗುತ್ತಿದೆ. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸುವಾಗ ಧಾರ್ಮಿಕ ಆಚರಣೆಗಳ ಜೊತೆಗೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಅತ್ಯಂತ ಮಂಗಳಕರವಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ಮೂರ್ತಿಯನ್ನು ಸ್ಥಾಪಿಸಲು ಮನೆಯ ಈಶಾನ್ಯ ದಿಕ್ಕು ಅತ್ಯಂತ ಪವಿತ್ರವಾಗಿದೆ. ಈ ದಿಕ್ಕು ಪೂಜೆ ಮತ್ತು ಆಧ್ಯಾತ್ಮಿಕ ಕಾರ್ಯಗಳಿಗೆ ಸೂಕ್ತವಾದ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಮೂರ್ತಿಯನ್ನು ಇಡಲು ಸಾಕಷ್ಟು ಸ್ಥಳಾವಕಾಶವಿಲ್ಲದಿದ್ದರೆ, ಗಣೇಶನ ಮೂರ್ತಿಯನ್ನು ಉತ್ತರ ಅಥವಾ ಪಶ್ಚಿಮ ದಿಕ್ಕುಗಳಲ್ಲಿಯೂ ಸಹ ಸ್ಥಾಪಿಸಬಹುದು.
ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಗಣೇಶನ ಮುಖವು ಮನೆಯ ಒಳಗಿನ ಕಡೆಗೆ ಇರಬೇಕು. ಇದರಿಂದ ಪೂಜಿಸುವವರಿಗೆ ಅವನ ಮುಂಭಾಗ ಕಾಣಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣೇಶನ ಬೆನ್ನಿನ ಭಾಗದಲ್ಲಿ ಬಡತನ ನೆಲೆಸಿದ್ದರೆ, ಮುಂಭಾಗದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಈ ಕಾರಣಕ್ಕಾಗಿ ಗಣೇಶನ ಹಿಂಭಾಗವು ಗೋಡೆಯ ಕಡೆಗೆ ಇರಬೇಕು ಮತ್ತು ಮೂರ್ತಿಯ ಬೆನ್ನು ಮನೆಯ ಮುಖ್ಯ ಕೊಠಡಿ ಅಥವಾ ಯಾವುದೇ ತೆರೆದ ಪ್ರದೇಶದ ಕಡೆಗೆ ಕಾಣಿಸುವಂತೆ ಎಂದಿಗೂ ಇಡಬಾರದು.
ಪೂಜೆಗೆ ಆಯ್ಕೆ ಮಾಡುವ ಸ್ಥಳವು ಯಾವಾಗಲೂ ಸಂಪೂರ್ಣವಾಗಿ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯನ್ನು ಯಾವುದೇ ಕಾರಣಕ್ಕೂ ನೇರವಾಗಿ ನೆಲದ ಮೇಲೆ ಇಡಬಾರದು; ಅದನ್ನು ಸ್ವಚ್ಛವಾದ ಮರದ ಪೀಠ ಅಥವಾ ವೇದಿಕೆಯ ಮೇಲೆಯೇ ಪ್ರತಿಷ್ಠಾಪಿಸಬೇಕು. ಇನ್ನು ಪೂಜೆಯ ನಂತರ ಸುಲಭವಾಗಿ ನೀರಿನಲ್ಲಿ ವಿಸರ್ಜನೆ ಮಾಡಲು ಸಾಧ್ಯವಾಗುವುದರಿಂದ, ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಯನ್ನು ಮನೆಗೆ ತರುವುದು ಅತ್ಯಂತ ಶ್ರೇಷ್ಠ ಹಾಗೂ ಧಾರ್ಮಿಕವಾಗಿ ಪವಿತ್ರವಾಗಿದೆ.
ಗಣೇಶ ಚತುರ್ಥಿಯ ದಿನ ಬೆಳಿಗ್ಗೆ ಬೇಗನೆ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಪೂಜಾ ಸ್ಥಳವನ್ನು ತೊಳೆಯಿರಿ. ಪೀಠದ ಮೇಲೆ ಶುದ್ಧ ಬಟ್ಟೆಯನ್ನು ಹಾಸಿ ಗಣಪತಿಯನ್ನು ಪ್ರತಿಷ್ಠಾಪಿಸಿ, ದೂರ್ವಾ ಹುಲ್ಲು (ಗರಿಕೆ), ಮೋದಕ ಮತ್ತು ಹೂವುಗಳನ್ನು ಅರ್ಪಿಸಿ ವಿಧಿವಿಧಾನಗಳಂತೆ ಆವಾಹನೆ ಮಾಡಿ. ಗಣಪತಿಯು ಮನೆಯಲ್ಲಿರುವಷ್ಟು ದಿನವೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ಆರತಿ ಮಾಡಿ ನೈವೇದ್ಯವನ್ನು ಅರ್ಪಿಸಬೇಕು ಹಾಗೂ ಪೂಜಾ ಸ್ಥಳದ ನೈರ್ಮಲ್ಯಕ್ಕೆ ವಿಶೇಷ ಗಮನ ನೀಡಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ