Video: ಶ್ರೀಮದ್ ಭಾಗವತ ಸಪ್ತಾಹ; ಗಾಯಕನ ಗಾಯನಕ್ಕೆ ಮನಸೋತು ಹಣದ ಮಳೆ ಸುರಿಸಿದ ಭಕ್ತರು!
ಜುನಾಗಢ್ನಲ್ಲಿ ನಡೆದ ಸಾಂಪ್ರದಾಯಿಕ 'ಡಾಯ್ರೋ' ಕಾರ್ಯಕ್ರಮದಲ್ಲಿ ಗಾಯಕ ಗೋಪಾಲ್ ಸಾಧು ಅವರ ಮೇಲೆ ಭಕ್ತರು ಅಪಾರ ಹಣದ ನೋಟುಗಳನ್ನು ಸುರಿದಿರುವ ವಿಡಿಯೋ ವೈರಲ್ ಆಗಿದೆ. ಇದು ಕಲಾವಿದರನ್ನು ಗೌರವಿಸುವ 'ಉಚ್ಚಮ್ನಿ' ಪದ್ಧತಿಯ ಭಾಗ. ಸಂಗ್ರಹವಾದ ಕೋಟಿಗಟ್ಟಲೆ ಹಣವನ್ನು ಅಹೀರ್ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅಹಮದಾಬಾದ್ನಲ್ಲಿ ನಿರ್ಮಾಣವಾಗುತ್ತಿರುವ 'ಗುಜರಾತ್ ಅಹೀರ್ ಕನ್ಯಾ ಛಾತ್ರಾಲಯ' ಹಾಸ್ಟೆಲ್ ಯೋಜನೆಗೆ ದೇಣಿಗೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಜೂನಾಗಢ್: ಸಾಂಪ್ರದಾಯಿಕ ಗುಜರಾತಿ ‘ಡಾಯ್ರೋ’ (Dayro) ಕಾರ್ಯಕ್ರಮವೊಂದರಲ್ಲಿ ಜನಪ್ರಿಯ ಗಾಯಕರೊಬ್ಬರ ಮೇಲೆ ಭಕ್ತರು ಅಪಾರ ಪ್ರಮಾಣದ ಹಣದ ನೋಟುಗಳನ್ನು ಸುರಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಖಂಭಾಲಿಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾರಪೂರ್ತಿಯ ‘ಶ್ರೀಮದ್ ಭಾಗವತ್ ಸಪ್ತಾಹ’ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಸಂಗೀತ, ಕಥಾವಾಚನ, ಹಾಸ್ಯ ಮತ್ತು ಭಕ್ತಿಗೀತೆಗಳ ಮಿಶ್ರಣವಿರುವ ಗುಜರಾತ್ನ ಸಾಂಪ್ರದಾಯಿಕ ‘ಡಾಯ್ರೋ’ ಶೈಲಿಯ ಪ್ರದರ್ಶನ ನೀಡುತ್ತಿದ್ದ ಖ್ಯಾತ ಗಾಯಕ ಗೋಪಾಲ್ ಸಾಧು ಅವರ ಮೇಲೆ ಭಕ್ತರು ಕಂತೆ ಕಂತೆ ಹಾಗೂ ಚೀಲಗಟ್ಟಲೆ ನೋಟುಗಳನ್ನು ಸುರಿದಿದ್ದಾರೆ.
ನೋಟಿನ ರಾಶಿಯ ನಡುವೆಯೂ ನಿಲ್ಲದ ಗಾಯನ:
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ನಲ್ಲಿ, ಗಾಯಕ ಗೋಪಾಲ್ ಸಾಧು ಅವರು ಹಾರ್ಮೋನಿಯಂ ನುಡಿಸುತ್ತಾ ಅತ್ಯಂತ ಶಾಂತಚಿತ್ತರಾಗಿ ಹಾಡುವುದನ್ನು ಮುಂದುವರಿಸಿರುವುದು ಕಂಡುಬಂದಿದೆ. ಅವರ ಸುತ್ತಲೂ 10, 20, 50, 100 ಹಾಗೂ 500 ರೂ. ಮುಖಬೆಲೆಯ ನೋಟುಗಳು ಮಳೆಯಂತೆ ಸುರಿದು ದೊಡ್ಡ ಬೆಟ್ಟದಂತೆ ರಾಶಿ ಬಿದ್ದಿದ್ದವು. ಒಂದು ಹಂತದಲ್ಲಂತೂ ಹಣದ ರಾಶಿ ಎಷ್ಟು ಹೆಚ್ಚಾಯಿತೆಂದರೆ, ಗಾಯಕ ಬಹುತೇಕ ಆ ನೋಟುಗಳ ಅಡಿಯಲ್ಲೇ ಮುಳುಗಿಹೋಗಿದ್ದಾರೆ. ಆದರೂ ತಮ್ಮ ಗಾಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
View this post on Instagram
ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!
ದಾನ ಕಾರ್ಯಕ್ಕೆ ಬಳಕೆಯಾಗಲಿದೆ ಕೋಟ್ಯಂತರ ಹಣ:
ಅಹೀರ್ ಸಮಾಜದ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಘಟಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್ನ ಜಾನಪದ ಸಂಗೀತ ಕೂಟಗಳಲ್ಲಿ ಕಲಾವಿದರನ್ನು ಗೌರವಿಸುವ ಈ ಸಾಂಪ್ರದಾಯಿಕ ಪದ್ಧತಿಯನ್ನು ‘ಉಚ್ಚಮ್ನಿ’ (Uchchamni) ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಸಂಪೂರ್ಣ ಹಣವನ್ನು ಅಹೀರ್ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಕ್ಕಾಗಿ ಅಹಮದಾಬಾದ್ನಲ್ಲಿ ನಿರ್ಮಾಣವಾಗುತ್ತಿರುವ ‘ಗುಜರಾತ್ ಅಹೀರ್ ಕನ್ಯಾ ಛಾತ್ರಾಲಯ’ ಯೋಜನೆಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





