AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?

ಭಾದ್ರಪದ ಶುಕ್ಲದ ತದಿಗೆ ದಿನದಂದು ಗೌರಿಯನ್ನ ಮನೆ ತುಂಬಿಸಿಕೊಳ್ಳಲಾಗುತ್ತೆ. ಈ ಹಬ್ಬವನ್ನು ತಾಯಿ ಗೌರಿ ಅಥವಾ ದೇವಿ ಪಾರ್ವತಿಗೆ ಸಮರ್ಪಿಸಲಾಗಿದೆ. ಈ ಹಬ್ಬವನ್ನು ಸೌಭಾಗ್ಯ ಗೌರಿ ವ್ರತ ಎಂದೂ ಸಹ ಕರೆಯುತ್ತಾರೆ.

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?
ಗೌರಿ ತದಿಗೆ
TV9 Web
| Updated By: ಸಾಧು ಶ್ರೀನಾಥ್​|

Updated on:Sep 07, 2021 | 5:01 PM

Share

ಸೆಪ್ಟೆಂಬರ್ 9 ಅಂದ್ರೆ ಗಣೇಶ ಹಬ್ಬದ ಒಂದು ದಿನ ಮುಂಚೆ ಗೌರಿ ಹಬ್ಬವನ್ನು ಮಾಡಲಾಗುತ್ತೆ. ಗಣೇಶನಿಗೂ ಮುನ್ನ ಗೌರಿಯನ್ನು ಮನೆ ತುಂಬಿಸಿಕೊಂಡು ವಿಜೃಂಭಣೆಯಿಂದ ಹೆಣ್ಣು ಮಕ್ಕಳು ಈ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ತದಿಗೆ (3 ನೇ ದಿನ ತಿಥಿ ಎಂದರ್ಥ). ಭಾದ್ರಪದ ಶುಕ್ಲದ ತದಿಗೆ ದಿನದಂದು ಗೌರಿಯನ್ನ ಮನೆ ತುಂಬಿಸಿಕೊಳ್ಳಲಾಗುತ್ತೆ. ಈ ಹಬ್ಬವನ್ನು ತಾಯಿ ಗೌರಿ ಅಥವಾ ದೇವಿ ಪಾರ್ವತಿಗೆ ಸಮರ್ಪಿಸಲಾಗಿದೆ. ಈ ಹಬ್ಬವನ್ನು ಸೌಭಾಗ್ಯ ಗೌರಿ ವ್ರತ ಎಂದೂ ಸಹ ಕರೆಯುತ್ತಾರೆ.ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತೆ.

ಗೌರಿ ತದಿಗೆ ಆಚರಣೆ ಹೇಗೆ ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಪೂಜೆ ಮಾಡುವ ಸ್ಥಳವನ್ನು ಶುಭ್ರಗೊಳಿಸಿ, ಅರಿಶಿನ ಕುಂಕುಮದ ಪೂಜೆ ಮಾಡಿ ಅದರ ಮೇಲೆ ಬೆಳ್ಳೆ ತಟ್ಟೆಯಲ್ಲಿ ಅಕ್ಕಿಯನ್ನು ಇಡುತ್ತಾರೆ. ಅದರ ಮೇಲೆ ಪಂಚಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರ ಮೇಲೆ ವಿಳ್ಳೇದೆಲೆ ಜೋಡಿಸಿ ಅದರ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚಿದ ತೆಂಗಿನ ಕಾಯಿಯನ್ನು ಕಳಸ ರೂಪದಲ್ಲಿ ಇಡುತ್ತಾರೆ.

ಈ ಕಳಸದ ಮುಂದೆ ಶ್ರದ್ಧೆ, ಭಕ್ತಿಯಿಂದ ಅರಿಶಿನದಿಂದ ಮಾಡಿದ ಗೌರಮ್ಮನನ್ನು ಪ್ರತಿಷ್ಠಾಪಿಸಿ ಅದರ ಪಕ್ಕದಲ್ಲಿ ಬಳೆ, ಬಿಚ್ಚೋಲೆ, ವೀಳ್ಯದೆಲೆ, ಅರಿಶಿನ, ಕುಂಕುಮ, ಹೂವು, ಮಂತ್ರಾಕ್ಷತೆ, ಕನ್ನಡಿಯನ್ನು ಇಡುತ್ತಾರೆ. ಬಳಿಕ ತದಿಗೆ ಗೌರಿಯನ್ನು ಸ್ಥಾಪಿಸಿ, ಆವಾಹನೆ ಮಾಡಿ ಪೂಜಿಸಬೇಕು.

ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ, ಹಣ್ಣುಗಳು, ಪಾನಕ, ಕೋಸಂಬರಿ ತಮ್ಮ ಕೈಲಾದಂತೆ ಯಾವುದನ್ನಾದರೂ ಮಾಡಿ ನೈವೇದ್ಯಕ್ಕೆಡಬೇಕು. ಬಗೆ ಬಗೆಯ ಪುಷ್ಪ ಮತ್ತು ಪತ್ರೆಗಳಿಂದ ತರ ತರಹದ ಗೆಜ್ಜೆವಸ್ತ್ರಗಳಿಂದ ಅಲಂಕರಿಸಿ, ಗೌರಿ ಅಷ್ಟೋತ್ತರವನ್ನು ಜಪಿಸಿ, ಷೋಡಶೋಪಚಾರ ಪೂಜೆ ನಡೆಸಲಾಗುತ್ತದೆ. ಇನ್ನು ವಿಶೇಷವೆಂದರೆ ಗೌರಿ ಗಣೇಶ ಹಬ್ಬದ ಸಮಯದಲ್ಲೇ ವಿಶಿಷ್ಟ ಹೂ—ಕಾಯಿಗಳು ಬಿಡುತ್ತವೆ. ಮತ್ತೆ ವಿಶಿಷ್ಟ ಹೂ ಗೌರಿ ಹೂವು ಸರಿಯಾಗಿ ಇದೇ ಸಮಯಕ್ಕೆ ಹೂವಾಗಿ ಅರಳುತ್ತದೆ. ಇಂತಹ ಹೂಗಳನ್ನು ಗೌರಿಗೆ ಅರ್ಪಿಸಿ ಪೂಜೆ ಮಾಡಲಾಗುತ್ತೆ. ಮತ್ತು ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು. ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತಿಯಾನುಸಾರ ಬಾಗಿನ ಕೊಡುತ್ತಾರೆ.

ಕೊನೆಗೆ ಸಂಜೆಯ ವೇಳೆ ತಾಯಿಗೆ ಮತ್ತೊಮ್ಮೆ ಪೂಜೆ ಮಾಡಿ ನಂತರ ಅರಿಶಿನದ ಗೌರಮ್ಮನನ್ನು ಕದಲಿಸಿ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಕೆಲವರ ಮನೆಗಳಲ್ಲಿ ಈ ಅರಿಶಿನ ಗೌರಮ್ಮನನ್ನು ಅಕ್ಷಯ ತದಿಗೆಯವರೆಗೆ ದೇವರ ಮನೆಯಲ್ಲಿ ಪೂಜಿಸಿದ ನಂತರ ಸಕಲ ಮರ್ಯಾದೆಯೊಂದಿಗೆ ವಿಸರ್ಜಿಸಲಾಗುತ್ತದೆ. ಈ ಪೂಜೆ, ಆಚರಣೆಗಳು ಒಂದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದ್ದು ಆಡಂಬರದ ತೋರಿಕೆಗಿಂತಲೂ ಭಕ್ತಿ, ಆನಂದದ ಭಾವದಿಂದ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?

Ganesha Chaturthi 2021; ಸಂಕಷ್ಟಹರ ಗಣಪತಿಯ ಶಕ್ತಿಯುತ ಮಂತ್ರಗಳು ಮತ್ತು ಪ್ರಯೋಜನಗಳು ನಿಮಗೆ ಗೊತ್ತೇ?

Published On - 7:14 am, Tue, 7 September 21