IND vs BAN: 7 ವರ್ಷಗಳ ಬಳಿಕ ಹೀನಾಯ ಸೋಲು: 2ನೇ ಬಾರಿ ಬಾಂಗ್ಲಾ ವಿರುದ್ಧ ಸರಣಿ ಸೋತ ಭಾರತ..!

| Updated By: ಝಾಹಿರ್ ಯೂಸುಫ್

Updated on: Dec 07, 2022 | 8:31 PM

India vs Bangladesh 2nd Odi: ಮೆಹದಿ ಹಸನ್ ಮಿರಾಜ್ ಅವರ ಅಬ್ಬರವನ್ನು ತಡೆಯಲು ಟೀಮ್ ಇಂಡಿಯಾ ಬೌಲರ್​​ಗಳಿಗೆ ಸಾಧ್ಯವಾಗಿಲ್ಲ. ಅಂತಿಮ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮಿರಾಜ್ 83 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಚೊಚ್ಚಲ ಶತಕ ಪೂರೈಸಿದರು.

IND vs BAN: 7 ವರ್ಷಗಳ ಬಳಿಕ ಹೀನಾಯ ಸೋಲು: 2ನೇ ಬಾರಿ ಬಾಂಗ್ಲಾ ವಿರುದ್ಧ ಸರಣಿ ಸೋತ ಭಾರತ..!
IND vs BAN
Follow us on

ಢಾಕಾದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಬಾಂಗ್ಲಾದೇಶ್ ತಂಡ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾ ತಂಡ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಸ್ಮರಣೀಯ ಸರಣಿ ಗೆಲುವನ್ನು ಬಾಂಗ್ಲಾದೇಶ್ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ಬಾಂಗ್ಲಾದೇಶ್ ತಂಡವು ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿ ಗೆದ್ದಿದ್ದು 2015 ರಲ್ಲಿ. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವ ಭಾರತ ತಂಡವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಗೆಲುವನ್ನು ತಮ್ಮದಾಗಿಸಿಕೊಂಡಿತ್ತು. ಇದೀಗ 3 ಪಂದ್ಯಗಳ ಸರಣಿಯ 2 ಪಂದ್ಯಗಳನ್ನು ಗೆದ್ದು 7 ವರ್ಷಗಳ ಬಳಿಕ ಮತ್ತೊಮ್ಮೆ ಭಾರತದ ವಿರುದ್ಧ ಸರಣಿ ಗೆಲುವು ಸಾಧಿಸಿರುವುದು ವಿಶೇಷ.

ಹಿಟ್​ಮ್ಯಾನ್ ಹೆಸರಿಗೆ ಕಳಪೆ ದಾಖಲೆ:

ಇದನ್ನೂ ಓದಿ
IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
New Record: ಅತ್ಯಧಿಕ ಟೆಸ್ಟ್ ಶತಕ: ಕೊಹ್ಲಿ, ರೂಟ್​ರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಈ ಸೋಲಿನೊಂದಿಗೆ ಬಾಂಗ್ಲಾದೇಶ್ ವಿರುದ್ಧ ಸರಣಿ ಸೋತ ಟೀಮ್ ಇಂಡಿಯಾದ 2ನೇ ನಾಯಕ ಎಂಬ ಕೆಟ್ಟ ದಾಖಲೆಯೊಂದು ರೋಹಿತ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ 2015 ರಲ್ಲಿ ಸರಣಿ ಸೋಲುವ ಮೂಲಕ ಈ ಹೀನಾಯ ದಾಖಲೆ ಬರೆದಿದ್ದರು. ಇದೀಗ ಧೋನಿ ಜೊತೆ ರೋಹಿತ್ ಶರ್ಮಾ ಹೆಸರು ಕೂಡ ಸೇರ್ಪಡೆಯಾಗಿದೆ.

ಟೀಮ್ ಇಂಡಿಯಾಗೆ ವಿರೋಚಿತ ಸೋಲು:

ಈ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಬಾಂಗ್ಲಾ ಬ್ಯಾಟರ್​ಗಳು ಪರದಾಡಿದರು. 2ನೇ ಓವರ್​ನ 5ನೇ ಎಸೆತದಲ್ಲಿ ಅನಾಮುಲ್ ಹಕ್ (11) ಅವರ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.

ಇದಾದ ಬಳಿಕ 10ನೇ ಓವರ್​​ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಲಿಟನ್ ದಾಸ್ (7) ಕ್ಲೀನ್ ಬೌಲ್ಡ್ ಮಾಡಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೈನ್​ರನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಕ್ಲೀನ್ ಬೌಲ್ಡ್ ಮಾಡಿ ಉಮ್ರಾನ್ ಮಲಿಕ್ ಪೆವಿಲಿಯನ್​ಗೆ ಕಳುಹಿಸಿದರು.

ಇದರ ನಡುವೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಮಿಂಚಿದರು. ಮೊದಲಿಗೆ ಶಕೀಬ್ ಅಲ್ ಹಸನ್ (8) ವಿಕೆಟ್ ಪಡೆದ ಸುಂದರ್, ಆ ಬಳಿಕ ಮುಶ್ಪಿಕುರ್ ರಹೀಮ್ (12) ಹಾಗೂ ಅಫಿಫ್ ಹೊಸೈನ್ (0) ಸ್ಪಿನ್ ಬಲೆಗೆ ಬೀಳಿಸಿದರು. ಪರಿಣಾಮ 20 ಓವರ್ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡವು 6 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಕಲೆಹಾಕಿದ್ದು ಕೇವಲ 71 ರನ್​ಗಳು ಮಾತ್ರ.

ಆದರೆ ಈ ಹಂತದಲ್ಲಿ ಜೊತೆಗೂಡಿದ ಮೆಹದಿ ಹಸನ್ ಮಿರಾಜ್ ಹಾಗೂ ಮಹಮ್ಮದುಲ್ಲಾ ಭರ್ಜರಿ ಜೊತೆಯಾಟವಾಡಿದರು. ಟೀಮ್ ಇಂಡಿಯಾ ಬೌಲರ್​ಗಳ ವಿರುದ್ಧ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ರನ್​ಗತಿಯನ್ನು ಹೆಚ್ಚಿಸುತ್ತಾ ಸಾಗಿದರು. ಅಲ್ಲದೆ 7ನೇ ವಿಕೆಟ್​ಗೆ 146 ರನ್​ಗಳ ಪಾಲುದಾರಿಕೆ ಪ್ರದರ್ಶಿಸಿದರು. ಈ ಹಂತದಲ್ಲಿ 96 ಎಸೆತಗಳಲ್ಲಿ 77 ರನ್​ ಬಾರಿಸಿದ ಮಹಮ್ಮದುಲ್ಲಾರನ್ನು ಉಮ್ರಾನ್ ಮಲಿಕ್ ಔಟ್ ಮಾಡಿದರು.

ಇದಾಗ್ಯೂ ಮೆಹದಿ ಹಸನ್ ಮಿರಾಜ್ ಅವರ ಅಬ್ಬರವನ್ನು ತಡೆಯಲು ಟೀಮ್ ಇಂಡಿಯಾ ಬೌಲರ್​​ಗಳಿಗೆ ಸಾಧ್ಯವಾಗಿಲ್ಲ. ಅಂತಿಮ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮಿರಾಜ್ 83 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಚೊಚ್ಚಲ ಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತವನ್ನು ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 271 ಕ್ಕೆ ತಂದು ನಿಲ್ಲಿಸಿದರು.

272 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಫೀಲ್ಡಿಂಗ್​ ವೇಳೆ ಗಾಯಗೊಂಡ ಪರಿಣಾಮ ರೋಹಿತ್ ಶರ್ಮಾ ಬ್ಯಾಟಿಂಗ್​ಗೆ ಇಳಿದಿರಲಿಲ್ಲ. ಅದರಂತೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಕೇವಲ 5 ರನ್​ಗಳಿಸಿ ಇಬಾದತ್ ಹೊಸೇನ್ ಎಸೆತದಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ ಶಿಖರ್ ಧವನ್ (8) ಕೂಡ ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇನ್ನು 3ನೇ ಕ್ರಮಾಂಕದಲ್ಲಿ ಆಡಿದ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಮತ್ತೊಂದೆಡೆ ವಾಷಿಂಗ್ಟನ್ ಸುಂದರ್ (11) ಹಾಗು ಕೆಎಲ್ ರಾಹುಲ್ (14) ಬೇಗನೆ ನಿರ್ಗಮಿಸಿ ನಿರಾಸೆ ಮೂಡಿಸಿದರು. 65 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದು ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ಜೋಡಿ. 5ನೇ ವಿಕೆಟ್​ಗೆ 107 ರನ್​ಗಳ ಜೊತೆಯಾಟವಾಡಿದ ಅಕ್ಷರ್-ಅಯ್ಯರ್ ಜೋಡಿ ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದೇ ವೇಳೆ ಆಕರ್ಷಕ ಅರ್ಧಶತಕ ಪೂರೈಸಿ ಅಯ್ಯರ್ ಅಬ್ಬರಿಸಲಾರಂಭಿಸಿದರು. ಆದರೆ ತಂಡದ ಮೊತ್ತ 172 ರನ್​ ಇದ್ದಾಗ ಭರ್ಜರಿ ಹೊಡೆತಕ್ಕೆ ಮುಂದಾದ ಶ್ರೇಯಸ್ ಅಯ್ಯರ್ (82) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಅಯ್ಯರ್ ನಿರ್ಗಮನದ ಬಳಿಕ ಅಬ್ಬರಿಸಿದ ಅಕ್ಷರ್ ಪಟೇಲ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಆದರೆ ಅರ್ಧಶತಕದ ಬೆನ್ನಲ್ಲೇ ಅಕ್ಷರ್ ಪಟೇಲ್ (56) ಇಬಾದತ್ ಹೊಸೇನ್ ಎಸೆತದಲ್ಲಿ ಕ್ಯಾಚ್ ನೀಡಿದರು. ಆ ಬಳಿಕ ಬಂದ ಶಾರ್ದೂಲ್ ಠಾಕೂರ್ (7) ಹಾಗೂ ದೀಪಕ್ ಚಹರ್ (11) ಬೇಗನೆ ನಿರ್ಗಮಿಸಿದರು. ಈ ಹಂತದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದರು.

ಇಬಾದತ್ ಹೊಸೇನ್ ಓವರ್​ನಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಬ್ಬರಿಸಿದ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಗೆಲುವಿನ ಆಸೆ ಮೂಡಿಸಿದರು. ಅದರಂತೆ 3 ಓವರ್​ಗಳಲ್ಲಿ ಟೀಮ್ ಇಂಡಿಯಾ ಗೆಲ್ಲಲು 40 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ 48ನೇ ಓವರ್ ಎಸೆದ ಮುಸ್ತಫಿಜುರ್ ರೆಹಮಾನ್ ಸಿರಾಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಮೇಡನ್ ಓವರ್ ಮಾಡಿದರು. ಪರಿಣಾಮ 12 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 40 ರನ್​ಗಳ ಅವಶ್ಯಕತೆಯಿತ್ತು.

ಮಹಮ್ಮದುಲ್ಲಾ ಎಸೆದ 49ನೇ ಓವರ್​ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಿದರು. 2ನೇ ಎಸೆತವನ್ನು ವೈಡ್ ಎಸೆದರು. ಚೆಂಡು ಕೀಪರ್​ ಅನ್ನು ವಂಚಿಸಿದನ್ನು ಗಮನಿಸಿದ ರೋಹಿತ್ ಶರ್ಮಾ 3 ರನ್ ಓಡಿದರು. ಮರು ಎಸೆತದಲ್ಲಿ ಹಿಟ್​ಮ್ಯಾನ್ ಕ್ಯಾಚ್ ನೀಡಿದರು. ಆದರೆ ಇಬಾದತ್ ಹೊಸೇನ್ ಸುಲಭ ಕ್ಯಾಚ್ ಕೈಚೆಲ್ಲಿದರು. ಸಿಕ್ಕ ಜೀವದಾನ ಬಳಸಿಕೊಂಡ ರೋಹಿತ್ ಶರ್ಮಾ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. 4ನೇ ಎಸೆತದಲ್ಲಿ 2 ರನ್ ನೀಡಿದರು. 5ನೇ ಎಸೆತದಲ್ಲಿ ಹಿಟ್​ಮ್ಯಾನ್ ನೀಡಿದ ಕ್ಯಾಚ್​ ಅನ್ನು ಬಾಂಗ್ಲಾ ಫೀಲ್ಡರ್ ಕೈಚೆಲ್ಲಿದರು. ಆದರೆ ಕೊನೆಯ ಎಸೆತದಲ್ಲಿ ಮೊಹ್ಮಮದ್ ಸಿರಾಜ್​ರನ್ನು ಬೌಲ್ಡ್ ಮಾಡುವ ಮೂಲಕ ಮಹಮ್ಮದುಲ್ಲಾ ಬಾಂಗ್ಲಾ ತಂಡಕ್ಕೆ 9ನೇ ಯಶಸ್ಸು ತಂದುಕೊಟ್ಟರು.

ಕೊನೆಯ ಓವರ್​ನಲ್ಲಿ ಟೀಮ್ ಇಂಡಿಯಾಗೆ 20 ರನ್​ಗಳ ಅವಶ್ಯಕತೆಯಿತ್ತು. ಮುಸ್ತಫಿಜುರ್ ರೆಹಮಾನ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ರೋಹಿತ್ ಶರ್ಮಾ ಯಾವುದೇ ರನ್​ಗಳಿಸಿಲ್ಲ. 2ನೇ ಎಸೆತವನ್ನು ಆಫ್​ ಸೈಡ್​ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು. ಆದರೆ 4ನೇ ಎಸೆತದಲ್ಲಿ ಮುಸ್ತಫಿಜುರ್ ಯಾವುದೇ ರನ್ ನೀಡಲಿಲ್ಲ. ಕೊನೆಯ 2 ಎಸೆತಗಳಲ್ಲಿ 12 ರನ್​ಗಳು ಬೇಕಿತ್ತು. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್​ಮ್ಯಾನ್.

ಆದರೆ ಕೊನೆಯ ಎಸೆತವನ್ನು ಯಾರ್ಕರ್ ಎಸೆಯುವ ಮೂಲಕ ಮುಸ್ತಫಿಜುರ್ ರೆಹಮಾನ್ ಬಾಂಗ್ಲಾದೇಶ್ ತಂಡಕ್ಕೆ 5 ರನ್​ಗಳ ಜಯ ತಂದುಕೊಟ್ಟರು. ಇತ್ತ ಅಂತಿಮ ಹಂತದಲ್ಲಿ ಕೇವಲ 28 ಎಸೆತಗಳಲ್ಲಿ ಅಜೇಯ 51 ರನ್​ ಬಾರಿಸಿದ ರೋಹಿತ್ ಶರ್ಮಾ ಅವರ ಹೋರಾಟ ವ್ಯರ್ಥವಾಯಿತು.  ಈ ಗೆಲುವಿನೊಂದಿಗೆ ಬಾಂಗ್ಲಾದೇಶ್ ತಂಡವು ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.