
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗ ಟೆಸ್ಟ್ ಮತ್ತು ರೆಡ್ ಬಾಲ್ (ಕೆಂಪು ಚೆಂಡು) ಕ್ರಿಕೆಟ್ಗೆ ಹೊಸ ಚೈತನ್ಯ ನೀಡಲು ಸಜ್ಜಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಯುವ ಆಟಗಾರರನ್ನು ಟೆಸ್ಟ್ ಕ್ರಿಕೆಟ್ಗೆ ಸಿದ್ಧಪಡಿಸಲು ಬಿಸಿಸಿಐ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರಿಗೆ ನೀಡಲಾಗುತ್ತಿದೆ.
ಟೆಸ್ಟ್ ಕ್ರಿಕೆಟ್ನ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ವಿವಿಎಸ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಬಿಸಿಸಿಐ ಶೀಘ್ರದಲ್ಲೇ ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲಿದೆ. ಆ ಯೋಜನೆಗಳಾವುವು ಎಂದು ನೋಡುವುದಾದರೆ…
ಶ್ರೀಲಂಕಾ ಪ್ರವಾಸ: ಭಾರತದ ಅಂಡರ್-19 (U19) ಮತ್ತು ಅಂಡರ್-25 (U25) ತಂಡಗಳು ಶೀಘ್ರದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿವೆ. ವಿಶೇಷವೆಂದರೆ, ಈ ಸರಣಿಗಳು ಕೇವಲ ರೆಡ್ ಬಾಲ್ ಕ್ರಿಕೆಟ್ಗೆ ಸೀಮಿತವಾಗಿರಲಿವೆ. ಅಂದರೆ ಟೆಸ್ಟ್ ಕ್ರಿಕೆಟ್ ಆಡಲೆಂದೇ ಭಾರತದ ಕಿರಿಯರ ತಂಡಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಐಪಿಎಲ್ ನಂತರ ವಿಶೇಷ ಟೂರ್ನಿ: 2026ರ ಐಪಿಎಲ್ ಮುಗಿದ ತಕ್ಷಣ, ಜೂನ್ ಮತ್ತು ಜುಲೈ ತಿಂಗಳಲ್ಲಿ U25 ಆಟಗಾರರಿಗಾಗಿ ವಿಶೇಷ ರೆಡ್ ಬಾಲ್ ಟೂರ್ನಿ ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು, ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಪ್ರತಿಭೆಗಳ ಆಯ್ಕೆ: ಈ ಟೂರ್ನಿಗಾಗಿ ಸುಮಾರು 64 ಯುವ ಆಟಗಾರರನ್ನು ಗುರುತಿಸಲಾಗಿದೆ. ಸಿ.ಕೆ. ನಾಯುಡು ಟ್ರೋಫಿ ಮತ್ತು ರಣಜಿ ಟ್ರೋಫಿಯಲ್ಲಿ ಮಿಂಚಿದ ಆಟಗಾರರಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಆಯೂಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಉದಯೋನ್ಮುಖ ತಾರೆಗಳು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ತಜ್ಞರ ಮಾರ್ಗದರ್ಶನ: ಟೆಸ್ಟ್ ಕ್ರಿಕೆಟ್ನಲ್ಲಿ ಯುವ ಆಟಗಾರರ ಕೌಶಲ್ಯ ಹೆಚ್ಚಿಸಲು ಝಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರಿಂದ ವಿಶೇಷ ಬೌಲಿಂಗ್ ಶಿಬಿರಗಳನ್ನು ಆಯೋಜಿಸಲು ಬಿಸಿಸಿಐ ಯೋಜಿಸಿದೆ.
ಕೇವಲ ಟಿ20 ಕ್ರಿಕೆಟ್ಗೆ ಮಾತ್ರ ಸೀಮಿತವಾಗದೆ, ಟೆಸ್ಟ್ ಕ್ರಿಕೆಟ್ನ ಸತ್ವವನ್ನು ಉಳಿಸಿಕೊಳ್ಳುವುದು ಬಿಸಿಸಿಐನ ಮೂಲ ಉದ್ದೇಶವಾಗಿದೆ. ಮುಂದಿನ ದಶಕದಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಬಲಿಷ್ಠ ಬೆನ್ನೆಲುಬನ್ನು ನಿರ್ಮಿಸಲು ಈ ‘ರೆಡ್ ಬಾಲ್ ಪೂಲ್’ ಸಹಾಯ ಮಾಡಲಿದೆ.
ಇದನ್ನೂ ಓದಿ: ಸಿರಾಜ್ ಮಾಡಿದ ತಪ್ಪಿನಿಂದಾಗಿ ಸೋತ ಗುಜರಾತ್ ಟೈಟಾನ್ಸ್
ಒಟ್ಟಾರೆಯಾಗಿ, ಬಿಸಿಸಿಐನ ಈ ‘ಮಿಷನ್ ರೆಡ್ ಬಾಲ್’ ಭಾರತೀಯ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ಗೆ ಬಲಿಷ್ಠ ಟೀಮ್ ಇಂಡಿಯಾವನ್ನು ರೂಪಿಸಲು ಬಿಸಿಸಿಐ ಭರ್ಜರಿ ಪ್ಲ್ಯಾನ್ಗಳನ್ನು ರೂಪಿಸುತ್ತಿದೆ.