IPL 2026: ಚೊಚ್ಚಲ ಪಂದ್ಯದಲ್ಲಿ ಸೂರ್ಯನ ವಿಕೆಟ್ ಕಿತ್ತ ಸಿಎಸ್​ಕೆ ವೇಗಿ ಐಪಿಎಲ್‌ನಿಂದ ಔಟ್

CSK Injury Crisis Deepens: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಯುವ ವೇಗಿ ರಾಮಕೃಷ್ಣ ಘೋಷ್ ಮುಂಬೈ ಇಂಡಿಯನ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಕಾಲಿನ ಗಾಯಕ್ಕೆ ತುತ್ತಾಗಿ ಇಡೀ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದು ಗಮನ ಸೆಳೆದಿದ್ದ ಘೋಷ್, ಸಿಎಸ್‌ಕೆಯ ಗಾಯದ ಸಮಸ್ಯೆ ಹೆಚ್ಚಿಸಿದ್ದಾರೆ. ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ, ಖಲೀಲ್ ಅಹ್ಮದ್ ಮತ್ತು ಎಂಎಸ್ ಧೋನಿ ಈಗಾಗಲೇ ಗಾಯದಿಂದ ಬಳಲುತ್ತಿದ್ದು, ತಂಡಕ್ಕೆ ದೊಡ್ಡ ಸವಾಲಾಗಿದೆ.

IPL 2026: ಚೊಚ್ಚಲ ಪಂದ್ಯದಲ್ಲಿ ಸೂರ್ಯನ ವಿಕೆಟ್ ಕಿತ್ತ ಸಿಎಸ್​ಕೆ ವೇಗಿ ಐಪಿಎಲ್‌ನಿಂದ ಔಟ್
Ramakrishna Ghosh

Updated on: May 03, 2026 | 9:52 PM

ಸ್ಟಾರ್ ಆಟಗಾರರ ಗಾಯದ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡಕ್ಕೆ ಮತ್ತೊಂದು ಘಾತ ಎದುರಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು, ಇತ್ತೀಚೆಗಷ್ಟೇ ಗೆಲುವಿನ ಲಯಕ್ಕೆ ಮರಳಿದ್ದ ಸಿಎಸ್​ಕೆ ತಂಡದಿಂದ ಯುವ ವೇಗಿಯೊಬ್ಬ ಹೊರಬಿದ್ದಿದ್ದಾನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದ ಯುವ ವೇಗಿ ರಾಮಕೃಷ್ಣ ಘೋಷ್ (Ramakrishna Ghosh) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇದರ ಪರಿಣಾಮವಾಗಿ ಅವರು ಇಡೀ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಸಿಎಸ್​ಕೆ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಸಿಎಸ್​ಕೆಗೆ ಗಾಯದ ಸಮಸ್ಯೆ

ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರಬಿದ್ದ ಮೊದಲ ಸಿಎಸ್​ಕೆ ಆಟಗಾರ ರಾಮಕೃಷ್ಣ ಘೋಷ್ ಅಲ್ಲ. ಅವರಿಗೂ ಮೊದಲು ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇವರುಗಳ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಕೂಡ ಗಾಯದಿಂದಾಗಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಧೋನಿ ಐಪಿಎಲ್​ನಿಂದ ಹೊರಬಿದ್ದಿಲ್ಲವಾದರೂ ಅವರು ಆಡುವುದು ಕೂಡ ಅನುಮಾನವಾಗಿದೆ. ಇದೆಲ್ಲದರ ನಡುವೆ ರಾಮಕೃಷ್ಣ ಗಾಯದಿಂದ ಐಪಿಎಲ್ ತೊರೆದಿರುವುದು ಸಿಎಸ್​ಕೆಗೆ ನುಂಗಲಾರದ ತುತ್ತಾಗಿದೆ.

ಚೊಚ್ಚಲ ಪಂದ್ಯದ ಬಳಿಕ ಔಟ್

ವಾಸ್ತವವಾಗಿ ಐಪಿಎಲ್ 2026 ರ 45ನೇ ಪಂದ್ಯ ಚೆಪಾಕ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್, ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು. ಇದು ರಾಮಕೃಷ್ಣ ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲೇ ಸ್ಟಾರ್ ಬ್ಯಾಟರ್​ನ ವಿಕೆಟ್​ ಕಿತ್ತು ಸಂಭ್ರಮಿಸಿದ್ದ ರಾಮಕೃಷ್ಣ ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಪಂದ್ಯದ ಸಮಯದಲ್ಲಿ ರಾಮಕೃಷ್ಣ ಘೋಷ್ ಅವರ ಬಲಗಾಲಿನ ಮೂಳೆ ಮುರಿತಗೊಂಡಿದೆ ಎಂದು ಸಿಎಸ್​ಕೆ ಫ್ರಾಂಚೈಸಿ, ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಗಾಯದಿಂದಾಗಿ ಅವರು ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

CSK vs GT: ತವರಿನಲ್ಲೇ ಮಂಕಾದ ಸಿಎಸ್​ಕೆ; ಗುಜರಾತ್​ಗೆ 8 ವಿಕೆಟ್​ ಜಯ

ಸೂರ್ಯನ ವಿಕೆಟ್ ಪಡೆದಿದ್ದ ರಾಮಕೃಷ್ಣ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 2 ರಂದು ಈ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್ ಮೂರು ಓವರ್‌ಗಳನ್ನು ಬೌಲಿಂಗ್ ಮಾಡಿ ಒಟ್ಟು 24 ರನ್‌ಗಳನ್ನು ನೀಡಿ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಮುಂಬರುವ ಪಂದ್ಯಗಳಲ್ಲಿ ಅವರು ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಬಲಪಡಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಅವರ ಚೊಚ್ಚಲ ಪಂದ್ಯದ ಒಂದು ದಿನದ ನಂತರ ಈ ಗಾಯವು ಅವರಿಗೆ ಮತ್ತು ತಂಡಕ್ಕೆ ಭಾರಿ ನಿರಾಶೆಯನ್ನುಂಟುಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Sun, 3 May 26

Follow Us