IPL 2025: ಸಿಎಸ್ಕೆ ತಂಡದಿಂದ ಹೊರಬಿದ್ದ ಯುವ ಆಟಗಾರ; ಬದಲಿಯಾಗಿ ಬಂದಿದ್ಯಾರು?
CSK IPL 2025: ಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳಪೆ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ನಡುವೆ ತಂಡದ ಯುವ ಆಟಗಾರ ವಂಶ್ ಬೇಡಿ ಗಾಯಗೊಂಡಿದ್ದರಿಂದ, 28 ಎಸೆತಗಳಲ್ಲಿ ಶತಕ ಬಾರಿಸಿದ ಉರ್ವಿಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉರ್ವಿಲ್ ಪಟೇಲ್ ಅವರು ಟಿ20 ಮತ್ತು ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಐಪಿಎಲ್ 2025 (IPL 2025) ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರದರ್ಶನ ತುಂಬಾ ಕಳಪೆಯಾಗಿದೆ. ಆಡಿರುವ 11 ಪಂದ್ಯಗಳಲ್ಲಿ 9 ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದೀಗ ಸಿಎಸ್ಕೆ ತಂಡಕ್ಕೆ ಕೇವಲ 3 ಔಪಚಾರಿಕ ಪಂದ್ಯಗಳು ಉಳಿದಿವೆ. ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರನೊಬ್ಬ ಗಾಯದ ಕಾರಣದಿಂದಾಗಿ ಉಳಿದ ಸೀಸನ್ನಿಂದ ಹೊರಗುಳಿದಿದ್ದು ಅವನ ಬದಲಿಯಾಗಿ 28 ಎಸೆತಗಳಲ್ಲಿ ಶತಕ ಬಾರಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಉರ್ವಿಲ್ ಪಟೇಲ್ (Urvil Patel) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಸಿಎಸ್ಕೆ ತಂಡಕ್ಕೆ ಬದಲಿಯಾಗಿ ಬಂದಿದ್ಯಾರು?
ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವಂಶ್ ಬೇಡಿ ಗಾಯದಿಂದಾಗಿ ಐಪಿಎಲ್ 2025 ರಿಂದ ಹೊರಗುಳಿದಿದ್ದಾರೆ. ಎಡಗಾಲಿನ ಗಾಯದ ಕಾರಣ ವಂಶ್ ಬೇಡಿ ತಂಡವನ್ನು ತೊರೆಯಬೇಕಾಯಿತು. ಈ ಸೀಸನ್ನಲ್ಲಿ ಅವರಿಗೆ ಇನ್ನೂ ತಂಡದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಅವರ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಪರ ಆಡುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಉರ್ವಿಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 2024-25ರ ಭಾರತದ ದೇಶೀಯ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉರ್ವಿಲ್ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.
Say Yellove to Urvil Patel! 💪🏻💛
PS: This young lion has the joint fastest 💯 in the Syed Mushtaq Ali Trophy to his credit!
Roar loud and proud, Urvil! 🦁🥳#WhistlePodu #Yellove 🦁💛 pic.twitter.com/hxyOzWVSnP
— Chennai Super Kings (@ChennaiIPL) May 5, 2025
ಇಂದೋರ್ನಲ್ಲಿ ನಡೆದಿದ್ದ 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ತ್ರಿಪುರ ವಿರುದ್ಧ ಉರ್ವಿಲ್ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂಲಕ ಟಿ20ಯಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತದ ಪರ ಲಿಸ್ಟ್ ಎ ನಲ್ಲಿ ಅತಿ ವೇಗದ ಶತಕ ಗಳಿಸಿದ ಆಟಗಾರ ಎನಿಸಿಕೊಂಡಿರುವ ಉರ್ವಿಲ್, 2023 ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದರು. ಉರ್ವಿಲ್ ಪಟೇಲ್ ಇದುವರೆಗೆ 47 ಟಿ20 ಪಂದ್ಯಗಳಲ್ಲಿ 26 ಸರಾಸರಿಯಲ್ಲಿ 1162 ರನ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧಶತಕಗಳು ಮತ್ತು 2 ಶತಕಗಳು ಸೇರಿವೆ.
CSK ಟ್ರಯಲ್ಸ್ನಲ್ಲಿ ಭಾಗಿ
ಇತ್ತೀಚೆಗೆ ಸಿಎಸ್ಕೆ ನಡೆಸಿದ ಮಧ್ಯ-ಸೀಸನ್ ಟ್ರಯಲ್ಸ್ನಲ್ಲಿ ಭಾಗವಹಿಸಿದ ಮೂವರು ಆಟಗಾರರಲ್ಲಿ ಉರ್ವಿಲ್ ಪಟೇಲ್ ಕೂಡ ಒಬ್ಬರಾಗಿದ್ದರು ಏಪ್ರಿಲ್ 27 ಮತ್ತು 28 ರಂದು ಚೆನ್ನೈನಲ್ಲಿ ನಡೆದ ಟ್ರಯಲ್ಸ್ಗೆ ಆಯುಷ್ ಮ್ಹಾತ್ರೆ ಮತ್ತು ಉರ್ವಿಲ್ ಪಟೇಲ್ ಅವರನ್ನು ಒಟ್ಟಿಗೆ ಕರೆಯಲಾಗಿತ್ತು. ಆದರೆ ನಾಯಕ ರುತುರಾಜ್ ಗಾಯಕ್ವಾಡ್ ಬದಲಿಗೆ ಉರ್ವಿಲ್ ಅವರನ್ನು ಕೈಬಿಟ್ಟು ಆಯುಷ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ವಂಶ್ ಬೇಡಿ ಬದಲಿಗೆ ಉರ್ವಿಲ್ ಪಟೇಲ್ಗೂ ತಂಡದಲ್ಲಿ ಅವಕಾಶ ಸಿಕ್ಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 pm, Mon, 5 May 25