
ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026 ಅನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಅತ್ಯಂತ ದುಬಾರಿ ತಂತ್ರದೊಂದಿಗೆ ಪ್ರಾರಂಭಿಸಿತು. ಆದರೆ ಮೊದಲ ಮೂರು ಪಂದ್ಯಗಳ ನಂತರ, ಈ ನಡೆ ಉಲ್ಟಾ ಹೊಡೆದಂತೆ ಕಾಣುತ್ತದೆ. ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪ್ರಮುಖ ವ್ಯಾಪಾರ ಒಪ್ಪಂದದಲ್ಲಿ ಸಿಎಸ್ಕೆ ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿಗೆ ಸಹಿ ಹಾಕಿತು. ಸಂಜು ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (₹18 ಕೋಟಿಗೆ ಉಳಿಸಿಕೊಂಡ) ಜೋಡಿಯನ್ನು ಬಳಸಿಕೊಂಡು ಎದುರಾಳಿ ಬೌಲರ್ಗಳನ್ನು ಬೆವರು ಸುರಿಸಬೇಕೆಂಬುದು ಆಡಳಿತ ಮಂಡಳಿಯ ಯೋಜನೆಯಾಗಿತ್ತು. ಅದರಂತೆ ₹36 ಕೋಟಿ ಮೌಲ್ಯದ ಈ ಆರಂಭಿಕ ಜೋಡಿಯ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಭಾನುವಾರದ ಪಂದ್ಯದಲ್ಲಿ, ಎಸ್ಕೆ ತಂಡವು 251 ರನ್ಗಳ ಕಠಿಣ ಗುರಿಯನ್ನು ಎದುರಿಸಿತು. ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಲವಾದ ಆರಂಭದ ಅಗತ್ಯವಿತ್ತು, ಆದರೆ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಮತ್ತೊಮ್ಮೆ ನಿರಾಶೆಗೊಳಿಸಿತು.
ನಾಯಕ ರುತುರಾಜ್ ಕೇವಲ 7 ರನ್ಗಳಿಗೆ ಔಟಾದರು, ಸಂಜು ಸ್ಯಾಮ್ಸನ್ ಕೇವಲ 9 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರ ಕಳಪೆ ಪ್ರದರ್ಶನದೊಂದಿಗೆ, ಎಸ್ಕೆ ತಂಡದ ಪವರ್ಪ್ಲೇ ಸಂಪೂರ್ಣ ವಿಫಲವಾಯಿತು ಮತ್ತು ತಂಡವು ಪಂದ್ಯದ ಆರಂಭದಲ್ಲಿಯೇ ರೇಸ್ನಿಂದ ಹೊರಬಿತ್ತು.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸಿಎಸ್ಕೆ ತಂಡದ ಮೊದಲ ಪಂದ್ಯದಲ್ಲೂ ಈ ಜೋಡಿ ವಿಫಲವಾಯಿತು. ಇಬ್ಬರೂ ಬ್ಯಾಟ್ಸ್ಮನ್ಗಳು ತಲಾ 6 ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಸ್ಯಾಮ್ಸನ್ 7 ರನ್ಗಳಿಗೆ ಮತ್ತು ರುತುರಾಜ್ 28 ರನ್ಗಳಿಗೆ ಔಟಾದರು. ಪರಿಣಾಮವಾಗಿ, ಈ ಜೋಡಿ ಮೊದಲ ಮೂರೂ ಪಂದ್ಯದಲ್ಲಿ ಸಂಪೂರ್ಣ ವಿಫಲವಾಗಿದೆ.
RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?
ಐಪಿಎಲ್ 2026 ರ ಮೊದಲ ಮೂರು ಪಂದ್ಯಗಳನ್ನು ನೋಡಿದರೆ, ಈ 36 ಕೋಟಿ ರೂಪಾಯಿ ಜೋಡಿ ತಂಡದ ಅತಿದೊಡ್ಡ ದೌರ್ಬಲ್ಯವಾಗಿ ಹೊರಹೊಮ್ಮಿದೆ. ಚೆನ್ನೈನ ಎಲ್ಲೋ ಜೆರ್ಸಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸುವ ನಿರೀಕ್ಷೆಯಿದ್ದ ಸಂಜು ಸ್ಯಾಮ್ಸನ್ ಇಲ್ಲಿಯವರೆಗೆ ರನ್ ಗಳಿಸಲು ಪರದಾಡಿದ್ದಾರೆ.
ಏತನ್ಮಧ್ಯೆ, ನಾಯಕ ಗಾಯಕ್ವಾಡ್ ಮೇಲಿನ ಹೆಚ್ಚಿನ ಧಾರಣ ವೆಚ್ಚ ಮತ್ತು ನಾಯಕತ್ವದ ಒತ್ತಡವು ಅವರ ಬ್ಯಾಟಿಂಗ್ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ತಂಡದ ಅಗ್ರ ಕ್ರಮಾಂಕದ ಕುಸಿತವು ಮಧ್ಯಮ ಕ್ರಮಾಂಕದ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಇದು ಸಿಎಸ್ಕೆ ಗೆಲುವಿನ ಹಾದಿಯನ್ನು ಹೆಚ್ಚು ಕಷ್ಟಕರವಾಗಿಸಿದೆ. ಇವೆಲ್ಲದರ ಜೊತೆಗೆ ಅನುಭವಿ, ಮಾಜಿ ನಾಯಕ ಎಂಎಸ್ ಧೋನಿ ಅವರ ಅಲಭ್ಯತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಇಂಜುರಿಯಿಂದ ಗುಣಮುಖರಾಗಿ ಧೋನಿ ಮುಂದಿನ ಪಂದ್ಯಕ್ಕಾದರೂ ಲಭ್ಯರಿರುತ್ತಾರಾ?, ಸಿಎಸ್ಕೆ ಗೆಲುವಿನ ಲಯಕ್ಕೆ ಮರಳುತ್ತ ಎಂಬುದು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ