ಬೆಂಗಳೂರು (ಮಾ. 25): ಇಂಡಿಯನ್ ಪ್ರೀಮಿಯರ್ ಲೀಗ್ 18 ನೇ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವಿನೊಂದಿಗೆ ಭರ್ಜರಿ ಆರಂಭ ಮಾಡಿದೆ. ಈ ಋತುವಿನ ಮೊದಲ ಪಂದ್ಯದಲ್ಲಿ ಆರ್ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ಗಳಿಂದ ಜಯಗಳಿಸಿತ್ತು. ಈಗ ರಜತ್ ಪಾಟಿದರ್ ನೇತೃತ್ವದ ಆರ್ಸಿಬಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತನ್ನ ಮುಂದಿನ ಪಂದ್ಯಕ್ಕೆ ಅಭ್ಯಾಸವನ್ನು ಪ್ರಾರಂಭಿಸಿದೆ. ಆರ್ಸಿಬಿಯ ಮುಂದಿನ ಪಂದ್ಯವು ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲಲೇಬೇಕೆಂದು ಯೋಜನೆ ಹಾಕಿಕೊಂಡಿರುವ ಬೆಂಗಳೂರು ತಂಡ, ಎಲ್ಲ ರೀತಿಯಿಂದಲೂ ತಯಾರಿ ನಡೆಸುತ್ತಿದೆ.
ಕಳೆದ ಪಂದ್ಯದಲ್ಲಿ ಆರ್ಸಿಬಿ ಪರ ಸ್ಟಾರ್ ಬೌಲರ್, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿಲ್ಲ. ಭುವಿ ಸಣ್ಣ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ಆರ್ಸಿಬಿ ಈ ಕುರಿತು ಟ್ವೀಟ್ ಕೂಡ ಮಾಡಿತ್ತು. ಇದೀಗ ಎರಡನೇ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಭುವನೇಶ್ವರ್ ಫಿಟ್ ಆಗಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ ಅವರು ಚೆನ್ನೈ ವಿರುದ್ಧ ಕಣಕ್ಕಿಳಿಯುವುದು ಅನುಮಾನ.
ಆರ್ಸಿಬಿ ಭುವನೇಶ್ವರ್ ಕುಮಾರ್ ಅವರನ್ನು ಕಣಕ್ಕಿಳಿಸಲು ವಿಳಂಬಗೊಳಿಸುವ ಸಾಧ್ಯತೆ ಇದೆ. ಚೆಪಾಕ್ನಲ್ಲಿ ಸ್ಪಿನ್ ಸ್ನೇಹಿ ಪಿಚ್ ಆಗಿದ್ದು, ವೇಗಿಗಳಿಗೆ ಅನುಕೂಲಕರವಾಗಿಲ್ಲ. ಕಳೆದ ಮುಂಬೈ-ಚೆನ್ನೈ ನಡುವಣ ಪಂದ್ಯದಲ್ಲಿ ಕೂಡ ಚೆಪಾಕ್ನಲ್ಲಿ ಸ್ಪಿನ್ನರ್ಗಳು ಮೇಲುಗೈ ಸಾಧಿಸಿದ್ದರು. ವಿಶೇಷವಾಗಿ ನೂರ್ ಅಹ್ಮದ್ ಇತರ ವೇಗಿಗಳಿಗಿಂತ ಹೆಚ್ಚಿನ ಯಶಸ್ಸನ್ನು ಕಂಡರು. ಇದಲ್ಲದೆ, ಚೆನ್ನೈನಲ್ಲಿನ ಪರಿಸ್ಥಿತಿಗಳು “ಸ್ವಿಂಗ್ ಕಿಂಗ್” ಭುವಿಗೆ ಯಾವುದೇ ಸಹಾಯ ಮಾಡುವುದಿಲ್ಲ.
ಈ ಪಂದ್ಯಕ್ಕೆ ಆರ್ಸಿಬಿ ಭುವಿ ಬದಲು ಹೆಚ್ಚುವರಿ ಸ್ಪಿನ್ನರ್ ಆಡಿಸುವುದು ಉತ್ತಮ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಅಲ್ಲದೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭುವನೇಶ್ವರ್ ಆಡಿದ 13 ಪಂದ್ಯಗಳಲ್ಲಿ ಕೇವಲ 7 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರಷ್ಟೆ. ಸರಾಸರಿ 54.14, 8.42 ರ ಎಕಾನಮಿ ದರದಲ್ಲಿ 379 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ.
Riyan Parag: ಸತತ ಎರಡು ಸೋಲಿನ ಬಳಿಕ ರಿಯಾನ್ ಪರಾಗ್ ಪೋಸ್ಟ್ ಮ್ಯಾಚ್ ವೇಳೆ ಏನು ಹೇಳಿದ್ರು ನೋಡಿ
ಚೆನ್ನೈನಲ್ಲಿ ಭುವನೇಶ್ವರ್ ಅವರನ್ನು ಆಡಿಸುವ ಬದಲು, ಆರ್ಸಿಬಿ ಕೆಕೆಆರ್ ವಿರುದ್ಧ ಫೀಲ್ಡಿಂಗ್ ಮಾಡಿದ ಅದೇ ಬೌಲಿಂಗ್ ಲೈನ್ಅಪ್ನೊಂದಿಗೆ ಮುಂದುವರಿಯುವುದು ಉತ್ತಮ. ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಯಶ್ ದಯಾಳ್ ಮುಂತಾದವರು ಅನುಭವಿ ವೇಗಿಗಿಂತ ಈ ಸ್ಥಳದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುವ ಸಾಧ್ಯತೆ ಇದೆ. ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಟಿಮ್ ಡೇವಿಡ್ನಂತಹ ಅರೆಕಾಲಿಕ ಸ್ಪಿನ್ನರ್ಗಳು ಸಹ ಈ ಪಿಚ್ನಲ್ಲಿ ತಂಡಕ್ಕೆ ಉತ್ತಮ ಉಪಯೋಗಕ್ಕೆ ಬರಬಹುದು.
ಇದಲ್ಲದೆ, ಮಧ್ಯಮ ವೇಗಿಯಾಗಿರುವ ರಸಿಕ್ ಸಲಾಂ ಅವರಂತಹ ಆಟಗಾರ ಭುವಿಗಿಂತ ಆ ಮೇಲ್ಮೈಯಲ್ಲಿ ಹೆಚ್ಚು ಪರಿಣಾಮಕಾರಿ ಆಗಲಿದ್ದಾರೆ. ವೇಗದ ವಿಷಯದಲ್ಲಿ ಯಶ್ ದಯಾಳ್ ಮತ್ತು ಜೋಶ್ ಹ್ಯಾಜಲ್ವುಡ್ ಆರ್ಸಿಬಿಗೆ ಇದ್ದಾರೆ. ಹೀಗಾಗಿ ಸಿಎಸ್ಕೆ ವಿರುದ್ಧ ಆಡುವ XI ನಿಂದ ಭುವನೇಶ್ವರ್ ಅವರನ್ನು ಹೊರಗಿಡುವ ಎಲ್ಲ ಲಕ್ಷಣ ಕಾಣುತ್ತಿದೆ.
ಅನುಭವಿ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇದುವರೆಗೆ ಐಪಿಎಲ್ನಲ್ಲಿ 176 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 181 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 19 ರನ್ಗಳಿಗೆ 5 ವಿಕೆಟ್ ಪಡೆದಿರುವುದು. ಕಳೆದ ಋತುವಿನವರೆಗೂ ಅವರು ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅವರನ್ನು ಆರ್ಸಿಬಿ 10.75 ಕೋಟಿ ರೂ. ಗೆ ಭುವಿಯನ್ನು ಖರೀದಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ