
2025 ರ ಟಿ20 ಏಷ್ಯಾಕಪ್ಗೆ (Asia Cup 2025) ಟೀಂ ಇಂಡಿಯಾ ಇದೇ ಸೆಪ್ಟೆಂಬರ್ 4 ರಂದು ಯುಎಇಗೆ ತೆರಳಲಿದೆ. ಈ ಟೂರ್ನಿಗಾಗಿ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 15 ಆಟಗಾರರು ಏಷ್ಯಾಕಪ್ ತಂಡದಲಿದ್ದರೆ, ಉಳಿದ ಐವರು ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೀಸಲು ಆಟಗಾರರಲ್ಲಿ ಸ್ಥಾನ ಪಡೆದಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ (Dhruv Jurel) ಡೆಂಗ್ಯೂ ಸೋಂಕಿಗೆ ಒಳಗಾಗಿದ್ದಾರೆ. ಈ ಕಾರಣದಿಂದಾಗಿ ಜುರೇಲ್ ಪ್ರಸ್ತುತ ನಡೆಯುತ್ತಿರುವ ದೇಶಿ ಟೂರ್ನಿ ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಸೆಪ್ಟೆಂಬರ್ 4 ರಿಂದ ದುಲೀಪ್ ಟ್ರೋಫಿಯ ಸೆಮಿಫೈನಲ್ ಸುತ್ತು ಆರಂಭವಾಗಲಿದೆ. ಈ ಸುತ್ತಿನಲ್ಲಿ ದ್ರುವ್ ಜುರೇಲ್ ಕೇಂದ್ರ ವಲಯ ತಂಡವನ್ನು ನಾಯಕನಾಗಿ ಮುನ್ನಡೆಸಬೇಕಿತ್ತು. ಆದರೀಗ ಡೆಂಗ್ಯೂ ಇಂದ ಬಳಲುತ್ತಿರುವ ಜುರೇಲ್ ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ದುಲೀಪ್ ಟ್ರೋಫಿಯ ಸೆಮಿಫೈನಲ್ನಂತಹ ಪ್ರಮುಖ ಪಂದ್ಯದಲ್ಲಿ ಧ್ರುವ್ ಜುರೆಲ್ ಆಡದಿರುವುದು ಕೇಂದ್ರ ವಲಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ವಾಸ್ತವವಾಗಿ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿಯೂ ಧ್ರುವ್ ಜುರೆಲ್ ಆಡಿರಲಿಲ್ಲ. ಆ ಸಮಯದಲ್ಲಿ ಜುರೇಲ್ ತೊಡೆಸಂದು ಗಾಯದಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಧ್ರುವ್ ಜುರೆಲ್ ಬದಲಿಗೆ ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್ ಅವರನ್ನು ಕೇಂದ್ರ ವಲಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮೇಲೆ ಹೇಳಿದಂತೆ ಧ್ರುವ್ ಜುರೆಲ್ ಅವರನ್ನು ಏಷ್ಯಾಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದಾಗ್ಯೂ ಜುರೇಲ್ ಅವರ ಅನಾರೋಗ್ಯ ತಂಡದ ಅಭಿಯಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಮೀಸಲು ಆಟಗಾರರಿಗೆ ಆಯ್ಕೆಯಾಗಿರುವ ಯಾರೂ ಕೂಡ ಮುಖ್ಯ ತಂಡದೊಂದಿಗೆ ಯುಎಇಗೆ ಹೋಗುವುದಿಲ್ಲ. ಆದರೆ ಏಷ್ಯಾಕಪ್ಗೆ ಆಯ್ಕೆ ಮಾಡಲಾದ 15 ಸದಸ್ಯರ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಮಾತ್ರ ಈ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ಕನ್ನಡಿಗನಿಗೆ ದುಲೀಪ್ ಟ್ರೋಫಿಯಿಂದ ಗೇಟ್ಪಾಸ್
ಕೇಂದ್ರ ವಲಯ ತಂಡ: ರಜತ್ ಪಾಟಿದಾರ್ (ನಾಯಕ), ರಿಯಾನ್ ಜುಲ್, ಡ್ಯಾನಿಶ್ ಮಾಲೆವಾರ್, ಸಂಜೀತ್ ದೇಸಾಯಿ, ಯಶ್ ಠಾಕೂರ್, ಆದಿತ್ಯ ಠಾಕ್ರೆ, ದೀಪಕ್ ಚಾಹರ್, ಅಕ್ಷಯ್ ವಾಡ್ಕರ್, ಎ ಸರಾಂಶ್ ಜೈನ್, ಆಯುಷ್ ಪಾಂಡೆ, ಶುಭಂ ಶರ್ಮಾ, ಯಶ್ ರಾಥೋಡ್, ಹರ್ಷ್ ದುಬೆ, ಮಾನವ್ ಸುತಾರ್ ಮತ್ತು ಖಲೀಲ್ ಅಹ್ಮದ್
ಸ್ಟ್ಯಾಂಡ್ಬೈ ಆಟಗಾರರು: ಮಹಿಪಾಲ್ ಲೊಮ್ರೋರ್, ಮಾಧ್ವ ಕೌಶಿಕ್, ಯುವರಾಜ್ ಚೌಧರಿ, ಕುಲದೀಪ್ ಸೇನ್ ಮತ್ತು ಉಪೇಂದ್ರ ಯಾದವ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ