
2025 ರ ಏಷ್ಯಾಕಪ್ನಲ್ಲಿ (Asia Cup 2025) ಗುಂಪು ಹಂತದ ಕೊನೆಯ ಪಂದ್ಯ ಇಂದು ಭಾರತ ಮತ್ತು ಒಮಾನ್ (India vs Oman) ನಡುವೆ ನಡೆಯಲಿದೆ. ಎರಡೂ ತಂಡಗಳು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯವು ಈಗಾಗಲೇ ಸೂಪರ್ ಫೋರ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾಗೆ ಕೇವಲ ಅಭ್ಯಾಸ ಪಂದ್ಯವಾಗಿದ್ದರೆ, ಇತ್ತ ಒಮಾನ್ ತಂಡ ಈಗಾಗಲೇ ಸೂಪರ್ ಫೋರ್ ರೇಸ್ನಿಂದ ಹೊರಬಿದ್ದಿದೆ. ಪರಿಣಾಮವಾಗಿ, ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಗಳಾಗುವುದು ಖಚಿತವಾಗಿದ್ದು, ಇದಕ್ಕೆ ಪೂರಕವಾಗಿ ಅಭ್ಯಾಸಕ್ಕೆ ತಂಡದ ಪ್ರಮುಖ 6 ಆಟಗಾರರು ಗೈರಾಗಿದ್ದಾರೆ.
ವಾಸ್ತವವಾಗಿ ಒಮಾನ್ ವಿರುದ್ಧದ ಗುಂಪು ಹಂತದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ನಡೆಸಿತು. ಇದರಲ್ಲಿ ತಂಡದ ಒಂಬತ್ತು ಆಟಗಾರರು ಮಾತ್ರ ಭಾಗವಹಿಸಿದ್ದರು. ಆದಾಗ್ಯೂ, ಜಸ್ಪ್ರೀತ್ ಬುಮ್ರಾ, ಶಿವಂ ದುಬೆ, ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಪ್ರಮುಖ ಆಟಗಾರರು ಈ ಅಭ್ಯಾಸ ಕ್ಕೆ ಗೈರುಹಾಜರಾಗಿದ್ದರು. ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸಾಮಾನ್ಯವಾಗಿ ಅಭ್ಯಾಸ ಅವಧಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ, ಆದರೆ ಈ ಬಾರಿ ಇಬ್ಬರೂ ಸಹ ಗೈರುಹಾಜರಾಗಿದ್ದರು.
ಏತನ್ಮಧ್ಯೆ, ಯುವ ವೇಗಿ ಹರ್ಷಿತ್ ರಾಣಾ ಐಚ್ಛಿಕ ಅಭ್ಯಾಸ ಅವಧಿಯಲ್ಲಿ ಎಲ್ಲರ ಗಮನ ಸೆಳೆದರು. ಅವರು ತಮ್ಮ ಬೌಲಿಂಗ್ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ಸಾಕಷ್ಟು ಪ್ರಯತ್ನ ಮಾಡಿದರು. ಅವರ ಕಠಿಣ ಪರಿಶ್ರಮವನ್ನು ಗಮನಿಸಿದರೆ, ಒಮಾನ್ ವಿರುದ್ಧದ ಪಂದ್ಯಕ್ಕೆ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಳಿಸುವ ಸಾಧ್ಯತೆಗಳಿವೆ. ಅವರು ಈ ಟೂರ್ನಮೆಂಟ್ನಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ, ಆದ್ದರಿಂದ ಆಡುವ ಹನ್ನೊಂದರ ಬಳಗದಲ್ಲಿ ಅವರಿಗೆ ಸ್ಥಾನ ಸಿಗಬಹುದು.
Asia Cup 2025: ಕ್ರಮ ಕೈಗೊಳ್ಳದಿದ್ದರೆ ಏಷ್ಯಾಕಪ್ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ
ಈ ಅಭ್ಯಾಸದಲ್ಲಿ ವೇಗಿ ಅರ್ಷದೀಪ್ ಸಿಂಗ್ ಕೂಡ ಭಾಗವಹಿಸಿದ್ದರು. ಭಾರತದ ಅತ್ಯಂತ ಯಶಸ್ವಿ ಟಿ20 ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಇನ್ನೂ ಆಡಲು ಅವಕಾಶ ಸಿಕ್ಕಿಲ್ಲ. ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಅವರಿಗೆ ಒಮಾನ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಅರ್ಷದೀಪ್ ಸಿಂಗ್ಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಏತನ್ಮಧ್ಯೆ, ಬ್ಯಾಟ್ಸ್ಮನ್ಗಳಾದ ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಕೂಡ ಅಭ್ಯಾಸ ಮಾಡಿದ್ದು, ಅವರೂ ಕೂಡ ಆಡುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ