
ಸೆಪ್ಟೆಂಬರ್ 14 ರಂದು ನಡೆದಿದ್ದ ಏಷ್ಯಾಕಪ್ (Asia Cup 2025) ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು (India vs Pakistan) ಏಳು ವಿಕೆಟ್ಗಳಿಂದ ಸೋಲಿಸಿತು. ಆದರೆ ಈ ಪಂದ್ಯ ತನ್ನ ಫಲಿತಾಂಶದಿಂದ ಚರ್ಚೆಯಾದ್ದುದ್ದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಕೈಕುಲುಕದೆ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿತ್ತು. ಇದರಿಂದ ಅಸಮಾಧಾನಗೊಂಡಿರುವ ಪಿಸಿಬಿ, ಟೀಂ ಇಂಡಿಯಾ ಬಗ್ಗೆ ಐಸಿಸಿಗೆ ದೂರು ನೀಡಿತ್ತು. ಇದೀಗ ಬಿಸಿಸಿಐ (BCCI) ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದೆ.
ಹ್ಯಾಂಡ್ಶೇಕ್ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಹತ್ವದ ಹೇಳಿಕೆ ನೀಡಿದ್ದು, ‘ಭಾರತದ ಗೆಲುವನ್ನು ಆಚರಿಸುವತ್ತ ಎಲ್ಲರೂ ಗಮನಹರಿಸಬೇಕೆ ಹೊರತು ವಿವಾದದತ್ತ ಅಲ್ಲ. ಟೀಂ ಇಂಡಿಯಾ ಅದ್ಭುತ ಗೆಲುವು ಸಾಧಿಸಿದೆ ಎಂದು ನಾನು ಹೇಳಬಲ್ಲೆ. ಭಾರತ ಪಾಕಿಸ್ತಾನದ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ. ನಾವು ಅದನ್ನು ಆನಂದಿಸಬೇಕು. ಅದನ್ನು ಬಿಟ್ಟು ಯಾವುದೇ ದೇಶ ಸೃಷ್ಟಿಸಿದ ಗದ್ದಲಕ್ಕೆ ನಾವು ಗಮನ ಕೊಡಬಾರದು. ಅದರಿಂದ ನಾವು ತಲೆಕೆಡಿಸಿಕೊಳ್ಳಬಾರದು. ನಮ್ಮ ಆಟಗಾರರ ಉತ್ತಮ ಪ್ರದರ್ಶನಕ್ಕಾಗಿ ನಾವು ಅವರನ್ನು ಪ್ರಶಂಸಿಸಬೇಕು ಮತ್ತು ಹೆಮ್ಮೆಪಡಬೇಕು. ಈ ಗೆಲುವಿನ ಓಟವು ಈ ಪಂದ್ಯಾವಳಿಯ ಅಂತಿಮ ಪಂದ್ಯದವರೆಗೂ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತ್ರವಲ್ಲದೆ, ಬಿಸಿಸಿಐನ ಅಧಿಕಾರಿಯೊಬ್ಬರು ಈ ಬಗ್ಗೆ ಪಿಟಿಐಗೆ ತಿಳಿಸಿದ್ದು, ‘ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಕೈಕುಲುಕಲೇಬೇಕೆಂಬ ಯಾವುದೇ ಕಡ್ಡಾಯ ನಿಯಮವಿಲ್ಲ. ನೀವು ನಿಯಮ ಪುಸ್ತಕವನ್ನು ಓದಿದರೆ, ಎದುರಾಳಿ ತಂಡದೊಂದಿಗೆ ಕೈಕುಲುಕಲು ಅದರಲ್ಲಿ ಯಾವುದೇ ನಿಯಮ ಬರೆಯಲಾಗಿಲ್ಲ. ಇದು ಸಂವಹನದ ಒಂದು ಸಾಧನ ಮಾತ್ರ. ಹೀಗಾಗಿ ಈ ವಿಷಯದಲ್ಲಿ ಭಾರತ ತಂಡ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
IND vs PAK: ಟೀಂ ಇಂಡಿಯಾ ನಾಯಕನನ್ನು ಹಂದಿ ಎಂದು ಕರೆದು ತನ್ನದೇ ಕಾರಣ ನೀಡಿದ ಪಾಕ್ ಆಟಗಾರ
ಪಾಕಿಸ್ತಾನ ತಂಡವು ಇಂದು ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಯುಎಇ ವಿರುದ್ಧ ಆಡಬೇಕಾಗಿದೆ. ಈ ಪಂದ್ಯವನ್ನು ಗೆದ್ದರೆ ಪಾಕಿಸ್ತಾನ ಸೂಪರ್ -4 ಗೆ ಅರ್ಹತೆ ಪಡೆಯಬಹುದು. ಇದು ಸಾಧ್ಯವಾದರೆ, ಸೆಪ್ಟೆಂಬರ್ 21 ರಂದು ನಡೆಯಲಿರುವ ಸೂಪರ್ -4 ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಈ ಸೂಪರ್ -4 ಸುತ್ತಿನ ಪಂದ್ಯವು ಗ್ರೂಪ್ -ಎ ಯಿಂದ ಅರ್ಹತೆ ಪಡೆಯುವ ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಭಾರತ ಈಗಾಗಲೇ ಈ ಸುತ್ತಿಗೆ ಅರ್ಹತೆ ಪಡೆದಿದ್ದು, ಪಾಕಿಸ್ತಾನದ ಇಂದಿನ ಪ್ರದರ್ಶನದ ಮೇಲೆ ಅದರ ಸ್ಥಾನ ಖಚಿತವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ