ಕೋಟ್ಯಾಂತರ ಭಾರತೀಯರ ಕನಸನ್ನು ಟೀಂ ಇಂಡಿಯಾ (Team India) ಮತ್ತೊಮ್ಮೆ ನನಸು ಮಾಡಿದೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಕೊನೆಗೂ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡವು ಕಳೆದ 9 ತಿಂಗಳೊಳಗೆ ಎರಡನೇ ಟ್ರೋಫಿಯನ್ನು ಎತ್ತಿ ಹಿಡಿದಿದೆ. 2024 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ 12 ವರ್ಷಗಳ ನಂತರ ಮತ್ತೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಮಾರ್ಚ್ 9 ರ ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಟೀಂ ಇಂಡಿಯಾ ತನ್ನ ಅತ್ಯುತ್ತಮ ಬೌಲಿಂಗ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ಇನ್ನಿಂಗ್ಸ್ ಸಹಾಯದಿಂದ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತು. ಇದರೊಂದಿಗೆ, 25 ವರ್ಷಗಳ ಹಿಂದೆ ಇದೇ ಟೂರ್ನಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿತು. ಇದು ಮಾತ್ರವಲ್ಲದೆ ಈ ಗೆಲುವಿನೊಂದಿಗೆ ಅತ್ಯಧಿಕ ಬಾರಿ ಈ ಟ್ರೋಫಿ ಗೆದ್ದ ದಾಖಲೆಯನ್ನು ರೋಹಿತ್ ಪಡೆ ನಿರ್ಮಿಸಿತು.
ಸುಮಾರು 9 ತಿಂಗಳ ಹಿಂದೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ, ಟೀಂ ಇಂಡಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು, 11 ವರ್ಷಗಳ ಬರಗಾಲವನ್ನು ಕೊನೆಗೊಳಿಸಿತ್ತು. ಆ ಗೆಲುವು ಕಾಯುವಿಕೆಯನ್ನು ಕೊನೆಗೊಳಿಸಿದ್ದಲ್ಲದೆ, ಟೀಂ ಇಂಡಿಯಾದ ಹಸಿವನ್ನು ಹೆಚ್ಚಿಸಿತು. ಅದರ ಪರಿಣಾಮ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಡುಬಂದಿತು. ಇಡೀ ಟೂರ್ನಿಯಲ್ಲಿ ಸಾಂಘಿಕ ಪ್ರದರ್ಶನ ನೀಡಿದ ರೋಹಿತ್ ಪಡೆ ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಆರಂಭದಲ್ಲೇ ಭಾರತದ ಅಭಿಮಾನಿಗಳಿಗೆ ನಿರಾಸೆ ಎದುರಾಗಿತ್ತು. ಏಕೆಂದರೆ ಈ ಪಂದ್ಯದಲ್ಲೂ ನಾಯಕ ರೋಹಿತ್ ಶರ್ಮಾ ಟಾಸ್ ಸೋತರು. ಅದರ ಪರಿಣಾಮವಾಗಿ ನಿರೀಕ್ಷಿಸಿದಂತೆ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಕ್ಕೆ ಪೂರಕವಾಗಿ ಉತ್ತಮ ಆರಂಭವನ್ನು ಪಡೆದುಕೊಂಡ ಕಿವೀಸ್ ಪಡೆಯನ್ನು ಮತ್ತೊಮ್ಮೆ ಕಾಡಿದ್ದು, ಭಾರತೀಯ ಸ್ಪಿನ್ನರ್ಗಳು. ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಕಿವೀಸ್ ಆರಂಭಿಕರಿಗೆ ಭಾರತದ ಸ್ಪಿನ್ನರ್ಗಳು ದುಸ್ವಪ್ನವಾಗಿ ಕಾಡಿದರು. ಇದರ ಪರಿಣಾಮವೆಂಬಂತೆ ವರುಣ್ ಚಕ್ರವರ್ತಿ ಆರಂಭಿಕ ವಿಲ್ ಯಂಗ್ಗೆ ಪೆವಿಲಿಯನ್ ಹಾದಿ ತೋರಿಸಿದರೆ, ಕುಲ್ದೀಪ್ ತಮ್ಮ ಮೊದಲ ಎಸೆತದಲ್ಲೇ ರಚಿನ್ ರವೀಂದ್ರ ಅವರನ್ನು ಬೌಲ್ಡ್ ಮಾಡಿದರು. ಇದರ ನಂತರ ಮುಂದಿನ ಓವರ್ನಲ್ಲಿಯೇ ಅವರು ಕೇನ್ ವಿಲಿಯಮ್ಸನ್ ಅವರ ವಿಕೆಟ್ ಕೂಡ ಪಡೆದರು.
ಕೆಲವೇ ಎಸೆತಗಳ ಅಂತರದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿದ್ದ ಕಿವೀಸ್ ಪಡೆಗೆ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೀವ ತುಂಬುವ ಕೆಲಸ ಮಾಡಿದರು. ಆದರೆ ಟೀಂ ಇಂಡಿಯಾ, ಈ ಇಬ್ಬರು ಬ್ಯಾಟ್ಸ್ಮನ್ಗಳ ಕ್ಯಾಚ್ಗಳನ್ನು ಕೈಬಿಡದಿದ್ದರೆ ನ್ಯೂಜಿಲೆಂಡ್ ತಂಡವನ್ನು ಇನ್ನು ಸ್ವಲ್ಪ ಬೇಗನೇ ಕಟ್ಟಿಹಾಕಬಹುದಿತ್ತು. ಒಟ್ಟಾರೆಯಾಗಿ, ಈ ಫೈನಲ್ ಪಂದ್ಯದಲ್ಲಿ ಭಾರತ 4 ಕ್ಯಾಚ್ಗಳನ್ನು ಕೈಚೆಲ್ಲಿತು. ಆದರೂ, ಭಾರತದ ಸ್ಪಿನ್ನರ್ಗಳು ತಮ್ಮ ಬಿಗಿಯಾದ ಬೌಲಿಂಗ್ನಿಂದ ನ್ಯೂಜಿಲೆಂಡ್ ಪರಿಸ್ಥಿತಿಯ ಹೆಚ್ಚಿನ ಲಾಭ ಪಡೆಯಲು ಬಿಡಲಿಲ್ಲ. ಕೊನೆಯಲ್ಲಿ, ಮೈಕೆಲ್ ಬ್ರೇಸ್ವೆಲ್ ಕೇವಲ 40 ಎಸೆತಗಳಲ್ಲಿ 53 ರನ್ (ಅಜೇಯ) ಗಳಿಸಿ ತಂಡವನ್ನು 251 ರನ್ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಈ ಫೈನಲ್ನಲ್ಲಿ ಟೀಂ ಇಂಡಿಯಾ ತಮ್ಮ ನಾಯಕ ರೋಹಿತ್ ಅವರಿಂದ ದೊಡ್ಡ ಇನ್ನಿಂಗ್ಸ್ ಅನ್ನು ನಿರೀಕ್ಷಿಸಿತ್ತು ಮತ್ತು ಅದು ಅಗತ್ಯವಿತ್ತು ಕೂಡ. ಏಕೆಂದರೆ ಇಡೀ ಟೂರ್ನಿಯಲ್ಲಿ ರೋಹಿತ್ ಬ್ಯಾಟ್ನಿಂದ ಯಾವುದೇ ದೊಡ್ಡ ಇನ್ನಿಂಗ್ಸ್ ಮೂಡಿ ಬಂದಿರಲಿಲ್ಲ. ಹೀಗಾಗಿ ರೋಹಿತ್ ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿದ್ದವು. ಆದರೆ ಫೈನಲ್ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ರೋಹಿತ್ ಶರ್ಮಾ, ತಮ್ಮ ಆಕ್ರಮಣಕಾರಿ ಶೈಲಿಯಿಂದ ನ್ಯೂಜಿಲೆಂಡ್ ತಂಡವನ್ನು ಆರಂಭದಿಂದಲೇ ಪಂದ್ಯದಿಂದ ಹೊರಹಾಕುವ ಕೆಲಸ ಮಾಡಿದರು. ಎಂದಿನಂತೆ ರೋಹಿತ್ ತಮ್ಮ ಹೊಡಿಬಡಿ ಆಟದ ಮೂಲಕ ಅರ್ಧಶತಕ ಬಾರಿಸಿದ್ದು ಮಾತ್ರವಲ್ಲದೆ, ಶುಭ್ಮನ್ ಗಿಲ್ ಅವರೊಂದಿಗೆ ಶತಕದ ಜೊತೆಯಾಟವನ್ನು ನಡೆಸಿದರು.
ಆದರೆ ಯಾವುದೇ ತೊಂದರೆಯಿಲ್ಲದೆ ಸಾಗುತ್ತಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ಗೆ ಸ್ವಲ್ಪ ಸಮಯದಲ್ಲೇ ಶಾಕ್ ಕಾದಿತ್ತು. ಆರಂಭಿಕ ಗಿಲ್, ಫಿಲಿಪ್ಸ್ ಹಿಡಿದ ಅತ್ಯದ್ಭುತ ಕ್ಯಾಚ್ಗೆ ಪೆವಿಲಿಯನ್ ಸೇರಿಕೊಂಡರೆ, ಆ ನಂತರ ಬಂದ, ವಿರಾಟ್ ಕೊಹ್ಲಿ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಕೂಡ ವಿಕೆಟ್ ಕಳೆದುಕೊಂಡರು. ಇಲ್ಲಿಂದ ಅತ್ಯವಶ್ಯಕ ಜೊತೆಯಾಟ ಕಟ್ಟಿದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ 61 ರನ್ಗಳ ಪಾಲುದಾರಿಕೆಯೊಂದಿಗೆ ತಂಡವನ್ನು ಮರಳಿ ಗೆಲುವಿನ ಹಾದಿಗೆ ತಂದರು. ಶ್ರೇಯಸ್ 48 ರನ್ ಬಾರಿಸಿ ಅರ್ಧಶತಕ ವಂಚಿತರಾದರೆ, ಸ್ವಲ್ಪ ಸಮಯದ ನಂತರ ಅಕ್ಷರ್ ಪಟೇಲ್ ಕೂಡ ಪೆವಿಲಿಯನ್ ಸೇರಿಕೊಂಡರು. ಆದರೆ ಮತ್ತೊಮ್ಮೆ ಆಪತ್ಭಾಂದವನಂತೆ ಬಂದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಗೆಲುವಿಗೆ ಸ್ವಲ್ಪ ಮೊದಲು ಹಾರ್ದಿಕ್ ಔಟ್ ಆದರು. ಆದರೆ ರಾಹುಲ್ ಮತ್ತು ರವೀಂದ್ರ ಜಡೇಜಾ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕವೇ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Sun, 9 March 25