ನಾವು ಸೋತಿದ್ದು ಒಳ್ಳೆಯದೇ ಆಯ್ತು… RCB ನಾಯಕನ ಅಚ್ಚರಿಯ ಹೇಳಿಕೆ

IPL 2025 RCB vs SRH: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 65ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​​ಗಳಲ್ಲಿ 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19.5 ಓವರ್​ಗಳಲ್ಲಿ 189 ರನ್​ಗಳಿಸಿ 42 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ನಾವು ಸೋತಿದ್ದು ಒಳ್ಳೆಯದೇ ಆಯ್ತು... RCB ನಾಯಕನ ಅಚ್ಚರಿಯ ಹೇಳಿಕೆ
Jitesh Sharma

Updated on: May 24, 2025 | 9:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಮತ್ತು ಎಸ್​ಆರ್​​ಹೆಚ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಅಜೇಯ 94 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಎಸ್​ಆರ್​ಹೆಚ್ ತಂಡವು 20 ಓವರ್​ಗಳಲ್ಲಿ 231 ರನ್ ಕಲೆಹಾಕಿತು.

232 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ 43 ರನ್ ಬಾರಿಸಿದರೆ, ಫಿಲ್ ಸಾಲ್ಟ್ 62 ರನ್ ಸಿಡಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಪರಿಣಾಮ 19.5 ಓವರ್​ಗಳಲ್ಲಿ 189 ರನ್​ಗಳಿಸಿ ಆರ್​ಸಿಬಿ ತಂಡವು ಸರ್ವಪತನ ಕಂಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 42 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ಜಿತೇಶ್ ಶರ್ಮಾ, ಈ ಪಂದ್ಯದಲ್ಲಿ ನಾವು 20-30 ಹೆಚ್ಚುವರಿ ರನ್​ಗಳನ್ನು ನೀಡಿದ್ದು ನಮ್ಮ ಪಾಲಿಗೆ ದುಬಾರಿಯಾಯಿತು. ಇದೇ ಕಾರಣದಿಂದಾಗಿ ನಾವು ಸೋಲನುಭವಿಸಿದ್ದೇವೆ ಎಂದರು.

ಸನ್​ರೈಸರ್ಸ್ ಹೈದರಾಬಾದ್ ಬ್ಯಾಟರ್​ಗಳಿಗೆ ಹೋಲಿಸಿದರೆ, ನಮ್ಮ ಬ್ಯಾಟಿಂಗ್​ನಲ್ಲಿ ತೀವ್ರತೆ ಇರಲಿಲ್ಲ ಎಂಬುದು ನನ್ನ ಭಾವನೆ. ಅದರಲ್ಲೂ ನಾನು ಔಟಾದ ರೀತಿಯು ನನ್ನಲ್ಲಿ ತುಂಬಾ ನಿರಾಸೆ ಮೂಡಿಸಿದೆ. ಇನ್ನು ಗಾಯಗೊಂಡ ಟಿಮ್ ಡೇವಿಡ್ ಕೂಡ ಬ್ಯಾಟಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.

ಒಂದಾರ್ಥದಲ್ಲಿ ನಾವು ಈ ಪಂದ್ಯವನ್ನು ಸೋತಿದ್ದು ಒಳ್ಳೆಯದೇ ಆಯ್ತು ಅಂತ ನನಗನ್ನಿಸುತ್ತೆ. ಏಕೆಂದರೆ ಚೇಸಿಂಗ್ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಈ ತಪ್ಪುಗಳನ್ನು ತಿದ್ದಿ ಮುಂಬರುವ ಪಂದ್ಯಗಳಲ್ಲಿ ಉತ್ತಮ ರೀತಿಯಲ್ಲಿ ಪುಟಿದೇಳುತ್ತೇವೆ ಎಂಬ ವಿಶ್ವಾಸವಿದೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: IPL 2025: ಹೀಗಾದ್ರೆ RCB ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತೆ..!

ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲು ನಮ್ಮ ಪಾಲಿಗೆ ಒಳ್ಳೆಯದೇ. ಪ್ಲೇಆಫ್ ಪಂದ್ಯಗಳಿಗೂ ಮುನ್ನ ಇದು ಎಚ್ಚರಿಕೆಯ ಕರೆಗಂಟೆ. ಈಗ ಅನುಭವಿಸಿರುವ ಹಿನ್ನಡೆಯನ್ನು ಸರಿಪಡಿಸಿ ಮುಂದಿನ ಪಂದ್ಯಗಳಿಗಾಗಿ ಸಜ್ಜಾಗಬೇಕಿದೆ. ಈ ಮೂಲಕ ನಾವು ಮುಂದಿನ ಮ್ಯಾಚ್​ನಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಆರ್​ಸಿಬಿ ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಹೇಳಿದ್ದಾರೆ.