IPL 2025: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ RCB ಆಟಗಾರ ಡೌಟ್

IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ಲೇಆಫ್ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಣಕ್ಕಿಳಿದರೆ, ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.

IPL 2025: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ RCB ಆಟಗಾರ ಡೌಟ್
Rcb Team

Updated on: May 29, 2025 | 7:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-18ರ ಮೊದಲ ಕ್ವಾಲಿಫೈಯರ್ ಪಂದ್ಯವು ಇಂದು (ಮೇ 29) ನಡೆಯಲಿದೆ. ಚಂಡೀಗಢ್​ನ ಮುಲ್ಲನ್​​ಪುರ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ಪ್ರಮುಖ ಆಟಗಾರ ಟಿಮ್ ಡೇವಿಡ್ ಕಣಕ್ಕಿಳಿಯುವುದು ಅನುಮಾನ.

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಮಂಡಿರಜ್ಜು ನೋವಿಗೆ ಒಳಗಾಗಿದ್ದ ಡೇವಿಡ್ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದಾಗ್ಯೂ ಅವರು ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.

ಆದರೆ ಬುಧವಾರ ನಡೆದ ಅಭ್ಯಾಸದ ವೇಳೆ ಟಿಮ್ ಡೇವಿಡ್ ಕಾಣಿಸಿಕೊಂಡಿಲ್ಲ. ಅಂದರೆ ಅವರು ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಸಾಧ್ಯತೆಯಿಲ್ಲ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಿಂದಲೂ ಟಿಮ್ ಡೇವಿಡ್ ಹೊರಗುಳಿಯುವ ಸಾಧ್ಯತೆಯಿದೆ.

ಒಂದು ವೇಳೆ ಟಿಮ್ ಡೇವಿಡ್ ಹೊರಗುಳಿದರೆ, ಆರ್​ಸಿಬಿ ತಂಡವು ಟಿಮ್ ಸೈಫರ್ಟ್ ಅವರನ್ನು ಕಣಕ್ಕಿಳಿಸಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಲಿಯಾಮ್ ಲಿವಿಂಗ್​ಸ್ಟೋನ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು.

ಅಷ್ಟೇ ಅಲ್ಲದೆ ಈ ಬಾರಿ ಆರ್​ಸಿಬಿ ಪರ 8 ಪಂದ್ಯಗಳನ್ನು ಆಡಿರುವ ಲಿಯಾಮ್ ಲಿವಿಂಗ್​ಸ್ಟೋನ್ ಈವರೆಗೆ ಕಲೆಹಾಕಿರುವುದು ಕೇವಲ 87 ರನ್​ಗಳು ಮಾತ್ರ. ಹೀಗಾಗಿ ಕಳಪೆ ಫಾರ್ಮ್​ನಲ್ಲಿರುವ ಲಿವಿಂಗ್​ಸ್ಟೋನ್​ಗೆ ಮತ್ತೆ ಚಾನ್ಸ್ ನೀಡುವ ಸಾಧ್ಯತೆಯಿಲ್ಲ.

ಬದಲಿಗೆ ನ್ಯೂಝಿಲೆಂಡ್​ನ ಹೊಡಿಬಡಿ ದಾಂಡಿಗ ಟಿಮ್ ಸೈಫರ್ಟ್​ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಅತ್ತ ಆರಂಭಿಕ ದಾಂಡಿಗನಾಗಿರುವ ಸೈಫರ್ಟ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಈ ಮೂಲಕ ಆರ್​ಸಿಬಿ ಟಾಪ್-3 ಅನ್ನು ಬಲಪಡಿಸುವ ಸಾಧ್ಯತೆಯಿದೆ.

ಹೇಝಲ್​ವುಡ್ ರೆಡಿ:

ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಆರ್​ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್​ವುಡ್ ಸಂಪೂರ್ಣ ಫಿಟ್​ನೆಸ್ ಸಾಧಿಸಿದ್ದಾರೆ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ.

ಇತ್ತ ಹೇಝಲ್​ವುಡ್ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟರೆ, ನುವಾನ್ ತುಷಾರ ಹೊರಗುಳಿಯಬೇಕಾಗುತ್ತದೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿರುವ ತುಷಾರ ಅವರನ್ನು ಕೈ ಬಿಡುವುದೇ ಈಗ ಆರ್​ಸಿಬಿ ಮುಂದಿರುವ ದೊಡ್ಡ ಸವಾಲು.

ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು

ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್​ಸಿಬಿ ವಿರುದ್ಧದ 227 ರನ್ ಬಾರಿಸಿದರೂ, ನುವಾನ್ ತುಷಾರ 4 ಓವರ್​ಗಳಲ್ಲಿ ನೀಡಿರುವುದು ಕೇವಲ 26 ರನ್​ಗಳು ಮಾತ್ರ. ಹೀಗಾಗಿಯೇ ಜೋಶ್ ಹೇಝಲ್​ವುಡ್ ಬದಲಿಗೆ ತಂಡದಿಂದ ಯಾರನ್ನು ಕೈ ಬಿಡುವುದು ಎಂಬ ಚಿಂತೆ ಆರ್​ಸಿಬಿಗೆ ಶುರುವಾಗಿದೆ.