AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ!

IPL 2026: ಬಿಸಿಸಿಐ ಮತ್ತು ಪಿಸಿಬಿ ನಡುವಿನ ಶೀತಲ ಸಮರಕ್ಕೆ ಸದ್ಯಕ್ಕಂತೂ ಕೊನೆ ಇಲ್ಲ ಅಂದುಕೊಂಡಿದ್ದವರಿಗೆ ಜಾಗತಿಕ ಕ್ರಿಕೆಟ್ ನಿಯಂತ್ರಣ ಮಂಡಳಿಗಳು ಶಾಕ್ ನೀಡಿವೆ. ಉಭಯ ದೇಶಗಳ ಕ್ರಿಕೆಟ್ ಸಂಬಂಧದ ಭವಿಷ್ಯವನ್ನೇ ಬದಲಿಸಬಲ್ಲ ಹೈ-ಪ್ರೊಫೈಲ್ ಬೆಳವಣಿಗೆಯೊಂದು ತೆರೆಮರೆಯಲ್ಲಿ ನಡೆದಿದೆ. ಅದು ಸಹ ಪಿಸಿಬಿ ಮುಖ್ಯಸ್ಥನಿಗೆ ಐಪಿಎಲ್​ ಫೈನಲ್​ನ ಆಹ್ವಾನ ನೀಡುವ ಮೂಲಕ ಎಂಬುದೇ ಅಚ್ಚರಿ!

IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ!
Mohsin Naqvi
ಝಾಹಿರ್ ಯೂಸುಫ್
|

Updated on: May 16, 2026 | 12:37 PM

Share

ಭಾರತ ಮತ್ತು ಪಾಕಿಸ್ತಾನ್ ನಡುವೆ ಕ್ರೀಡಾ ಸಂಬಂಧಗಳಲ್ಲಿ ದೀರ್ಘಕಾಲದ ಉದ್ವಿಗ್ನತೆ ಮುಂದುವರಿದಿದ್ದರೂ, ಒಂದು ಅಚ್ಚರಿಯ ಮತ್ತು ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಭಾರತದಲ್ಲಿ ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯ ಹಾಗೂ ಐಸಿಸಿ (ICC) ಬೋರ್ಡ್ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ಲಭಿಸಿದೆ ಎಂದು ವರದಿಯಾಗಿವೆ.

ಐಸಿಸಿ ಸಭೆ ಮತ್ತು ಐಪಿಎಲ್ ಫೈನಲ್:

ಮೇ 30 ಮತ್ತು 31 ರಂದು ಭಾರತದ ಅಹಮದಾಬಾದ್‌ನಲ್ಲಿ ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ತ್ರೈಮಾಸಿಕ ಸಭೆ ನಡೆಯಲಿದೆ. ಇದೇ ವೇಳೆ ಮೇ 31 ರಂದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯವೂ ಜರುಗಲಿದೆ. ಈ ಎರಡೂ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಮೊಹ್ಸಿನ್ ನಖ್ವಿ ಅವರಿಗೆ ಆಮಂತ್ರಣ ನೀಡಲಾಗಿದೆ ಎಂದು ಪಾಕ್ ಚಾನೆಲ್ ಜಿಯೋ ನ್ಯೂಸ್ ವರದಿ ಮಾಡಿದೆ.

ಗ್ರೀನ್ ಸಿಗ್ನಲ್‌ಗಾಗಿ ಕಾಯುವಿಕೆ:

ಮೊಹ್ಸಿನ್ ನಖ್ವಿ ಅವರು ಕೇವಲ ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲದೆ, ಪಾಕಿಸ್ತಾನದ ಹಾಲಿ ಗೃಹ ಸಚಿವರೂ ಆಗಿರುವುದರಿಂದ ಅವರ ಭಾರತ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮವಾಗಿದೆ. ಮೂಲಗಳ ಪ್ರಕಾರ, ಅವರು ಭಾರತಕ್ಕೆ ಪ್ರಯಾಣ ಬೆಳೆಸಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ತೆಗೆದುಕೊಳ್ಳಲಿದ್ದಾರೆ. ಸರ್ಕಾರದ ಅನುಮತಿ ಸಿಕ್ಕರೆ ಮಾತ್ರ ನಖ್ವಿ ಭಾರತಕ್ಕೆ ಆಗಮಿಸಲಿದ್ದಾರೆ.

ರಾಜತಾಂತ್ರಿಕವಾಗಿ ಈ ಆಹ್ವಾನ ಏಕೆ ಮುಖ್ಯ?

  • ದ್ವಿಪಕ್ಷೀಯ ಸರಣಿಗಳಿಲ್ಲ: ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ್ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್‌ನಲ್ಲೂ ಪಾಕ್ ಆಟಗಾರರಿಗೆ ಅವಕಾಶವಿಲ್ಲ.
  •  ನಖ್ವಿ ಅವರ ಹೆಚ್ಚುವರಿ ಜವಾಬ್ದಾರಿ: ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಐಸಿಸಿ ಸಭೆಯಲ್ಲಿ ಅವರ ಉಪಸ್ಥಿತಿ ಮುಖ್ಯ ಎನ್ನಲಾಗಿದೆ.
  • ಕ್ರಿಕೆಟ್ ರಾಜತಾಂತ್ರಿಕತೆ: ಈ ಆಹ್ವಾನವು ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ದೃಷ್ಟಿಯಿಂದ ಸಣ್ಣ ಆಶಾಕಿರಣವಾಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ.

ನಖ್ವಿ ಮತ್ತು ವಿವಾದ!

ಮೊಹ್ಸಿನ್ ನಖ್ವಿ ಮತ್ತು ಏಷ್ಯಾಕಪ್ ವಿವಾದವು ಭಾರತ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅತಿರೇಕದ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಸೆಪ್ಟೆಂಬರ್ 2025 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ವೇಳೆ ಈ ಹೈ-ಡ್ರಾಮಾ ನಡೆದಿತ್ತು.

ಟೂರ್ನಿಯ ಆರಂಭದಲ್ಲೇ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು (ಹಸ್ತಲಾಘವ) ನಿರಾಕರಿಸಿದ್ದರು. ಭಾರತದಲ್ಲಿ ನಡೆದ ಉಗ್ರಗಾಮಿ ದಾಳಿಯ ಸಂತ್ರಸ್ತರ ಪರವಾಗಿ ಮತ್ತು ಭಾರತ ಸರ್ಕಾರದ ನೀತಿಯನ್ನು ಬೆಂಬಲಿಸಿ ಭಾರತ ಈ ನಿರ್ಧಾರ ಕೈಗೊಂಡಿತ್ತು.

ಇದರಿಂದ ಕೆರಳಿದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆದ ಮೊಹ್ಸಿನ್ ನಖ್ವಿ, “ಭಾರತವು ಕ್ರೀಡೆಯಲ್ಲಿ ರಾಜಕೀಯ ತರುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕಿಡಿಕಾರಿದ್ದರು ಮತ್ತು ಮ್ಯಾಚ್ ರೆಫರಿಯನ್ನು ಬದಲಾಯಿಸುವಂತೆ ಹಠ ಹಿಡಿದಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 28, 2025 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ, ಬಹುಮಾನ ವಿತರಣಾ ಸಮಾರಂಭದ ವೇಳೆ ಭಾರತ ತಂಡವು ಎಸಿಸಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಂದ ವಿಜೇತರ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಅಲ್ಲದೆ ಭಾರತ ತಂಡವು ಬೇರೆ ಯಾವುದೇ ತಟಸ್ಥ ಅಧಿಕಾರಿಯಿಂದ ಟ್ರೋಫಿ ಪಡೆಯಲು ಸಿದ್ಧವಿರುವುದಾಗಿ ತಿಳಿಸಿತ್ತು.

ಆದರೆ, ಪ್ರತಿಷ್ಠೆಗೆ ಬಿದ್ದ ಮೊಹ್ಸಿನ್ ನಖ್ವಿ, ತಾವೇ ಟ್ರೋಫಿ ನೀಡುವುದಾಗಿ ಪಟ್ಟು ಹಿಡಿದರು. ಗಂಟೆಗಳ ಕಾಲ ಗೊಂದಲ ಮುಂದುವರಿದು, ಅಂತಿಮವಾಗಿ ಟ್ರೋಫಿ ವಿತರಿಸದೆಯೇ ಸಮಾರಂಭ ಮುಕ್ತಾಯವಾಯಿತು. ಅಷ್ಟಕ್ಕೇ ನಿಲ್ಲದ ನಖ್ವಿ, ವಿಜೇತ ತಂಡವಾದ ಭಾರತಕ್ಕೆ ಸಿಗಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್ ರೂಮ್​ಗೆ ಕೊಂಡೊಯ್ದಿದ್ದರು. ಇದರಿಂದ ಭಾರತ ತಂಡ ಟ್ರೋಫಿ ಇಲ್ಲದೆಯೇ ಸಂಭ್ರಮಿಸಬೇಕಾಗಿ ಬಂತು.

ಇದನ್ನೂ ಓದಿ: RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

ಬಳಿಕ ಬಿಸಿಸಿಐ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಧಿಕೃತ ಪತ್ರ ಬರೆದಾಗ, ನಖ್ವಿ ಹೊಸ ವಿವಾದ ಸೃಷ್ಟಿಸಿದರು. “ಭಾರತಕ್ಕೆ ಟ್ರೋಫಿ ಬೇಕಿದ್ದರೆ ಅವರ ನಾಯಕ ಸೂರ್ಯಕುಮಾರ್ ಯಾದವ್ ದುಬೈನಲ್ಲಿರುವ ನಮ್ಮ ಎಸಿಸಿ ಕಚೇರಿಗೆ ಖುದ್ದಾಗಿ ಬಂದು ನನ್ನ ಕೈಯಿಂದಲೇ ಪಡೆದುಕೊಂಡು ಹೋಗಲಿ, ನಾವು ಕೊರಿಯರ್ ಮಾಡುವುದಿಲ್ಲ” ಎಂದು ಷರತ್ತು ವಿಧಿಸಿದರು. ಇದನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿತು. ಇದಾಗ್ಯೂ ಮೊಹ್ಸಿನ್ ನಖ್ವಿ ಟೀಮ್ ಇಂಡಿಯಾಗೆ ಏಷ್ಯಾಕಪ್ ಹಸ್ತಾಂತರಿಸಿರಲಿಲ್ಲ.

ಈ ಎಲ್ಲಾ ಕಹಿ ಘಟನೆಗಳ ನಡುವೆ ಇದೀಗ ಮೊಹ್ಸಿನ್ ನಖ್ವಿ ಅವರಿಗೆ ಐಪಿಎಲ್​ ಫೈನಲ್ ವೀಕ್ಷಿಸಲು ಆಹ್ವಾನ ನೀಡಲಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದು ಕೇವಲ ಐಸಿಸಿ ಸಭೆಯ ಶಿಷ್ಟಾಚಾರದ ಭಾಗವೋ ಅಥವಾ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧದ ಉತ್ತಮಗೊಳಿಸಲಿರುವ ತಂತ್ರವೋ ಎಂಬುದನ್ನು ಕಾಲವೇ ಉತ್ತರಿಸಲಿದೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More