
ಕ್ರಿಕೆಟ್ ಮೈದಾನದಲ್ಲಿ ಪ್ರತಿದಿನವೂ ಒಂದೇ ರೀತಿ ಇರುವುದಿಲ್ಲ. ಒಂದು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರ ಮುಂದಿನ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾಗಬಹುದು. ಐಪಿಎಲ್ನಂತಹ (IPL 2025) ಜನಪ್ರಿಯ ಪಂದ್ಯಾವಳಿಯಲ್ಲಿ ಇಂತಹ ಘಟನೆಗಳು ಸರ್ವೆ ಸಾಮಾನ್ಯ. ಇದಕ್ಕೆ ತಾಜಾ ಉದಾಹರಣೆಯೆಂದರೆ ಕನ್ನಡಿಗ ಕರುಣ್ ನಾಯರ್ (Karun Nair). ಕಳೆದೆರಡು ಪಂದ್ಯಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯುತ್ತಿರುವ ಕರುಣ್, ತಾವು ಆಡಿದ ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಮೂಲಕ ಸಂಚಲನ ಸೃಷ್ಟಿಸಿದ್ದರು. ಆದರೆ ಮುಂದಿನ ಪಂದ್ಯದಲ್ಲಿ ಅಂದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕರುಣ್ಗೆ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ.
ಏಪ್ರಿಲ್ 16 ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಕರುಣ್ ನಾಯರ್ ಮೇಲೆ ಇದ್ದವು. ಇದಕ್ಕೆ ಕಾರಣವೂ ಇದ್ದು ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾಯರ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದರು. ಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಕರುಣ್ 89 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅದರಲ್ಲೂ ಅವರು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಸರಿಯಾಗಿ ದಂಡಿಸಿದ್ದು ಎಲ್ಲರಿಗೂ ಆಘಾತಕಾರಿಯಾಗಿತ್ತು.
IPL 2025: ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರು; ಇದು ಕರುಣ್ ಸಾವು ಗೆದ್ದು ಬಂದ ಕಥೆ
ನಾಯರ್ ಅವರ ಆ ಇನ್ನಿಂಗ್ಸ್ ಹೊರತಾಗಿಯೂ, ದೆಹಲಿ ತಂಡಕ್ಕೆ ಗೆಲುವು ದಕ್ಕಿರಲಿಲ್ಲ. ಆದರೆ ಈ ಅನುಭವಿ ಬ್ಯಾಟ್ಸ್ಮನ್ ತನ್ನ ಆಟದಿಂದಾಗಿ ಖಂಡಿತವಾಗಿಯೂ ಎಲ್ಲರ ಹೃದಯ ಗೆದ್ದರು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನೇರವಾಗಿ ಆಡುವ ಹನ್ನೊಂದರ ಬಳಗದಲ್ಲಿ ಕರುಣ್ಗೆ ಸ್ಥಾನ ನೀಡಲಾಯಿತು. ಅದರಂತೆ ಮತ್ತೊಮ್ಮೆ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಕರುಣ್ ಕೇವಲ 3 ಎಸೆತಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು.
ವಾಸ್ತವವಾಗಿ ಕರುಣ್ ರನ್ ಕದಿಯುವ ಪ್ರಯತ್ನದಲ್ಲಿ ಖಾತೆ ತೆರೆಯದೆಯೇ ರನೌಟ್ಗೆ ಬಲಿಯಾಗಿ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು. ಈ ಮೂಲಕ ಕರುಣ್ ನಾಯರ್ ಐಪಿಎಲ್ನಲ್ಲಿ ನಾಲ್ಕನೇ ಖಾತೆ ತೆರೆಯದೆ ಔಟಾದ ಬೇಡದ ದಾಖಲೆ ಬರೆದರು. ಕಾಕತಾಳೀಯವೆಂಬಂತೆ ಈ ನಾಲ್ಕು ರನೌಟ್ಗಳಲ್ಲೂ ಕರುಣ್ ತಲಾ 3 ಎಸೆತಗಳನ್ನು ಎದುರಿಸಿದ ಬಳಿಕ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ