
ಒಂದೆಡೆ ಭಾರತದಲ್ಲಿ ಐಪಿಎಲ್ (IPL 2025) ಪ್ಲೇ ಆಫ್ ಸುತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಅಭಿಮನ್ಯು ಈಶ್ವರನ್ ನಾಯಕತ್ವದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಇಂದಿನಿಂದ ಆರಂಭವಾಗಿರುವ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡಕ್ಕೆ ಕನ್ನಡಿಗ ಕರುಣ್ ನಾಯರ್ (Karun Nair) ಮತ್ತೊಮ್ಮೆ ಆಸರೆಯಾಗಿದ್ದಾರೆ. ಆರಂಬಿಕ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಅಭಿಮನ್ಯು ಈಶ್ವರನ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ಸರ್ಫರಾಜ್ ಖಾನ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದ ಕರುಣ್ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕರುಣ್ ಅವರ 24ನೇ ಶತಕವಾಗಿದೆ.
ಸುಮಾರು 8 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ ದೇಶೀ ಕ್ರಿಕೆಟ್ನಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ರಣಜಿ ಟ್ರೋಫಿಯಿಂದ ಹಿಡಿದು ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯವರೆಗೆ ಕರುಣ್ ನಾಯರ್ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಕರುಣ್ಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ನೀಡಬೇಕೆಂಬ ಕೂಗು ಜೋರಾಗಿತ್ತು. ಅದರಂತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಕರುಣ್ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
2017 ರ ನಂತರ ಮೊದಲ ಬಾರಿಗೆ ಕರುಣ್ ನಾಯರ್ ಟೆಸ್ಟ್ ತಂಡಕ್ಕೆ ಆಯ್ಕೆಯಾgಇದ್ದಾರೆ. ಆದರೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ, ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಪಂದ್ಯದ ಮೊದಲ ದಿನದಂದು ಕರುಣ್ ನಾಯರ್ ಸ್ಮರಣೀಯ ಶತಕ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ಅದ್ಭುತ ಇನ್ನಿಂಗ್ಸ್ ಆಡಿದರು, ಇದು ಭಾರತ ಎ ತಂಡದ ಕಳಪೆ ಆರಂಭದ ನಂತರ ಚೇತರಿಸಿಕೊಳ್ಳಲು ಸಹಾಯ ಮಾಡಿತು. ಆರನೇ ಓವರ್ನಲ್ಲಿ ಮೊದಲ ವಿಕೆಟ್ ಪತನದ ನಂತರ ಬ್ಯಾಟಿಂಗ್ಗೆ ಇಳಿದ ಕರುಣ್, ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅವರೊಂದಿಗೆ 181 ರನ್ಗಳ ಪಾಲುದಾರಿಕೆಯನ್ನು ಮಾಡಿ ಭಾರತ ಎ ತಂಡವನ್ನು ಸಂಕಷ್ಟದಿಂದ ಹೊರತೆಗೆದರು.
ENG vs IND: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಕನ್ನಡಿಗ ಕರುಣ್ಗೆ ತಂಡದಲ್ಲಿ ಸ್ಥಾನ
ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ಮತ್ತು ನಂತರ ವಿರಾಟ್ ಕೊಹ್ಲಿ ಅವರ ಹಠಾತ್ ನಿವೃತ್ತಿ ಘೋಷಣೆಯು ಕರುಣ್ ನಾಯರ್ ಅವರ ಆಯ್ಕೆಯನ್ನು ಸುಲಭಗೊಳಿಸಿತು. ಆದರೆ ಇದಾದ ನಂತರವೂ ಅವರಿಗೆ ಪ್ಲೇಯಿಂಗ್-11 ರಲ್ಲಿ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಈಗ ಇದಕ್ಕೆ ಉತ್ತರವನ್ನು ವಿದರ್ಭ ತಂಡವನ್ನು ರಣಜಿ ಚಾಂಪಿಯನ್ ಆಗಿ ಮಾಡಿದ ಕರುಣ್, ಇಂಗ್ಲೆಂಡ್ನಲ್ಲಿ ತಮ್ಮ ಮೊದಲ ದಿನದಂದು ನೀಡಿದರು. ಕರುಣ್ ಅವರ ಇನ್ನಿಂಗ್ಸ್ ಕೂಡ ವಿಶೇಷವಾಗಿದೆ ಏಕೆಂದರೆ ಅವರು ಮೂರನೇ ಸ್ಥಾನದಲ್ಲಿ ಬಂದು ಈ ರನ್ ಗಳಿಸಿದರು, ಇದು ಟೀಂ ಇಂಡಿಯಾಕ್ಕೆ ಮುಖ್ಯವಾಗಿದೆ. ಇಂಗ್ಲೆಂಡ್ನಲ್ಲಿ ನಾಯಕ ಶುಭ್ಮನ್ ಗಿಲ್ ಮೂರನೇ ಕ್ರಮಾಂಕದ ಬದಲು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ ಎಂದು ಊಹಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡನೇ ಬ್ಯಾಟ್ಸ್ಮನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಕರುಣ್ ಇದಕ್ಕಾಗಿ ತಮ್ಮ ಯಶಸ್ವಿ ಆಡಿಷನ್ ನೀಡಿದ್ದಾರೆ. ಹೀಗಾಗಿ ಮೂರನೇ ಸ್ಥಾನಕ್ಕೆ ಕರುಣ್ ಸೂಕ್ತ ಆಯ್ಕೆ ಎನಿಸುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Fri, 30 May 25