ಸಿರಾಜ್ ಮಾಡಿದ ತಪ್ಪಿನಿಂದಾಗಿ ಸೋತ ಗುಜರಾತ್ ಟೈಟಾನ್ಸ್

GT vs RR Turning Point: ಐಪಿಎಲ್​ನ 9ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 210 ರನ್​ ಕಲೆಹಾಕಿದರೆ, ಗುಜರಾತ್ ಟೈಟಾನ್ಸ್ ತಂಡವು 204 ರನ್​ಗಳಿಸಿ ಕೊನೆಯ ಓವರ್​ನಲ್ಲಿ ಸೋಲೊಪ್ಪಿಕೊಂಡಿದ್ದರು. ಈ ಸೋಲಿಗೆ ಕಾರಣಗಳೇನು ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಹಂಗಾಮಿ ನಾಯಕ ರಶೀದ್ ಖಾನ್ ಬಿಚ್ಚಿಟ್ಟಿದ್ದಾರೆ.

ಸಿರಾಜ್ ಮಾಡಿದ ತಪ್ಪಿನಿಂದಾಗಿ ಸೋತ ಗುಜರಾತ್ ಟೈಟಾನ್ಸ್
Mohammed Siraj

Updated on: Apr 05, 2026 | 12:29 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋಲನುಭವಿಸಿದೆ. ಅದು ಸಹ ಕೇವಲ 6 ರನ್​ಗಳ ಅಂತರದಿಂದ. ಆದರೆ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮಾಡಿದ ಒಂದು ತಪ್ಪಿನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 6 ರನ್​ಗಳು ಸೇರ್ಪಡೆಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಸಿರಾಜ್, ರಾಜಸ್ಥಾನ್ ರಾಯಲ್ಸ್‌ನ ಧ್ರುವ್ ಜುರೆಲ್ ಅವರ ಕ್ಯಾಚ್ ಕೈಬಿಟ್ಟಿದ್ದು ಪಂದ್ಯದ ಮೇಲೆ ಭಾರಿ ಪ್ರಭಾವ ಬೀರಿತು.

ಕ್ಯಾಚ್ ಮಿಸ್ ಆಗಿದ್ದು ಹೇಗೆ?

ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್‌ನ 15ನೇ ಓವರ್‌ಗಿಂತ ಮೊದಲು, ಲಾಂಗ್-ಆನ್ ಬೌಂಡರಿಯಲ್ಲಿ ಧ್ರುವ್ ಜುರೆಲ್ ನೀಡಿದ ಕ್ಯಾಚ್ ಅನ್ನು ಸಿರಾಜ್ ಹಿಡಿದು ಒಳಗೆ ಎಸೆಯಲು ಪ್ರಯತ್ನಿಸಿದರು. ಆದರೆ ಸಮತೋಲನ ಕಳೆದುಕೊಂಡಿದ್ದರಿಂದ ಚೆಂಡು ಕೈಯಿಂದ ಜಾರಿ ಬೌಂಡರಿ ಗೆರೆ ದಾಟಿತು, ಇದು ಜುರೆಲ್‌ಗೆ ಸಿಕ್ಸರ್ ಮತ್ತು ಜೀವದಾನ ಎರಡನ್ನೂ ನೀಡಿತು.

ಇಲ್ಲಿ ಸಿರಾಜ್ ಬೌಂಡರಿ ಲೈನ್ ಬಳಿ ನಿಲ್ಲದೇ ತುಸು ಮುಂದೆ ನಿಂತು ಫೀಲ್ಡಿಂಗ್ ಮಾಡಿದ್ದರಿಂದ ನೇರ ಕ್ಯಾಚ್ ಹಿಡಿಯಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಕ್ಯಾಚ್ ಹಿಡಿಯುವ ಪ್ರಯತ್ನ ನಡೆಸಿದರೂ ನಿಯಂತ್ರಣ ಕಳೆದುಕೊಂಡು ಚೆಂಡನ್ನು ಸಿಕ್ಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 6 ರನ್ ನೀಡಿದರು.

ಮೊಹಮ್ಮದ್ ಸಿರಾಜ್ ಕ್ಯಾಚ್ ಬಿಟ್ಟಾಗ ಧ್ರುವ್ ಜುರೆಲ್ ಗಳಿಸಿದದ್ದು ಕೇವಲ 11 ರನ್​ಗಳು ಮಾತ್ರ. ಆದರೆ ಆ ಬಳಿಕ ಸಿಕ್ಕ ಜೀವದಾನದ ಲಾಭ ಪಡೆದ ಜುರೆಲ್ ಕೇವಲ 42 ಎಸೆತಗಳಲ್ಲಿ 75 ರನ್ (5 ಬೌಂಡರಿ, 5 ಸಿಕ್ಸರ್) ಚಚ್ಚಿದರು. ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ್ ರಾಯಲ್ಸ್ 210 ರನ್‌ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು ಕೇವಲ 6 ರನ್ಗಳಿಂದ ಸೋಲಬೇಕಾಯಿತು. ಸಿರಾಜ್ ಕೈಬಿಟ್ಟ ಆ ಒಂದು ಕ್ಯಾಚ್ ಮತ್ತು ಅದರಿಂದ ಬಂದ ಹೆಚ್ಚುವರಿ ರನ್‌ಗಳು ಗುಜರಾತ್ ಟೈಟಾನ್ಸ್ ತಂಡಕ್ಕೆ ನಿಜಕ್ಕೂ ದುಬಾರಿಯಾದವು.

ಇದನ್ನೂ ಓದಿ: ರಣರೋಚಕ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ನಾಯಕ ರಶೀದ್ ಖಾನ್!

ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಏಪ್ರಿಲ್ 8 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಗುಜರಾತ್ ಪಡೆ ಮೊದಲ ಗೆಲುವು ದಕ್ಕಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

 

Follow Us