AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಆಟಗಾರನ ಕ್ರಿಕೆಟ್​ ಕನಸಿಗೆ ಸೈಕಲ್ ತುಳಿದ ಅಮ್ಮ..!

Arshdeep Singh: ಕೆಲಸದ ಬಿಝಿಯಲ್ಲಿದ್ದ ದರ್ಶನ್ ಸಿಂಗ್​ಗೆ ಮಗನಿಗಾಗಿ ಹೆಚ್ಚಿನ ಸಮಯ ನೀಡಲಾಗುತ್ತಿರಲಿಲ್ಲ. ಹೀಗಾಗಿ ಮಗನನ್ನು ಅಭ್ಯಾಸಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ತಾಯಿಯ ಹೆಗಲೇರಿತು.

ಟೀಮ್ ಇಂಡಿಯಾ ಆಟಗಾರನ ಕ್ರಿಕೆಟ್​ ಕನಸಿಗೆ ಸೈಕಲ್ ತುಳಿದ ಅಮ್ಮ..!
Arshdeep Singh
TV9 Web
| Updated By: ಝಾಹಿರ್ ಯೂಸುಫ್|

Updated on: Jun 07, 2022 | 12:58 PM

Share

ಸಾಧನೆಗೆ ಸಾವಿರ ಮೆಟ್ಟಿಲಾದರೆ…ಈ ಸಾಧನೆಯ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ ಎಂಬ ಮಾತಿದೆ. ಅದು ತಾಯಿಯ ರೂಪದಲ್ಲೇ ಇದ್ದರೆ? ಹೌದು, ಇದೀಗ ಟೀಮ್ ಇಂಡಿಯಾದ ಆಟಗಾರನಾಗಿರುವ ಅರ್ಷದೀಪ್ ಸಿಂಗ್ (Arshdeep Singh) ಅತ್ಯುತ್ತಮ ಕ್ರಿಕೆಟಿಗನಾಗುವುದರಲ್ಲಿ ಅವರ ತಾಯಿಯ ತ್ಯಾಗ ದೊಡ್ಡದು. ಕಳೆದ ಎರಡು ಸೀಸನ್​ ಐಪಿಎಲ್​ನಲ್ಲಿ ಮಿಂಚಿದ್ದ ಮಧ್ಯಮ ವೇಗಿ ಅರ್ಷದೀಪ್ ಸಿಂಗ್ ಕೊನೆಗೂ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ಅತ್ಯುತ್ತಮ ಲೈನ್ ಅ್ಯಂಡ್ ಲೆಂಗ್ತ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಅರ್ಷದೀಪ್ ಇದೀಗ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಈ ಪಂದ್ಯದಲ್ಲಿ ಯುವ ಎಡಗೈ ವೇಗಿ ಪದಾರ್ಪಣೆ ಮಾಡಿದರೆ ಅವರ ತಾಯಿಗಿಂತ ಖುಷಿಪಡುವ ಮತ್ತೋರ್ವ ವ್ಯಕ್ತಿ ಇರಲ್ಲ. ಏಕೆಂದರೆ ಮಗನ ಕ್ರಿಕೆಟ್​ ಕನಸಿಗೆ ತನ್ನೆಲ್ಲಾ ನೋವು ನಲಿವುಗಳನ್ನು ತ್ಯಾಗ ಮಾಡಿದ್ದು ಇದೇ ತಾಯಿ.

7ನೇ ವಯಸ್ಸಿನಲ್ಲೇ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದ ಅರ್ಷದೀಪ್ ಮೊದಲು ಬೌಲಿಂಗ್ ಮಾಡಿದ್ದು ತಂದೆ ದರ್ಶನ್ ಸಿಂಗ್ ಎದುರು. ಆ ಒಂದು ನೆನಪಿನ ಮೂಲಕ ಈಗಲೂ ಅರ್ಷದೀಪ್ ಹೆಮ್ಮೆ ಪಡುತ್ತಾರೆ. ಅಲ್ಲದೆ ಬಾಲ್ಯದಿಂದಲೇ ಪೋಷಕರಾದ ಬಲ್ಜೀತ್ ಕೌರ್ ಮತ್ತು ದರ್ಶನ್ ಸಿಂಗ್ ಅವರ ಮಗನ ಕನಸಿಗೆ ಬೆಂಬಲವಾಗಿ ನಿಂತಿದ್ದರು. ಈ ಬೆಂಬಲದ ಪ್ರತಿಫಲವಾಗಿ ಇದೀಗ ಕ್ರಿಕೆಟಿಗನ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲುಗಳಿನತ್ತ ತಲುಪಿದ್ದಾರೆ ಅರ್ಷದೀಪ್ ಸಿಂಗ್.

ಪ್ರತಿ ಪಂದ್ಯಕ್ಕೂ ಮೊದಲು ತನ್ನ ತಾಯಿ ಬಲ್ಜೀತ್‌ಗೆ ಕರೆ ಮಾಡುವ ಅರ್ಷದೀಪ್​ ಸಿಂಗ್, ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಜೆ ಕರೆ ಮಾಡಿದ್ದರು. ಈ ಕರೆಯನ್ನು ಸ್ವೀಕರಿಸಿದಾಗ ಬಲ್ಜೀತ್ ಕೌರ್ ತನ್ನ ಸಂಜೆಯ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಹೀಗೆ ಕರೆ ಮಾಡಿದ ಅರ್ಷದೀಪ್ ತಾಯಿಗೆ ಹೇಳಿದ್ದು ಇಷ್ಟೇ…ಅಮ್ಮ ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆ. ಈ ಮಾತು ಕೇಳಿ ತಾಯಿ ಬಲ್ಜೀತ್ ಕೌರ್​ ಅಳಲಾರಂಭಿಸಿದರು.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಅತ್ತ ಕಡೆ ಪಂಜಾಬ್ ಕಿಂಗ್ಸ್​ ತಂಡದ ಸಹ ಆಟಗಾರರು ಬಸ್‌ನಲ್ಲಿ ಭಾಂಗ್ರಾ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದ್ದರು. ಅದನ್ನೆಲ್ಲಾ ನೋಡಿದಾಗಲೇ ನನಗೆ ಅರಿವಾಗಿದ್ದು, ನನ್ನ ಮಗನಿಗೆ ಸಿಕ್ಕಿರುವುದು ಎಷ್ಟು ದೊಡ್ಡ ಅವಕಾಶ ಎಂದು ಬಲ್ಜೀತ್ ಕೌರ್ ತಮ್ಮ ಮಗ ಟೀಮ್ ಇಂಡಿಯಾಗೆ ಆಯ್ಕೆಯಾದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

ಅಲ್ಲದೆ ಅರ್ಷದೀಪ್ ಸಿಂಗ್ ಯಾವತ್ತೂ ಆಯಾಸಗೊಳ್ಳುವುದಿಲ್ಲ. ಅತ್ಯುತ್ತಮ ಪ್ರದರ್ಶನ ನೀಡಬೇಕೆಂದು ಚಡಪಡಿಸುತ್ತಿರುತ್ತಾನೆ. ಇದಕ್ಕಾಗಿ ಎಷ್ಟು ಸಮಯ ಬೇಕಾದರೂ ಅಭ್ಯಾಸ ನಡೆಸಲು ಸಿದ್ದನಾಗಿರುತ್ತಾರೆ. ಅವನು ನನ್ನನ್ನು ಕೇಳುವ ಏಕೈಕ ವಿಷಯವೆಂದರೆ ತರಬೇತಿ ಅವಧಿಯ ನಂತರ ಅವನಿಗೆ ಮಸಾಜ್ ಮಾಡುವುದು ಎಂದು ಬಲ್ಜೀಜ್ ಕೌರ್ ತಿಳಿಸಿದರು.

ಅರ್ಷದೀಪ್ ಸಿಂಗ್ ಅವರನ್ನು ಟೀಮ್ ಇಂಡಿಯಾದ ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಅವರ ಪೋಷಕರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಭದ್ರತಾ ಅಧಿಕಾರಿಯಾಗಿರುವ ದರ್ಶನ್ ಸಿಂಗ್ ಮಗ ಅರ್ಷದೀಪ್ ತಮ್ಮ ಖರಾರ್ ನಿವಾಸದ ಬಳಿ ಉದ್ಯಾನವನದಲ್ಲಿ ಬೌಲಿಂಗ್ ಮಾಡುವುದನ್ನು ಗಮನಿಸಿದರು. ಅವರ ಸಾಮರ್ಥ್ಯವನ್ನು ಗುರುತಿಸಿ, ಅವರ ತಂದೆ ನಂತರ ಅವರ ಕೌಶಲ್ಯವನ್ನು ಪ್ರೋತ್ಸಾಹಿಸಿದರು. ಅಲ್ಲದೆ 7ನೇ ವಯಸ್ಸಿನಲ್ಲಿ ಚಂಡೀಗಢದಲ್ಲಿ ತರಬೇತುದಾರ ಜಸ್ವಂತ್ ರಾಯ್ ಅವರ ಬಳಿ ಸೇರಿಸಿದರು.

ಆದರೆ ಕೆಲಸದ ಬಿಝಿಯಲ್ಲಿದ್ದ ದರ್ಶನ್ ಸಿಂಗ್​ಗೆ ಮಗನಿಗಾಗಿ ಹೆಚ್ಚಿನ ಸಮಯ ನೀಡಲಾಗುತ್ತಿರಲಿಲ್ಲ. ಹೀಗಾಗಿ ಮಗನನ್ನು ಅಭ್ಯಾಸಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ತಾಯಿಯ ಹೆಗಲೇರಿತು. ಅದರಂತೆ ತಾಯಿ ಬಲ್ಜೀತ್ ಕೌರ್ ಅವರು ಅರ್ಷದೀಪ್ ಅವರನ್ನು ಅಭ್ಯಾಸಕ್ಕೆ ಕರೆದೊಯ್ಯುತ್ತಿದ್ದರು. ಅದು ಕೂಡ ಪ್ರತಿದಿನ 13 ಕಿಮೀ ಸೈಕಲ್ ತುಳಿಯುತ್ತಾ ಎಂಬುದೇ ಅಚ್ಚರಿ. ಅಂದರೆ ಖರಾರ್‌ನಿಂದ ಚಂಡೀಗಢದವರೆಗೆ ಸೈಕಲ್​ನಲ್ಲೇ ಮಗನನ್ನು ಬಿಡುತ್ತಿದ್ದರು. ಅಲ್ಲದೆ ಅಭ್ಯಾಸ ಮುಗಿಸುವವರೆಗೆ ಕಾಯುತ್ತಿದ್ದರು. ಆ ದಿನಗಳನ್ನು ನೆನಪಿಸಿಕೊಳ್ಳುವ ತಾಯಿ ಬಲ್ಜೀತ್ ಸಿಂಗ್, ಅದು ನನ್ನ ಪಾಲಿಗೆ ಕಠಿಣ ಪ್ರಯಾಣವಾಗಿತ್ತು. ನಾನು ಎಲ್ಲವನ್ನೂ ಮಗನಿಗಾಗಿ ತ್ಯಾಗ ಮಾಡಿದ್ದೆ. ಈಗ ಮಗ ಭಾರತ ತಂಡದ ಕ್ಯಾಪ್ ಧರಿಸಿರುವುದನ್ನು ನೋಡುವುದು ಹೆಮ್ಮೆಯ ವಿಚಾರ, ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಅಭ್ಯಾಸ ಮುಗಿಸಿ ಬಂದ ಬಳಿಕ ಕೂಡ ಮಗನಿಗೆ ಬಲ್ಜೀತ್ ಕೌರ್ ಅವರೇ ಮಸಾಜ್ ಮಾಡುತ್ತಿದ್ದರು. ಹೀಗೆ ಮಗನ ಕ್ರಿಕೆಟ್ ಪಯಣಕ್ಕೆ ಎಲ್ಲಾ ರೀತಿಯಲ್ಲೂ ಬೆನ್ನೆಲುಬಾಗಿ ನಿಂತಿದ್ದರು. ಎಲ್ಲಿಯವರೆಗೆ ಎಂದರೆ ಅರ್ಷದೀಪ್ ಸಿಂಗ್ ಸ್ಕೂಟರ್​ನಲ್ಲಿ ಅಭ್ಯಾಸಕ್ಕೆ ಹೋಗಿದ್ದು ತಮ್ಮ 18ನೇ ವಯಸ್ಸಿನಲ್ಲಿ. ಅಂದರೆ ಬಾಲ್ಯದಲ್ಲಿ ಪ್ರತಿ ಹಂತದಲ್ಲೂ ಅರ್ಷದೀಪ್​ ಸಿಂಗ್​ ಕನಸಿಗೆ ತಾಯಿ ಸಾಥ್ ನೀಡಿದ್ದರು. ಒಬ್ಬ ಕ್ರಿಕೆಟಿಗನ ಯಶೋಗಾಥೆಯ ನಡುವೆ ತಾಯಿ ಮಾಡಿದ ತ್ಯಾಗ ನಿಜಕ್ಕೂ ದೊಡ್ಡದು. ಏಕೆಂದರೆ 140 ಕೋಟಿ ಜನರ ದೇಶದಿಂದ 18 ಮಂದಿಯ ತಂಡದಲ್ಲಿ ಸ್ಥಾನ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಸಾಧನೆಯನ್ನು ಅರ್ಷದೀಪ್ ಸಿಂಗ್ ಮಾಡಿದ್ದಾರೆ. ಈ ಸಾಧನೆಯ ಹಿಂದೆ ಅವರ ತಾಯಿಯ ಬಲುದೊಡ್ಡ ತ್ಯಾಗವಿದೆ ಎಂಬುದೇ ವಿಶೇಷ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.