200 ಕ್ಕಿಂತ ಕಡಿಮೆ ಮೊತ್ತಕ್ಕೆ ಮುಂಬೈ ಮತ್ತು ಕರ್ನಾಟಕ ಆಲೌಟ್
Ranji 2026: ರಣಜಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳಿಂದ ಶುರುವಾದ ಈ ಟೂರ್ನಿಯಲ್ಲಿ ಇದೀಗ ಉಳಿದಿರುವುದು 8 ತಂಡಗಳು ಮಾತ್ರ. ಈ ತಂಡಗಳ ನಡುವೆ ಇದೀಗ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದೆ. ಈ ಮ್ಯಾಚ್ಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್ಗೇರಲಿದೆ.

ರಣಜಿ ಟೂರ್ನಿಯ 4ನೇ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಅಲ್ಪ ಮೊತ್ತಕ್ಕೆ ಕುಸಿದಿದೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಕೇವಲ 120 ರನ್ಗಳಿಗೆ ಆಲೌಟ್ ಆಗಿದ್ದರು. ಕರ್ನಾಟಕ ಪರ ವಿಧ್ವತ್ ಕಾವರೇಪ್ಪ, ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದ್ದರು.
ಮುಂಬೈ ಕಲೆಹಾಕಿದ 120 ರನ್ಗಳಿಗೆ ಪ್ರತ್ಯುತ್ತವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 28 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ನಾಯಕ ದೇವದತ್ ಪಡಿಕ್ಕಲ್ (17) ಕೂಡ ಔಟಾದರು.
ಆ ಬಳಿಕ ಬಂದ ಕರುಣ್ ನಾಯರ್ ಕಲೆಹಾಕಿದ್ದು ಕೇವಲ 4 ರನ್ಗಳು ಮಾತ್ರ. ಇದರ ಬೆನ್ನಲ್ಲೇ ಸ್ಮರಣ್ ರವಿಚಂದ್ರನ್ ಹಾಗೂ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತುವ ಮೂಲಕ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ 134 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 92 ರನ್ ಬಾರಿಸಿದರು.
ಶತಕಕ್ಕೆ ಇನ್ನೇನು 8 ರನ್ ಬೇಕಿದ್ದಾಗ ಮಯಾಂಕ್ ಅಗರ್ವಾಲ್ 8ನೇ ವಿಕೆಟ್ ಆಗಿ ಔಟಾದರು. ಆ ಬಳಿಕ ಬಂದ ಶಿಖರ್ ಶೆಟ್ಟಿ (4) ಪ್ರಸಿದ್ಧ್ ಕೃಷ್ಣ (0) ಔಟಾಗುವುದರೊಂದಿಗೆ ಕರ್ನಾಟಕ ತಂಡವು 173 ರನ್ಗಳಿಗೆ ಆಲೌಟ್ ಆಗಿದೆ.
ಕರ್ನಾಟಕ ತಂಡಕ್ಕೆ ಮುನ್ನಡೆ:
ಮೊದಲ ಇನಿಂಗ್ಸ್ನಲ್ಲಿ 173 ರನ್ಗಳಿಗೆ ಆಲೌಟ್ ಆದರೂ ಕರ್ನಾಟಕ ತಂಡ 53 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಅದರಂತೆ ಇದೀಗ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಲಿದ್ದು, 53 ರನ್ಗಳ ಬಳಿಕ ಮುಂಬೈ ಸ್ಕೋರ್ ಶುರುವಾಗಲಿದೆ. ಹೀಗಾಗಿ ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದರೂ ಪಂದ್ಯದಲ್ಲಿ ಅಲ್ಪ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ ಪ್ಲೇಯಿಂಗ್ 11: ಅಖಿಲ್ ಹೆರ್ವಾಡ್ಕರ್ , ಯಶಸ್ವಿ ಜೈಸ್ವಾಲ್ , ಮುಶೀರ್ ಖಾನ್ , ತುಷಾರ್ ದೇಶಪಾಂಡೆ , ಆಕಾಶ್ ಆನಂದ್ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ (ನಾಯಕ) , ಸೂರ್ಯಾಂಶ್ ಶೆಡ್ಗೆ , ಸಿದ್ಧೇಶ್ ಲಾಡ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ಥಿ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಮೂವರಿಲ್ಲ… ಆಸ್ಟ್ರೇಲಿಯಾಗೆ ಆಘಾತದ ಮೇಲೆ ಆಘಾತ
ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ಕರುಣ್ ನಾಯರ್ , ದೇವದತ್ತ್ ಪಡಿಕ್ಕಲ್ (ನಾಯಕ) , ಶ್ರೇಯಸ್ ಗೋಪಾಲ್ , ಸ್ಮರಣ್ ರವಿಚಂದ್ರನ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್) ವಿದ್ಯಾಧರ ಪಾಟೀಲ್ , ಪ್ರಸಿದ್ಧ್ ಕೃಷ್ಣ , ಶಿಖರ್ ಶೆಟ್ಟಿ ,ವಿಧ್ವತ್ ಕಾವೇರಪ್ಪ.
Published On - 12:12 pm, Sat, 7 February 26
