ಆಪರೇಷನ್ ಸಿಂಧೂರ್: ಆತಂಕದಲ್ಲಿ ಪಾಕಿಸ್ತಾನ್ ಕ್ರಿಕೆಟಿಗನ ಕುಟುಂಬಸ್ಥರು..!
Operation Sindoor: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಶಿಬಿರಗಳ ಮೇಲೆ ಬುಧವಾರ ನಸುಕಿನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಲಾದ ಈ ಕಾರ್ಯಾಚರಣೆಯ ಮೂಲಕ ಉಗ್ರರ ಅಡುಗುತಾಣಗಳನ್ನು ಧ್ವಂಸಗೊಳಿಸಲಾಗಿದೆ. ಈ ಮೂಲಕ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ.

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಬುಧವಾರ ನಸುಕಿನ ಜಾವದಲ್ಲಿ ನಡೆದ ಈ ದಾಳಿಯಿಂದಾಗಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶೊಯೆಬ್ ಮಲಿಕ್ ಕುಟುಂಬಸ್ಥರು ಕೂಡ ಹೈರಾಣರಾಗಿದ್ದಾರೆ. ಭಾರತೀಯ ಸೇನಾ ಪಡೆಯು 9 ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಿಯಾಲ್ಕೋಟ್ನಲ್ಲಿನ ಉಗ್ರರ ಅಡುಗುತಾಣಗಳನ್ನು ಇಂಡಿಯನ್ ಆರ್ಮಿ ಉಡೀಸ್ ಮಾಡಿದೆ.
ಸಿಯಾಲ್ಕೋಟ್ನಲ್ಲಿದೆ ಮಲಿಕ್ ಮನೆ:
ಪಾಕಿಸ್ತಾನಿ ಕ್ರಿಕೆಟಿಗ ಶೊಯೆಬ್ ಮಲಿಕ್ 1982 ರಲ್ಲಿ ಸಿಯಾಲ್ಕೋಟ್ನ ಪಂಜಾಬಿ ರಜಪೂತ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮಲಿಕ್ ಫಕೀರ್ ಹುಸೇನ್ ಅಲ್ಲಿ ಒಂದು ಸಣ್ಣ ಶೂ ಅಂಗಡಿಯನ್ನು ನಡೆಸುತ್ತಿದ್ದರು. ಅದೇ ಅಂಗಡಿಯಿಂದ ಬಂದ ಗಳಿಕೆಯಿಂದ, ಮಲಿಕ್ ಅವರ ಕ್ರಿಕೆಟ್ ಕನಸನ್ನು ನನಸಾಗಿಸಿದ್ದರು. ಇದೀಗ ಸಿಯಾಲ್ಕೋಟ್ ಭಾಗದಲ್ಲಿ ಶೊಯೆಬ್ ಮಲಿಕ್ ಅವರ ಹಳೆಯ ಮನೆ ಹಾಗೂ ಕುಟುಂಬಸ್ಥರು ನೆಲೆಸಿದ್ದಾರೆ. ಅದೇ ಭಾಗದಲ್ಲಿ ಕ್ಷಿಪಣಿ ದಾಳಿಯಾಗಿರುವುರಿಂದ ಇದೀಗ ಮಲಿಕ್ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕರಾಚಿಗೆ ಶಿಫ್ಟ್ ಆಗಿರುವ ಮಲಿಕ್:
ಪಾಕಿಸ್ತಾನ ಕ್ರಿಕೆಟ್ನಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ ಬಳಿಕ ಶೊಯೆಬ್ ಮಲಿಕ್ ಸಿಯಾಲ್ಕೋಟ್ ತೊರೆದಿದ್ದರು. ಅಲ್ಲದೆ ಇದೀಗ ಕರಾಚಿಯಲ್ಲಿ ಮನೆ ಮಾಡಿಕೊಂಡಿದ್ದಾರೆ. ಇದಾಗ್ಯೂ ಅವರ ಕುಟುಂಬಸ್ಥರು ಈಗಲೂ ಸಿಯಾಲ್ಕೋಟ್ನಲ್ಲೇ ನೆಲೆಸಿದ್ದಾರೆ. ಹೀಗಾಗಿಯೇ ಭಾರತದ ವಾಯುದಾಳಿ ಬೆನ್ನಲ್ಲೇ ಮಲಿಕ್ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿರುವುದು ಸುದ್ದಿಯಾಗಿದೆ.
ಸಿಯಾಲ್ಕೋಟ್ ಉಗ್ರರ ತರಬೇತಿ ಕೇಂದ್ರ:
ಸಿಯಾಲ್ಕೋಟ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ತರಬೇತಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಭಾರತಕ್ಕೆ ಗುಪ್ತಚರ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಅಂತರರಾಷ್ಟ್ರೀಯ ಗಡಿಯಿಂದ 12 ರಿಂದ 18 ಕಿಲೋಮೀಟರ್ ದೂರದಲ್ಲಿರುವ ಮೆಹ್ಮೂನಾ ತರಬೇತಿ ಕೇಂದ್ರವು ಭಾರತದ ಪಾಲಿಗೆ ತುಂಬಾ ಮಾರಕವಾಗಿತ್ತು. ಇಲ್ಲಿ ಸ್ಥಳೀಯ ಕಾಶ್ಮೀರಿಗಳನ್ನು ನೇಮಿಸಿಕೊಂಡು ಭಯೋತ್ಪಾದನಾ ತರಬೇತಿಯನ್ನು ನೀಡಲಾಗುತ್ತಿತ್ತು.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸಲಾಗುತ್ತಿತ್ತು. ಪಠಾಣ್ಕೋಟ್ ದಾಳಿಯ ಪಿತೂರಿಯೂ ಸಿಯಾಲ್ಕೋಟ್ನಿಂದಲೇ ರೂಪುಗೊಂಡಿತ್ತು. ಹೀಗಾಗಿಯೇ ಈ ಬಾರಿ ಸಿಯಾಲ್ಕೋಟ್ ಅನ್ನು ಕೇಂದ್ರೀಕರಿಸಿ ಭಾರತೀಯ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ: IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುತ್ತೆ..!
ಸೇಡು ತೀರಿಸಿಕೊಂಡ ಭಾರತ:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು 9 ಸ್ಥಳಗಳಲ್ಲಿ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ, ಪ್ರವಾಸಕ್ಕೆಂದು ಹೋಗಿದ್ದ 28 ಅಮಾಯಕರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದರು. ಆ ಕ್ರೂರ ಘಟನೆಯ 15 ದಿನಗಳ ನಂತರ ಭಾರತೀಯ ಸೇನಾ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ಮೂಲಕ ಭಯೋತ್ಪಾದಕರ ಅಡುಗುತಾಣಗಳನ್ನು ಧ್ವಂಸಗೊಳಿಸಿದ್ದಾರೆ.
Published On - 12:57 pm, Wed, 7 May 25