(ಬೆಂಗಳೂರು, ಏ. 03): ಐಪಿಎಲ್ 2025 ರಲ್ಲಿ ಬುಧವಾರ ನಡೆದ 14 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs GT IPL 2025) ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿತು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುಜರಾತ್ ತಂಡವು 17.5 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ಗಳನ್ನು ಕಳೆದುಕೊಂಡು 170 ರನ್ಗಳ ಗುರಿಯನ್ನು ಸುಲಭವಾಗಿ ತಲುಪಿತು. ಅನೇಕ ರೋಚಕ ಕ್ಷಣಕ್ಕೆ ಈ ಪಂದ್ಯ ಸಾಕ್ಷಿಯಾಯಿತು.
ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಜೋಸ್ ಬಟ್ಲರ್ 39 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ಗಳ ಸಹಾಯದಿಂದ ಅಜೇಯ 73 ರನ್ ಗಳಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ಅವರು ಸುದರ್ಶನ್ ಅವರೊಂದಿಗೆ ಎರಡನೇ ವಿಕೆಟ್ಗೆ 75 ರನ್ಗಳ ನಿರ್ಣಾಯಕ ಜೊತೆಯಾಟ ಆಡಿದರು. ಸುದರ್ಶನ್ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಆದಾಗ್ಯೂ, ಅವರು 13 ನೇ ಓವರ್ನಲ್ಲಿ ಜೋಶ್ ಹ್ಯಾಜಲ್ವುಡ್ಗೆ ಬಲಿಯಾದರು.
ಇದಾದ ನಂತರ, ಬಟ್ಲರ್ ಶರ್ಫನ್ ರುದರ್ಫೋರ್ಡ್ (18 ಎಸೆತಗಳಲ್ಲಿ ಔಟಾಗದೆ 30, ಒಂದು ಬೌಂಡರಿ, ಮೂರು ಸಿಕ್ಸರ್) ಜೊತೆ ಮೂರನೇ ವಿಕೆಟ್ಗೆ ಅಜೇಯ 63 ರನ್ಗಳ ಜೊತೆಯಾಟವನ್ನು ಆಡಿದರು. ರುದರ್ಫೋರ್ಡ್ ಸಿಕ್ಸರ್ ಬಾರಿಸಿ ಜಿಟಿಗೆ ಗೆಲುವು ತಂದುಕೊಟ್ಟರು. ಇದಕ್ಕೂ ಮೊದಲು ಗುಜರಾತ್ ನಾಯಕ ಶುಭ್ಮನ್ ಗಿಲ್ (14) ಮೂರನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಭುವಿ ಶುಭ್ಮನ್ ಅವರನ್ನು ಔಟ್ ಮಾಡಿದಾಗ, ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಮೂಲಾಗಿ ಇರಲಿಲ್ಲ. ಹಿಂದಿಗಿಂತ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಇದೀಗ ಪಂದ್ಯದ ನಂತರ ಶುಭ್ಮನ್ ಗಿಲ್ ಟ್ವೀಟ್ ಮಾಡಿದ್ದು, ಇದು ಕೋಲಾಹಲವನ್ನು ಸೃಷ್ಟಿಸಿದೆ.
IPL 2025: ಬ್ಯಾಟಿಂಗ್ ವೈಫಲ್ಯ, ಸಿರಾಜ್ ಮಾರಕ ದಾಳಿ; ಆರ್ಸಿಬಿಗೆ ಮೊದಲ ಸೋಲು
Eyes on the game, not the noise. pic.twitter.com/5jCZzFLn8t
— Shubman Gill (@ShubmanGill) April 2, 2025
ವಾಸ್ತವವಾಗಿ, ಆರ್ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಶುಭ್ಮನ್ ಗಿಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಇಡೀ ಜಿಟಿ ತಂಡದೊಂದಿಗಿನ ಫೋಟೋವನ್ನು ಹಂಚಿಕೊಂಡ ಅವರು, ‘ಗಮನ ಆಟದ ಮೇಲಿದೆ, ಶಬ್ದದ ಮೇಲಲ್ಲ’ ಎಂದು ಶೀರ್ಷಿಕೆ ನೀಡಿದ್ದಾರೆ. ಗಿಲ್ ಔಟಾದಾಗ ಕೊಹ್ಲಿ ಭರ್ಜರಿಯಾಗಿ ಆಚರಿಸಿದ್ದರಿಂದ ಗಿಲ್ ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ.
ಆದಾಗ್ಯೂ, ಪಂದ್ಯದ ನಂತರ ಇಬ್ಬರೂ ಆಟಗಾರರು ಪರಸ್ಪರ ಭೇಟಿಯಾಗಿ ಚೆನ್ನಾಗಿ ಮಾತನಾಡಿದ್ದಾರೆ. ಆರ್ಸಿಬಿಯ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಅವರಿಬ್ಬರ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಈ ಋತುವಿನಲ್ಲಿ ಆರ್ಸಿಬಿಯ ಮೊದಲ ಸೋಲು ಇದಾಗಿದೆ. ಬೆಂಗಳೂರಿನ ಸೋಲಿಗೆ ಕಾರಣವಾಗಿದ್ದು ಏಳು ವರ್ಷ ಆರ್ಸಿಬಿ ಪರ ಆಡಿದ್ದ ಮೊಹಮ್ಮದ್ ಸಿರಾಜ್. ಟಾಪ್ ಆರ್ಡರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ ಜಿಟಿ ಬೌಲರ್ ಮೊಹಮ್ಮದ್ ಸಿರಾಜ್ 4 ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿ 3 ವಿಕೆಟ್ ಕಿತ್ತರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ