Viral: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್ನಿಂದ ತೆಗೆದು ಹಾಕಿದ ಕಂಪನಿ
ಸ್ವಂತ ಬ್ಯುಸಿನೆಸ್ ಇದ್ರೆ ಮಾತ್ರ ಕೆಲಸ ಹೋಗುತ್ತೆ ಎನ್ನುವ ಭಯ ಇರಲ್ಲ. ಆದರೆ ಖಾಸಗಿ ಕಂಪನಿಗಳಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿದ್ರೂ ಜಾಬ್ ಸೇಫ್ಟಿ ಇರಲ್ಲ. ಇದೀಗ ಒಂದು ದಶಕಕ್ಕೂ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸದಿಂದ ವಜಾಗೊಂಡಿರುವ ಬಗ್ಗೆ ಆನ್ಲೈನ್ ನಲ್ಲಿ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಕೈಯಲ್ಲೊಂದು ಉದ್ಯೋಗ (job) ಇದ್ರೇನೆ ಮರ್ಯಾದೆ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋ ಉದ್ಯೋಗಿಗಳಿಗೆ ತಮ್ಮ ಕೆಲಸದ ಬಗ್ಗೆ ಗ್ಯಾರಂಟಿ ಇರಲ್ಲ. ಒಂದು ವೇಳೆ ಕೆಲಸ ಹೋದ್ರೆ ಇಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೂ ಬೆಲೆ ಇಲ್ವಾ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ಇದೀಗ ಇಲ್ಲೊಬ್ಬ ಉದ್ಯೋಗಿಗೂ ಅದೇ ರೀತಿ ಆಗಿದೆ. ಕಳೆದ ಹನ್ನೊಂದು ವರ್ಷದಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು, ಈ ಬಗ್ಗೆ ವೃತ್ತಿಪರರೊಬ್ಬರು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದು ಕೆಲಸದ ಸ್ಥಳದ ನಿಷ್ಠೆ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಸುರೇಶ್ ಪಂತ್ (Suresh Pant) ಎಂಬ ವ್ಯಕ್ತಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ವೃತ್ತಿ ಜೀವನದಲ್ಲಾದ ಬದಲಾವಣೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ, ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ ನಂತರ ಇತ್ತೀಚೆಗೆ ನನ್ನ 2 ತಿಂಗಳ ನೋಟಿಸ್ ಅವಧಿಯ ಸಂಬಳವನ್ನು ನೀಡದೇ ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಈ ಅನುಭವವು ನನಗೆ ಕಠಿಣವಾಗಿತ್ತು. ಆದರೆ ಮುಖ್ಯವಾದ ಪಾಠವನ್ನು ಕಲಿಸಿತು. ನಿಮ್ಮ ಎಲ್ಲಾ ಸಮಯ ಹಾಗೂ ನಿಷ್ಠೆಯನ್ನು ಎಂದಿಗೂ ಒಂದು ಕಂಪನಿಗೆ ಮಾತ್ರ ನೀಡಬೇಡಿ ಎಂದು ಹೇಳಿದ್ದಾರೆ.
ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ
ಯಾವುದೇ ಕಂಪನಿ ಶಾಶ್ವತವಲ್ಲ. ಯಾವುದೇ ಸಮಯದಲ್ಲಿ ಉದ್ಯೋಗಿಗಳನ್ನು ಬದಲಾಯಿಸಬಹುದು. ಹೀಗಾಗಿ ವೃತ್ತಿಪರರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು, ಸಂಪರ್ಕಗಳನ್ನು ನಿರ್ಮಿಸಲು ಮತ್ತು ಭವಿಷ್ಯಕ್ಕಾಗಿ ತಯಾರಿ ನಡೆಸಲು ಹೂಡಿಕೆ ಮಾಸಬೇಕು. ನಿಮ್ಮ ಕೌಶಲ್ಯ ಮತ್ತು ಅನುಭವವೇ ನಿಮ್ಮ ನಿಜವಾದ ಭದ್ರತೆ, ಯಾವುದೇ ಕಂಪನಿಯಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್ನಲ್ಲಿ ರ್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಂಪನಿಯು ನಿಷ್ಠಾವಂತ ಮತ್ತು ಕಠಿಣ ಪರಿಶ್ರಮಿ ಉದ್ಯೋಗಿಗಳನ್ನು ನಿರೀಕ್ಷಿಸುತ್ತದೆ. ಆದರೆ ಉದ್ಯೋಗಿಗಳ ಪ್ರಯತ್ನಗಳಿಗೆ ಕಡಿಮೆ ಫಲಿತಾಂಶ ಬಂದಾಗ ವೆಚ್ಚ ಕಡಿತ ಮತ್ತು ವಜಾಗೊಳಿಸುವ ನೆಪಗಳನ್ನು ನೀಡುತ್ತಾರೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬರು, ಖಾಸಗಿ ಕಂಪನಿಯಲ್ಲಿ ದುಡಿಯುವವರು ಎಲ್ಲಾದಕ್ಕೂ ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹನ್ನೊಂದು ವರ್ಷ ಕೆಲಸ ಮಾಡಿದ ಅನುಭವ ನಿಮ್ಮಲ್ಲಿದೆ. ನೀವು ನಿಮ್ಮ ಕೌಶಲ್ಯ ಅಭಿವೃದ್ಧಿ ಪಡಿಸಿ ಬೇರೆ ಕೆಲಸ ಹುಡುಕಿ. ನಿಮ್ಮ ಪ್ರತಿಭೆಗೆ ತಕ್ಕ ಕೆಲಸ ಸಿಗುತ್ತದೆ ಎಂದು ಧೈರ್ಯ ತುಂಬಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




