ಪ್ರವೀಣ್‌ ನೆಟ್ಟಾರ್‌ ಕೊಲೆ ಆರೋಪಿಗಳ ಎನ್​ಕೌಂಟರ್​ಗೆ ಯಾಕೆ ಆದೇಶಿಸಿಲ್ಲ: ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ನಡೆಸಿರುವ ವಾಗ್ದಾಳಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಕರ್ನಾಟಕಕ್ಕೆ ಒಬ್ಬರು ಯೋಗಿ ಬೇಕೇ ಹೊರತು ಜಾತಿವಾದಿ ನಾಯಕರಲ್ಲ ಎಂದು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪ್ರತಾಪ್ ಭಾಷಣದ ಪೂರ್ಣ ವಿಡಿಯೋ ಇಲ್ಲಿದೆ.

ಮಂಗಳೂರು, ಸೆಪ್ಟೆಂಬರ್ 6: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ, ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಎನ್​ಕೌಂಟರ್​​ಗೆ ಆದೇಶಿಸಲು ಅವಕಾಶ ಇತ್ತು. ಆದರೂ ಯಾಕೆ ಮಾಡಿಲ್ಲ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರತಾಪ್‌ ಸಿಂಹ ನೀಡಿದ ಹೇಳಿಕೆಯ ವಿಡಿಯೋ ಈಗ ವೈರಲ್‌ ಆಗುತ್ತಿದೆ.

ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಾವುಟ, ಕರಪತ್ರ ಹಂಚಿ ಸರ್ಕಾರ ತಂದಿರಿ. ಪೊಲೀಸ್ ಇಲಾಖೆಯು ರಾಜಕಾರಣಿಗಳು ಎಂಬ ದುಷ್ಟ ವ್ಯವಸ್ಥೆಯಡಿ ಸಿಲುಕಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಕೊಲೆ ಮಾಡಿದವರು ಎಲ್ಲಿ ಇದ್ದಾರೆ ಎಂದು ಪೊಲೀಸರಿಗೆ ಗೊತ್ತಿತ್ತು. ಪೋಲೀಸರ ಕೈಯಲ್ಲಿ ಬಂದೂಕು ಇತ್ತು, ಟ್ರಿಗರ್ ಎಳೆಯಲು ಬೆರಳು ಇತ್ತು. ಆದರೆ ಟ್ರಿಗರ್ ಎಳೆಯಬೇಡಿ ಎಂದು ಬಿಜೆಪಿ ಸರಕಾರಕ್ಕೆ ಆರ್ಡರ್ ಮಾಡಿದವರು ಯಾರು? ಅವತ್ತು ಬಿಜೆಪಿ ಸರಕಾರ ಆರ್ಡರ್ ಕೊಟ್ಟಿದ್ರೆ ದುರುಳರು ಇವತ್ತು ಸತ್ತಿರುತ್ತಿದ್ದರು. ಶಿವಮೊಗ್ಗ ಹರ್ಷ ಮರ್ಡರ್ ಕೇಸ್​​ ಆರೋಪಿಗಳು ಒಂದು ಮನೆಯಲ್ಲಿದ್ದರು. ಅವರನ್ನ ಎನ್ಕೌಂಟರ್ ಮಾಡಿಸಲು ಏನ್ ತೊಂದರೆ ಇತ್ತು? ಕರ್ನಾಟಕಕ್ಕೆ ಒಬ್ಬ ಯೋಗಿ ಆದಿತ್ಯನಾಥ್ ಬೇಕೇ ಹೊರತು ಜಾತಿವಾದಿ ನಾಯಕರಲ್ಲ. ಹಿಂದುಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕರು ಬೇಕು ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us