AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISKCON: ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ; ಹಲವರಿಗೆ ಗಾಯ, ಓರ್ವ ಭಕ್ತನ ಹತ್ಯೆ

Bangladesh Attack: ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದಲ್ಲಿ ನಡೆದ ದಾಳಿಯಲ್ಲಿ ಅನೇಕ ಭಕ್ತರು ಗಾಯಗೊಂಡಿದ್ದಾರೆ. ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ದಸರಾ ಆಚರಣೆಗೆ ಸೇರಿದ್ದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ.

ISKCON: ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ; ಹಲವರಿಗೆ ಗಾಯ, ಓರ್ವ ಭಕ್ತನ ಹತ್ಯೆ
ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 16, 2021 | 5:11 PM

Share

ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನಗಳು ಹಾಗೂ ಪೆಂಡಾಲ್​ಗಳ ಮೇಲೆ ಗೂಂಡಾಗಳು ದಾಳಿ ನಡೆಸಿ ನಾಲ್ಕು ಜನರನ್ನು ಹತ್ಯೆ ಮಾಡಿದ್ದ ಘಟನೆ ಗುರುವಾರ ನಡೆದಿತ್ತು. ಅದಕ್ಕೆ ಬಾಂಗ್ಲಾದೇಶ ಮಾತ್ರವಲ್ಲದೆ ಭಾರತ ಮುಂತಾದ ಬೇರೆ ದೇಶಗಳಿಂದಲೂ ವಿರೋಧ ವ್ಯಕ್ತವಾಗಿತ್ತು. ಇದೀಗ ಅದರ ಬೆನ್ನಲ್ಲೇ ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಭಕ್ತರ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಇಸ್ಕಾನ್ ದೇವಸ್ಥಾನದ ಭಕ್ತರೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಅವರ ಶವವನ್ನು ವಶಕ್ಕೆ ಪಡೆಯಲಾಗಿದೆ.

ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದಲ್ಲಿ ನಡೆದ ದಾಳಿಯಲ್ಲಿ ಅನೇಕ ಭಕ್ತರು ಗಾಯಗೊಂಡಿದ್ದಾರೆ. ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ದಸರಾ ಆಚರಣೆಗೆ ಸೇರಿದ್ದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ. ದೇವಸ್ಥಾನದ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯ ವೇಳೆ ಇಸ್ಕಾನ್ ದೇವಸ್ಥಾನದಲ್ಲಿದ್ದ ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಮೂರ್ತಿಯನ್ನು ಗೂಂಡಾಗಳು ಸುಟ್ಟುಹಾಕಿದ್ದಾರೆ.

ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಕುರಿತು ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ದುರ್ಗಾ ಪೂಜೆ ನಡೆಯುವ ಸ್ಥಳ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಂಗ್ಲಾದೇಶದಲ್ಲಿ ಕೋಮು ಗಲಭೆಗೆ ಕಾರಣರಾದ ಆರೋಪಿಗಳನ್ನು ಹುಡುಕಿ ಅವರಿಗೆ ತಕ್ಕ ಶಿಕ್ಷೆ ನೀಡಲಾಗುವುದು. ಈ ಹಿಂಸಾಚಾರವನ್ನು ನಮ್ಮ ಸರ್ಕಾರ ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ನೀಡಲಾಗುವುದು ಎಂಬ ಭರವಸೆ ನೀಡಿದ್ದರು.

ತಪ್ಪು ಮಾಡಿದವರು ಯಾವುದೇ ಧರ್ಮದವರಾದರೂ ದೇಶದ ಶಾಂತಿ ಕದಡುವ ಪ್ರಯತ್ನ ಮಾಡಿದವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ದುರ್ಗಾ ಪೂಜೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಸೆರೆ ಹಿಡಿದು, ಶಿಕ್ಷೆ ವಿಧಿಸಲಾಗುವುದು ಎಂದು ಶೇಖ್ ಹಸೀನಾ ಹೇಳಿದ್ದರು.

ಆದರೆ, ಅದರ ಬೆನ್ನಲ್ಲೇ ಮತ್ತೆ ಇಸ್ಕಾನ್ ದೇವಸ್ಥಾನ ಹಾಗೂ ಭಕ್ತರ ಮೇಲೆ ದಾಳಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಹಿಂದೂಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಇದನ್ನೂ ಓದಿ: ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದವರನ್ನು ಹುಡುಕಿ, ಶಿಕ್ಷೆ ನೀಡುತ್ತೇವೆ; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭರವಸೆ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದಾಳಿ; ಮೂವರು ಸಾವು