ಬಾಂಗ್ಲಾದೇಶ: ಬೀಗ ಹಾಕಿದ ಮನೆಯಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ

ಬಾಂಗ್ಲಾದೇಶದ ರಂಗ್‌ಪುರದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಗಣಪತಿ ಚಕ್ರವರ್ತಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಶವಗಳು ಬೀಗ ಹಾಕಿದ ಮನೆಯಲ್ಲಿ ಪತ್ತೆಯಾಗಿವೆ. ಕುಟುಂಬದ ನಾಲ್ವರ ಭೀಕರ ಹತ್ಯೆ ದೇಶದಲ್ಲಿ ಆಘಾತ ಮೂಡಿಸಿದೆ. ರಾಜಕೀಯ ಅಸ್ಥಿರತೆಯ ಬಳಿಕ ಹಿಂದೂ ಸಮುದಾಯದ ಮೇಲೆ ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಈ ಘಟನೆ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ವ್ಯಾಪಕ ಆತಂಕ ಸೃಷ್ಟಿಸಿದೆ. ತನಿಖೆ ಮುಂದುವರಿದಿದೆ.

ಬಾಂಗ್ಲಾದೇಶ: ಬೀಗ ಹಾಕಿದ ಮನೆಯಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ
ಬಾಂಗ್ಲಾದೇಶ

Updated on: Aug 23, 2026 | 2:59 PM

ಢಾಕಾ, ಆಗಸ್ಟ್​ 23: ಬಾಂಗ್ಲಾದೇಶ(Bangladesh)ದ ಉತ್ತರ ಭಾಗದ ರಂಗ್‌ಪುರ ನಗರದಲ್ಲಿ ನಿವೃತ್ತ ಹಿಂದೂ ಶಾಲಾ ಶಿಕ್ಷಕ, ಅವರ ಪತ್ನಿ, ಯುವತಿ ಹಾಗೂ ಅಪ್ರಾಪ್ತ ಮಗ ಸೇರಿ ಒಂದೇ ಕುಟುಂಬದ ನಾಲ್ವರು ತಮ್ಮದೇ ಮನೆಯೊಳಗೆ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ನಗರದ ದಸ್ಪಾರಾ  ಪ್ರದೇಶದಲ್ಲಿರುವ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಪೊಲೀಸರು ಶನಿವಾರ ರಾತ್ರಿ ಶವಗಳನ್ನು ಹೊರತೆಗೆದಿದ್ದಾರೆ ಎಂದು ರಂಗ್‌ಪುರ ಮೆಟ್ರೋಪಾಲಿಟನ್ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಇಂಗ್ಲಿಷ್ ಎಂ.ಎ ಪದವೀಧರೆ ಮಗಳು ಅಗಾಮಿ ಚಕ್ರವರ್ತಿ ಪ್ರಾರ್ಥಿ (23) ಮತ್ತು 5ನೇ ತರಗತಿ ವಿದ್ಯಾರ್ಥಿ ಪ್ರಿಯಂ ಚಕ್ರವರ್ತಿ (12).

ಮನೆಯಲ್ಲಿದ್ದ ಭೀಕರ ದೃಶ್ಯ: ಸಿಐಡಿ ಅಧಿಕಾರಿಗಳ ಪ್ರಕಾರ, ತಾಯಿ ಮತ್ತು ಮಗಳ ಶವಗಳು ಮೆಟ್ಟಿಲ ಬಳಿ, ನಿವೃತ್ತ ಶಿಕ್ಷಕ ಗಣಪತಿ ಅವರ ಶವ ಮನೆಯ ಮೇಲ್ಛಾವಣಿ (ರೂಫ್) ಮೇಲೆ ಹಾಗೂ 12 ವರ್ಷದ ಬಾಲಕನ ಶವ ಮಲಗುವ ಕೋಣೆಯ ಬೆಡ್ ಕೆಳಗೆ ಪತ್ತೆಯಾಗಿದೆ.

ಮತ್ತಷ್ಟು ಓದಿ: ಭಾರತ-ಬಾಂಗ್ಲಾದೇಶ ಗಡಿ ಭದ್ರಪಡಿಸದೆ ಪಶ್ಚಿಮ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ

ಫೋನ್‌ಗಳು ಸ್ವಿಚ್ ಆಫ್: ಗುರುವಾರ ಮಧ್ಯಾಹ್ನದ ನಂತರ ಕುಟುಂಬಸ್ಥರ ನಾಲ್ಕೂ ಮೊಬೈಲ್ ಫೋನ್‌ಗಳು ಏಕಕಾಲದಲ್ಲಿ ಸ್ವಿಚ್ ಆಫ್ ಆಗಿದ್ದವು. ಅನುಮಾನಗೊಂಡು ಸಂಬಂಧಿಕರು ಮನೆಗೆ ತೆರಳಿದಾಗ ಮುಖ್ಯ ದ್ವಾರಕ್ಕೆ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂದಿತ್ತು.

ನಿವೃತ್ತಿಯ ಬಳಿಕ ಹೋಮಿಯೋಪತಿ ಚಿಕಿತ್ಸೆ ನೀಡುತ್ತಿದ್ದ ಗಣಪತಿ ಅವರಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಇಡೀ ಕುಟುಂಬವನ್ನು ಈ ರೀತಿ ನಿರ್ದಯವಾಗಿ ಹತ್ಯೆ ಮಾಡಿರುವುದು ಆಘಾತ ತಂದಿದೆ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ಅಪರಾಧ ತನಿಖಾ ಇಲಾಖೆ (CID) ಮತ್ತು ಡಿಟೆಕ್ಟಿವ್ ಬ್ರಾಂಚ್ (DB) ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರಾಜಕೀಯ ಅಸ್ಥಿರತೆಯ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರು, ಅವರ ಮನೆಗಳು ಹಾಗೂ ಆಸ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬೆನ್ನಲ್ಲೇ ಈ ಘಟನೆ ನಡೆದಿರುವುದು ವ್ಯಾಪಕ ಆತಂಕ ಮೂಡಿಸಿದೆ.

ಉನ್ನತ ಮಟ್ಟದ ತನಿಖೆಗೆ ಆಗ್ರಹ: ಸ್ಥಳೀಯ ಹಿಂದೂ ಸಂಘಟನೆಗಳು ಈ ಭೀಕರ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us