ವಿಶ್ವಸಂಸ್ಥೆಯಲ್ಲಿ ಭಾರತದ ಘರ್ಜನೆ: ಭಯೋತ್ಪಾದನೆ ಹರಡುವ ಪಾಕಿಸ್ತಾನಕ್ಕೆ ಹನಿ ನೀರೂ ಸಿಗಲ್ಲ, ಸಿಂಧೂ ಒಪ್ಪಂದ ಇನ್ಮುಂದೆ ನಿಷ್ಪ್ರಯೋಜಕ
ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದೆ. ಭಯೋತ್ಪಾದನೆಯನ್ನು ಹರಡುತ್ತಿರುವ ಪಾಕಿಸ್ತಾನಕ್ಕೆ ಇನ್ನು ಸಿಂಧೂ ಜಲ ಒಪ್ಪಂದದ ಲಾಭ ಸಿಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಯ ನಂತರ ಭಾರತ ಒಪ್ಪಂದ ಸ್ಥಗಿತಗೊಳಿಸಿದ್ದು, ಇದನ್ನು ನಿಷ್ಪ್ರಯೋಜಕ ಎಂದು ಘೋಷಿಸಿದೆ. PoK ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಒತ್ತಿಹೇಳಿದೆ.

ಜೆನಿವಾ, ಜೂನ್ 19: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಭಾರತವು ಪಾಕಿಸ್ತಾನ(Pakistan)ಕ್ಕೆ ನಡುಕ ಹುಟ್ಟಿಸುವಂತಹ ರಾಜತಾಂತ್ರಿಕ ಪೆಟ್ಟು ನೀಡಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನ ಭಾರತೀಯರು ಮೃತಪಟ್ಟ ನಂತರ, ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು.
ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಲು ಬಂದ ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಉತ್ತರಿಸಿರುವ ಭಾರತದ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್, ಒಂದೆಡೆ ಗಡಿಯಾಚೆಗೆ ಭಯೋತ್ಪಾದನೆಯನ್ನು ಹರಡುತ್ತಾ, ಇನ್ನೊಂದೆಡೆ ನೀರು ಹಂಚಿಕೆ ಒಪ್ಪಂದದಿಂದ ಲಾಭ ಪಡೆಯಲು ಯತ್ನಿಸುವುದು ತರ್ಕಕ್ಕೆ ಮೀರಿದ್ದು. 66 ವರ್ಷಗಳಷ್ಟು ಹಳೆಯದಾದ ಆ ಒಪ್ಪಂದ ಇಂದಿನ ಕಾಲಕ್ಕೆ ಸಂಪೂರ್ಣ ನಿಷ್ಪ್ರಯೋಜಕ ಎಂದು ಘೋಷಿಸಿದ್ದಾರೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪಾಕಿಸ್ತಾನವು ತನ್ನ ದೇಶದ ಒಟ್ಟು ಕೃಷಿಯ ಶೇಕಡಾ 80 ರಷ್ಟು ಮತ್ತು ಕುಡಿಯುವ ನೀರಿನ ಶೇಕಡಾ 93 ರಷ್ಟು ಅಗತ್ಯಕ್ಕೆ ಇದೇ ಸಿಂಧೂ ನದಿ ನೀರನ್ನು ಅವಲಂಬಿಸಿದೆ. ಭಾರತವು ಈ ಒಪ್ಪಂದವನ್ನು ನಿಷ್ಪ್ರಯೋಜಕ ಎಂದು ಕರೆದಿರುವುದು ಪಾಕಿಸ್ತಾನದ ಬೆನ್ನುಮೂಳೆ ಮುರಿದಂತಾಗಿದೆ.
ವಿಡಿಯೋ
#WATCH | First Secretary at the Permanent Mission of India to the United Nations, Anupama Singh says, “This is the country where the sitting Defense Minister boast of hosting, training and deploying terrorist estate policy and yet Pakistan calls itself a victim of terrorism,… pic.twitter.com/OrKNKUITev
— ANI (@ANI) June 18, 2026
‘ಫ್ರಾಂಕೆನ್ಸ್ಟೈನ್ ಸ್ಟೇಟ್’ ಪಾಕಿಸ್ತಾನ: ಪಾಕಿಸ್ತಾನವು ತಾನೇ ಭಯೋತ್ಪಾದಕ ಸಂಘಟನೆಗಳನ್ನು ಸಾಕಿ ಬೆಳೆಸಿದ ಒಂದು ರಾಕ್ಷಸ ದೇಶ. ಈಗ ಅದೇ ರಾಕ್ಷಸರು ತಿರುಗಿ ತನ್ನನ್ನು ಕಚ್ಚುತ್ತಿರುವಾಗ ಪಾಕಿಸ್ತಾನ ಜಗತ್ತಿನೆದುರು ಆಶ್ಚರ್ಯದ ನಾಟಕವಾಡುತ್ತಿದೆ. ಅವರದೇ ರಕ್ಷಣಾ ಸಚಿವರು ಉಗ್ರರಿಗೆ ತರಬೇತಿ ನೀಡುವುದಾಗಿ ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಇಂತಹ ದ್ವಂದ್ವ ನೀತಿ ಜಗತ್ತಿಗೆ ಗೊತ್ತಿದೆ ಎಂದು ಅನುಪಮಾ ಸಿಂಗ್ ಛೀಮಾರಿ ಹಾಕಿದ್ದಾರೆ.
ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಪಿಒಕೆಯಲ್ಲಿ ಪಾಕ್ ಸೇನೆ ಕ್ರೌರ್ಯ ಬಯಲು: ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಕೋಟ್ನಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಕ್ರೂರ ದಮನವನ್ನು ಭಾರತ ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಿದೆ. ಅಲ್ಲಿನ ಜನ ಆಹಾರ, ವಿದ್ಯುತ್ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರೆ, ಪಾಕ್ ಸರ್ಕಾರ ಅವರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. ಮಿಲಿಟರಿ ಬಲಪ್ರಯೋಗದಿಂದ ಆಕ್ರಮಿಸಿಕೊಂಡಿರುವ ಜಾಗವನ್ನು ದಬ್ಬಾಳಿಕೆಯಿಂದ ಮಾತ್ರ ಇಡಲು ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ ಎಂದು ಭಾರತ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಜಂಟಿಯಾಗಿ ಮಾಡಿರುವ ಎಲ್ಲಾ ಆಧಾರರಹಿತ ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನವು ತನ್ನ ದೇಶದ ಆಂತರಿಕ ದಿವಾಳಿತನ ಮತ್ತು ಹಸಿವಿನ ಬಿಕ್ಕಟ್ಟನ್ನು ಮರೆಮಾಚಲು ಈ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ.
ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿತ್ತು, ಇದೆ ಮತ್ತು ಮುಂದೆಯೂ ಇರಲಿದೆ. ಅಲ್ಲಿ ಈಗ ಚರ್ಚಿಸಬೇಕಾದ ಒಂದೇ ಒಂದು ವಿಷಯವೆಂದರೆ ಪಾಕಿಸ್ತಾನವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ನಮ್ಮ ಭಾರತೀಯ ಪ್ರದೇಶಗಳನ್ನು (PoK) ತಕ್ಷಣವೇ ಖಾಲಿ ಮಾಡಿ ನಮಗೆ ಒಪ್ಪಿಸುವುದು ಮಾತ್ರ ಎಂದು ಭಾರತದ ರಾಜತಾಂತ್ರಿಕರು ಖಡಕ್ ಸಂದೇಶ ರವಾನಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




