ಭಾರತ ನಡೆಸಿದ ದಾಳಿಯಲ್ಲಿ ಜೈಶ್ ಮುಖ್ಯಸ್ಥನ ಕುಟುಂಬದ 10 ಜನ, 4 ಸಹಚರರು ಸಾವು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ. ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳ ಮೇಲೆ ವೈಮಾಣಿಕ ದಾಳಿ ನಡೆಸಿದೆ. ಭಾರತ ನಡೆಸಿದ 'ಆಪರೇಷನ್ ಸಿಂಧೂರ್'ನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್ನಲ್ಲಿ 26 ಜನರನ್ನು ಕೊಂದಿದ್ದರು. ಅದಕ್ಕೆ ಉಗ್ರರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.

ಇಸ್ಲಾಮಾಬಾದ್, ಮೇ 7: ಪಾಕಿಸ್ತಾನದ ಬಹವಾಲ್ಪುರದಲ್ಲಿ ನಡೆದ ಭಾರತದ ವೈಮಾನಿಕ ದಾಳಿಯಲ್ಲಿ (Indian Airstrikes) ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮಸೂದ್ ಅಜರ್ ಹೇಳಿರುವುದಾಗಿ ಬಿಬಿಸಿ ಉರ್ದು ವರದಿ ಮಾಡಿದೆ. ಇಂದು ಬೆಳಗಿನ ಜಾವ 1.05ಕ್ಕೆ ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಶ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ಮಾಡಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಜನರನ್ನು ಕೊಂದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಭಾರತ ನೀಡಿದ ಪ್ರತಿಕ್ರಿಯೆಯಾಗಿ ‘ಆಪರೇಷನ್ ಸಿಂಧೂರ್‘ನ (Operation Sindoor) ಭಾಗವಾಗಿ ಬಹವಾಲ್ಪುರದ ಸುಭಾನ್ ಅಲ್ಲಾ ಸಂಕೀರ್ಣದ ಮೇಲಿನ ದಾಳಿಗಳು ಭಾರತ ನಡೆಸಿದ 2 ಮಹತ್ವದ ದಾಳಿಗಳಲ್ಲಿ ಒಂದಾಗಿದೆ.
ಭಾರತದ ದಾಳಿಯಲ್ಲಿ ಮೃತಪಟ್ಟವರಲ್ಲಿ ಜೈಶ್ ಸಂಘಟನೆಯ ಮುಖ್ಯಸ್ಥ ಅಜರ್ನ ಅಕ್ಕ ಮತ್ತು ಆಕೆಯ ಪತಿ, ಅವರ ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ ಎಂದು ಬಿಬಿಸಿ ಉರ್ದು ಜೆಇಎಂ ಮುಖ್ಯಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಅಜರ್ ಮತ್ತು ಅವರ ತಾಯಿಯ ಆಪ್ತ ಸಹಾಯಕ ಮತ್ತು ಇತರ ಇಬ್ಬರು ಆಪ್ತ ಸಹಚರರು ಸಹ ಭಾರತೀಯ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಭಾರತದ ದಾಳಿಯಿಂದ ಕೋಪಗೊಂಡು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡು ಹಾರಿಸಿದ ಪಾಕ್, 10 ನಾಗರಿಕರು ಸಾವು
ಬಹವಾಲ್ಪುರ್ ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾಗಿದ್ದು, ಲಾಹೋರ್ನಿಂದ 400 ಕಿ.ಮೀ ದೂರದಲ್ಲಿದೆ. ಮಸೀದಿಯನ್ನು ಹೊಂದಿರುವ ಸುಭಾನ್ ಅಲ್ಲಾ ಶಿಬಿರವು ಇದೀಗ ಅವಶೇಷಗಳಾಗಿ ಮಾರ್ಪಟ್ಟಿದೆ. 18 ಎಕರೆಗಳಲ್ಲಿ ಹರಡಿರುವ ಈ ಶಿಬಿರವನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯಲಾಗುತ್ತದೆ. ಇದು ಜೆಇಎಂನ ನೇಮಕಾತಿ, ನಿಧಿ ಸಂಗ್ರಹಣೆ ಮತ್ತು ಬೋಧನೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
Jaish-e-Mohammad chief Masood Azhar says 10 members of his family and four close associates killed in Indian missile attack in Bahawalpur
Those killed in Indian missile strikes included JeM chief’s elder sister and her husband, a nephew and his wife. pic.twitter.com/7Cs5gdodv0
— Press Trust of India (@PTI_News) May 7, 2025
ಇದನ್ನೂ ಓದಿ: Operation Sindoor: ಭಾರತದ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಮುಡ್ರಿಕೆ ನಗರದ ಮಸೀದಿಯೊಂದು ನೆಲಸಮ
2000ರಲ್ಲಿ ಮಸೂದ್ ಅಜರ್ ಜೆಇಎಂ ಅನ್ನು ಸ್ಥಾಪಿಸಿದನು. 2001ರ ಪಾರ್ಲಿಮೆಂಟ್ ದಾಳಿ, 2016ರ ಪಠಾಣ್ಕೋಟ್ ಮತ್ತು 2019ರ ಪುಲ್ವಾಮಾ ದಾಳಿಗಳು ಸೇರಿದಂತೆ ಭಾರತೀಯ ನೆಲದಲ್ಲಿ ನಡೆದ ಹಲವಾರು ಮಾರಕ ದಾಳಿಗಳ ಹಿಂದೆ ಈತನ ಕೈವಾಡವಿದೆ. ಬಹವಾಲ್ಪುರದಲ್ಲಿ ಜನಿಸಿದ ಅಜರ್ ಆ ನಗರದಲ್ಲಿ ಭಾರೀ ಭದ್ರತೆಯ ಸಂಕೀರ್ಣದಲ್ಲಿ ವಾಸಿಸುತ್ತಾನೆ.
ಭಾರತದ ಅತಿ ದೊಡ್ಡ ಒತ್ತೆಯಾಳು ಬಿಕ್ಕಟ್ಟಾದ ಇಂಡಿಯನ್ ಏರ್ಲೈನ್ಸ್ ಫ್ಲೈಟ್ 814ರಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಬದಲಾಗಿ ಭಾರತ ಬಿಡುಗಡೆ ಮಾಡಿದ ಮೂವರು ಭಯೋತ್ಪಾದಕರಲ್ಲಿ ಅಜರ್ ಕೂಡ ಒಬ್ಬ. ಕಠ್ಮಂಡುವಿನಿಂದ ದೆಹಲಿಗೆ ಹೋಗುತ್ತಿದ್ದ ವಿಮಾನವನ್ನು 1999ರಲ್ಲಿ ಅಮೃತಸರ, ಲಾಹೋರ್, ದುಬೈ ಮತ್ತು ನಂತರ ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದ ಕಂದಹಾರ್ಗೆ ಹಾರಿಸಲಾಯಿತು. ಈ ವಿಮಾನವನ್ನು ಅಪಹರಿಸಿದ ಐದು ಭಯೋತ್ಪಾದಕರು ವಿಮಾನದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕೊಂದಿದ್ದರು. ಅವರು ತಮ್ಮ ಪತ್ನಿಯೊಂದಿಗೆ ತಮ್ಮ ಹನಿಮೂನ್ಗಾಗಿ ನೇಪಾಳಕ್ಕೆ ಹೋಗಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ