AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ನಾವು ಭಿಕ್ಷೆ ಬೇಡುತ್ತಿದ್ದೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ” ಎಂದ ಪಾಕ್ ಪ್ರಧಾನಿ

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ದೇಶದ ದುಸ್ಥಿತಿಯನ್ನು ಭಾವುಕರಾಗಿ ಒಪ್ಪಿಕೊಂಡಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ಗಗನಕ್ಕೇರಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಚೀನಾ ಮತ್ತು IMF ಸಾಲದ ಬಡ್ಡಿ ಕಟ್ಟುವುದೇ ದೊಡ್ಡ ಹೊರೆಯಾಗಿದೆ. ಈ ಪರಿಸ್ಥಿತಿ ಭಾರತದ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ನೇರ ಹಾಗೂ ಪರೋಕ್ಷ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಾವು ಭಿಕ್ಷೆ ಬೇಡುತ್ತಿದ್ದೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ ಎಂದ ಪಾಕ್ ಪ್ರಧಾನಿ
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Jan 31, 2026 | 1:48 PM

Share

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇತ್ತೀಚೆಗೆ ತಮ್ಮ ದೇಶದ ಆರ್ಥಿಕ ದುಸ್ಥಿತಿಯ ಬಗ್ಗೆ ನೀಡಿರುವ ಈ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ತಮ್ಮ ದೇಶದ ಆರ್ಥಿಕ ಬಿಕ್ಕಟ್ಟನ್ನು (Pakistan economic crisi) ಒಪ್ಪಿಕೊಳ್ಳುತ್ತಾ ಅವರು ಅತ್ಯಂತ ಭಾವುಕರಾಗಿ ಈ ಮಾತುಗಳನ್ನು ಆಡಿದ್ದಾರೆ. ಪಾಕಿಸ್ತಾನವು ಪ್ರತಿ ಬಾರಿಯೂ ಮಿತ್ರ ರಾಷ್ಟ್ರಗಳ ಮುಂದೆ ಸಾಲಕ್ಕಾಗಿ ಕೈಚಾಚುತ್ತಿರುವುದನ್ನು ಪ್ರಸ್ತಾಪಿಸಿದ ಅವರು, “ನಮ್ಮ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ನಾವು ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅವರು ನಾವು ಸಹಾಯ ಕೇಳಲು ಬಂದಿದ್ದೇವೆ ಎಂದು ಭಾವಿಸುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದ ಸ್ಥಿತಿಯನ್ನು ಕಂಡು “ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ” ಎಂದು ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನವು ಒಂದು ಪರಮಾಣು ಶಕ್ತಿಯನ್ನು ಹೊಂದಿರುವ ದೇಶವಾಗಿದ್ದರೂ, ಸಣ್ಣ ಪುಟ್ಟ ಆರ್ಥಿಕ ಅಗತ್ಯಗಳಿಗೂ ಬೇರೆಯವರನ್ನು ಅವಲಂಬಿಸಿರುವುದು ವಿಪರ್ಯಾಸ ಎಂದು ಹೇಳಿದೆ. ಚೀನಾ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ನಿಂದ ಪಡೆದ ಸಾಲದ ಬಡ್ಡಿ ಕಟ್ಟುವುದೇ ದೊಡ್ಡ ಹೊರೆಯಾಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಹಿಟ್ಟು, ಬೇಳೆ ಮತ್ತು ವಿದ್ಯುತ್‌ಗಾಗಿ ಪರದಾಡುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ಕಿತ್ತಾಟಗಳು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿವೆ. ದೇಶದ ಬಳಿ ಕೇವಲ ಕೆಲವೇ ವಾರಗಳ ಆಮದಿಗೆ ಸಾಕಾಗುವಷ್ಟು ಮಾತ್ರ ಡಾಲರ್ ಸಂಗ್ರಹವಿದೆ.

ಶೆಹಬಾಜ್ ಷರೀಫ್ ಅವರು ದೇಶದ ಉದ್ಯಮಿಗಳು ಮತ್ತು ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸುವ ಮೂಲಕ ಮತ್ತು ಸರ್ಕಾರವು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ದೇಶವನ್ನು ಈ ಸಂಕಷ್ಟದಿಂದ ಪಾರು ಮಾಡಬೇಕೆಂದು ಕರೆ ನೀಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಕುಸಿತವು ಕೇವಲ ಆ ದೇಶಕ್ಕೆ ಸೀಮಿತವಾಗಿಲ್ಲ; ಅದರ ನೆರೆಹೊರೆಯ ರಾಷ್ಟ್ರವಾಗಿ ಭಾರತದ ಮೇಲೆ ಇದು ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಪಾಕಿಸ್ತಾನದ ಆಡಳಿತಗಾರರು ಆಂತರಿಕ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಆಕ್ರೋಶದಿಂದ ಗಮನ ಬೇರೆಡೆ ಸೆಳೆಯಲು ಭಾರತದ ವಿರುದ್ಧ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಅಥವಾ ಉಗ್ರವಾದವನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ. ಪಾಕಿಸ್ತಾನವು ಸಂಪೂರ್ಣವಾಗಿ ವಿಫಲ ರಾಷ್ಟ್ರವಾದರೆ , ಅಲ್ಲಿನ ಪರಮಾಣು ಶಸ್ತ್ರಾಸ್ತ್ರಗಳು ಉಗ್ರರ ಕೈ ಸೇರುವ ಸಾಧ್ಯತೆ ಇದೆ. ಇದು ಭಾರತಕ್ಕೆ ದೊಡ್ಡ ತಲೆನೋವಾಗಬಹುದು.

ಒಂದು ವೇಳೆ ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ದಂಗೆಗಳು ನಡೆದು ಪರಿಸ್ಥಿತಿ ಕೈಮೀರಿದರೆ, ಗಡಿ ಭಾಗದ ಜನರು ಜೀವ ಉಳಿಸಿಕೊಳ್ಳಲು ಭಾರತದ ಕಡೆಗೆ ನುಸುಳುವ ಸಾಧ್ಯತೆ ಇರುತ್ತದೆ. ಇದು ಭಾರತದ ಗಡಿ ಭದ್ರತೆ ಮತ್ತು ಸಂಪನ್ಮೂಲಗಳ ಮೇಲೆ ಒತ್ತಡ ಹೇರಬಹುದು. ಪಾಕಿಸ್ತಾನದ ಬಳಿ ಡಾಲರ್ ಇಲ್ಲದಿರುವುದರಿಂದ, ಅವರು ಭಾರತದಿಂದ ಅಗತ್ಯ ವಸ್ತುಗಳನ್ನು (ಉದಾಹರಣೆಗೆ ಔಷಧ ಅಥವಾ ಸಕ್ಕರೆ) ಆಮದು ಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ (SAARC) ಆರ್ಥಿಕ ಅಸ್ಥಿರತೆ ಉಂಟಾದರೆ, ಈ ವಲಯಕ್ಕೆ ಬರುವ ವಿದೇಶಿ ಹೂಡಿಕೆದಾರರು ತುಸು ಹಿಂಜರಿಯಬಹುದು, ಇದು ಪರೋಕ್ಷವಾಗಿ ಭಾರತದ ಮೇಲೂ ಪರಿಣಾಮ ಬೀರಬಹುದು. ಇದರ ಜತೆಗೆ ಪಾಕಿಸ್ತಾನ ಸಾಲ ತೀರಿಸಲಾಗದೆ ಹೋದರೆ, ಚೀನಾ ಅಲ್ಲಿನ ಬಂದರು ಮತ್ತು ಆಯಕಟ್ಟಿನ ಜಾಗಗಳನ್ನು ವಶಪಡಿಸಿಕೊಳ್ಳಬಹುದು ಭಾರತದ ನೆರೆಹೊರೆಯಲ್ಲಿ ಚೀನಾದ ಈ ಪ್ರಾಬಲ್ಯ ಭಾರತದ ಭದ್ರತೆಗೆ ಸವಾಲಾಗಬಹುದು.

ಇದನ್ನೂ ಓದಿ: ಪ್ರಧಾನಿ ಮೋದಿ ಜತೆಗೆ ವೆನೆಜುವೆಲಾ ಅಧ್ಯಕ್ಷೆ ಒಪ್ಪಂದ: ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ?

ಪಾಕಿಸ್ತಾನದಲ್ಲಿ ಹಣದುಬ್ಬರ ಪ್ರಮಾಣ 30% ರಿಂದ 40% ದಾಟಿದೆ. ದಿನಬಳಕೆಯ ವಸ್ತುಗಳಾದ ಗೋಧಿ ಹಿಟ್ಟು, ಹಾಲು ಮತ್ತು ಈರುಳ್ಳಿ ಬೆಲೆಗಳು ಸಾಮಾನ್ಯ ಜನರ ಕೈಗೆಟುಕದಂತಾಗಿವೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿದಿದ್ದು, ಆಮದು ಮಾಡಿಕೊಳ್ಳುವ ವಸ್ತುಗಳು (ತೈಲ, ಗ್ಯಾಸ್) ವಿಪರೀತ ತುಟ್ಟಿಯಾಗಿವೆ. ಪಾಕಿಸ್ತಾನವು ತನ್ನ ಜಿಡಿಪಿಯ (GDP) ಬಹುದೊಡ್ಡ ಭಾಗವನ್ನು ಸಾಲದ ಬಡ್ಡಿ ಕಟ್ಟಲಿಕ್ಕೇ ವ್ಯಯಿಸುತ್ತಿದೆ. ಪಾಕಿಸ್ತಾನದ ಒಟ್ಟು ವಿದೇಶಿ ಸಾಲದ ಬಹುಪಾಲು ಚೀನಾದ್ದಾಗಿದೆ. ಚೀನಾದ ‘ಸಾಲದ ಸುಳಿ’ ರಾಜತಾಂತ್ರಿಕತೆಗೆ ಪಾಕಿಸ್ತಾನ ಬಲಿಯಾಗುತ್ತಿದೆ ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ನೀಡಲು ವಿದ್ಯುತ್ ದರ ಏರಿಕೆ ಮತ್ತು ಸಬ್ಸಿಡಿ ಕಡಿತದಂತಹ ಕಠಿಣ ಷರತ್ತುಗಳನ್ನು ವಿಧಿಸಿದೆ, ಇದು ಅಲ್ಲಿನ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಶೆಹಬಾಜ್ ಷರೀಫ್ ಅವರು ಹೇಳಿದಂತೆ, ಪಾಕಿಸ್ತಾನವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಹಂತದಲ್ಲಿದೆ. ಸುಧಾರಣೆಗಳಿಲ್ಲದೆ ಈ ಸುಳಿಯಿಂದ ಹೊರಬರುವುದು ಅಸಾಧ್ಯದ ಮಾತು ಎಂದು ಹೇಳಲಾಗಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ