KMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

Can Amul Compete With KMF?: ಮುಂಬೈ, ಹೈದರಾಬಾದ್, ಚೆನ್ನೈ ಮೊದಲಾದ ಕೆಲ ನಗರಗಳಲ್ಲಿ ಕೆಎಂಎಫ್ ಮತ್ತು ಅಮುಲ್ ಪ್ರತಿಸ್ಪರ್ಧಿಗಳಾಗಿವೆ. ಬೆಂಗಳೂರಿಗೆ ಅಡಿ ಇಡಲು ಅಮುಲ್ ಯೋಜಿಸುತ್ತಿದೆ. ಆದರೆ, ಅತಿ ಕಡಿಮೆ ಬೆಲೆಗೆ ಹಾಲು ಕೊಡುವ ಕೆಎಂಎಫ್​ನ ಮಾರುಕಟ್ಟೆ ಪ್ರಾಬಲ್ಯವನ್ನು ಅಮುಲ್​ಗೆ ಮುರಿಯಲು ಸಾಧ್ಯವಾ?

KMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ
ಕೆಎಂಎಫ್ ಮತ್ತು ಅಮುಲ್

Updated on: Apr 08, 2023 | 3:39 PM

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಮಂಡ್ಯದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಗುಜರಾತ್​ನ ಅಮುಲ್ (AMUL) ಮತ್ತು ಕರ್ನಾಟಕದ ಕೆಎಂಎಫ್ (KMF) ಮಧ್ಯೆ ಸಹಕಾರ ತರುವ ವಿಚಾರ ಪ್ರಸ್ತಾಪಿಸಿದ್ದರು. ಅದೀಗ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ದೇಶದ ಅತಿದೊಡ್ಡ ಹಾಲು ಉತ್ಪಾದಕ ಸಂಸ್ಥೆ ಎನಿಸಿದ ಅಮುಲ್ ಜೊತೆ ಕೆಎಂಎಫ್ ಅನ್ನು ವಿಲೀನಗೊಳಿಸುವ (Merger) ಹುನ್ನಾರ ನಡೆದಿದೆ ಎಂಬಂತಹ ಚರ್ಚೆಗಳು ವ್ಯಾಪಕವಾಗಿ ನಡೆದಿದೆ. ಇದೆಲ್ಲದರ ಮಧ್ಯೆ ಅಮುಲ್​ನ ಹಾಲು ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಹಾಕಲು ಸಜ್ಜಾಗಿದೆ. ಈಗಾಗಲೇ ಹೆಚ್ಚುವರಿ ಹಾಲು ಇಟ್ಟುಕೊಂಡು ಸಂಕಟ ಪಡುತ್ತಿರುವ ಕೆಎಂಎಫ್​ಗೆ ಈಗ ಅಮುಲ್ ಎಂಟ್ರಿಯಾಗುತ್ತಿರುವುದು ಇನ್ನಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ. ಕರ್ನಾಟಕದ ಮಾರುಕಟ್ಟೆಗೆ ಅಡಿ ಇಡಬೇಡಿ ಎಂದು ಕೋರಿ ಅಮುಲ್ ಸಂಸ್ಥೆಗೆ ಕೆಎಂಎಫ್ ಪತ್ರ ಬರೆಯಲು ಆಲೋಚಿಸಿದೆ. ಹಾಗೆಯೇ, ಎರಡು ದೊಡ್ಡ ಹಾಲಿನ ಒಕ್ಕೂಟಗಳು ಒಂದೇ ಸ್ಥಳದಲ್ಲಿ ಸ್ಪರ್ಧೆ ನಡೆಸುವ ವಿಚಾರದ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಗಮನಕ್ಕೆ ತರಲೂ ಕೆಎಂಎಫ್ ಮುಂದಾಗಿದೆ.

ಅಮುಲ್ ಸಂಸ್ಥೆ ಗುಜರಾತ್ ಮೂಲದ್ದು. ಇದು ಭಾರತದ ಅತಿ ದೊಡ್ಡ ಹಾಲಿನ ಒಕ್ಕೂಟವಾಗಿದೆ. ವಿಶ್ವದ ಅತಿದೊಡ್ಡ ಹಾಲಿನ ಒಕ್ಕೂಟಗಳಲ್ಲಿ ಒಂದು. ಕೆಎಂಎಫ್ ಕೂಡ ಬಹಳ ಪ್ರಬಲವಾಗಿರುವ ಕರ್ನಾಟಕದ ಹಾಲಿನ ಒಕ್ಕೂಟ. ಮುಂಬೈ, ನಾಗಪುರ, ಗೋವಾ, ಹೈದರಾಬಾದ್ ಮತ್ತು ಚೆನ್ನೈನ ಮಾರುಕಟ್ಟೆಗಳಲ್ಲಿ ಅಮುಲ್ ಮತ್ತು ಕೆಎಂಎಫ್​ನ ಉತ್ಪನ್ನಗಳು ಮಾರಾಟ ಆಗುತ್ತಿವೆ. ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಅಮುಲ್ ಹಾಲುಗಳು ಲಭ್ಯ ಇವೆ. ಗೋವಾ ಮೂಲಕ ಈ ಹಾಲುಗಳು ಕರ್ನಾಟಕದ ಕೆಲವೆಡೆ ಸರಬರಾಜು ಆಗುತ್ತವೆ. ಹಾಲು ಬಿಟ್ಟರೆ ಅಮುಲ್​ನ ಐಸ್​ಕ್ರೀಮ್, ಚಾಕೊಲೇಟ್ ಇತ್ಯಾದಿ ಉತ್ಪನ್ನಗಳು ಕರ್ನಾಟಕದ ಎಲ್ಲೆಡೆ ಲಭ್ಯ ಇವೆ. ಆದರೆ, ಈಗ ಪ್ರಮುಖವಾಗಿ ತಲೆನೋವಾಗಿರುವುದು ಅಮುಲ್ ಹಾಲು ಬೆಂಗಳೂರಿನ ಮಾರುಕಟ್ಟೆಗೆ ಬರುತ್ತಿರುವ ವಿಚಾರ ಹಾಗೂ ಅಮುಲ್ ಜೊತೆ ಕೆಎಂಎಫ್ ವಿಲೀನದ ಭೀತಿ ವಿಚಾರ.

ಇದನ್ನೂ ಓದಿGas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?

ಅಮುಲ್ ಮತ್ತು ಕೆಎಂಎಫ್ ನಡುವೆ ಒಂದು ಹೋಲಿಕೆ

ವಾರ್ಷಿಕ ವಹಿವಾಟು:

ಅಮುಲ್: 60,000 ಕೋಟಿ ರೂ

ಕೆಎಂಎಫ್: 20,000 ಕೋಟಿ ರೂ

ನಿತ್ಯ ಹಾಲಿನ ಮಾರಾಟ:

ಅಮುಲ್: 2.63 ಕೋಟಿ ಲೀಟರ್ ಹಾಲು

ಕೆಎಂಎಫ್: 75-80 ಲಕ್ಷ ಲೀಟರ್ ಹಾಲು

ಹಾಲಿನ ಪಾರ್ಲರ್​ಗಳು:

ಅಮುಲ್: 10,000 ಡೀಲರ್ಸ್, 10 ಲಕ್ಷ ರೀಟೇಲ್ ಮಾರಾಟಗಾರರ ನೆಟ್​ವರ್ಕ್

ಕೆಎಂಎಫ್: 1,800 ನಂದಿನಿ ಪಾರ್ಲರ್​ಗಳು; 14,000 ಸೇಲ್ಸ್ ಏಜೆಂಟ್​​ಗಳು

ಇದನ್ನೂ ಓದಿPMMY: ಪಿಎಂ ಮುದ್ರಾ ಯೋಜನೆ ಅಡಿ ವಿತರಣೆಯಾದ ಸಾಲ ಪಾಕಿಸ್ತಾನ ಜಿಡಿಪಿಗೆ ಸಮ? 41 ಕೋಟಿ ಜನರ ಸ್ವಂತ ಉದ್ಯಮದ ಕನಸು ನನಸಾಗಿಸಿದ ಮುದ್ರಾ ಸ್ಕೀಮ್

ಬೆಲೆ ವಿಚಾರದಲ್ಲಿ ಕೆಎಂಎಫ್​ಗೆ ಅಮುಲ್ ಸಾಟಿ ಇಲ್ಲ

ಬೇರೆಲ್ಲಾ ಪ್ರಮುಖ ಹಾಲು ಒಕ್ಕೂಟಗಳಿಗೆ ಹೋಲಿಸಿದರೆ ಕೆಎಂಎಫ್​ನ ಹಾಲಿನ ಬೆಲೆ ಕಡಿಮೆ ಇದೆ. ಒಂದು ಲೀಟರ್ ಕೆಎಂಎಫ್ ಹಾಲು 39 ರುಪಾಯಿಯಿಂದ ಆರಂಭವಾಗುತ್ತದೆ. ಆದರೆ, ಅಮುಲ್​ನ ಅರ್ಧ ಲೀಟರ್ ಹಾಲಿನ ಕನಿಷ್ಠ ಬೆಲೆಯೇ 27 ರುಪಾಯಿ ಇದೆ. ನಂದಿನಿ ಮೊಸರು ಅರ್ಧ ಲೀಟರ್​ಗೆ 24 ರೂ ಇದ್ದರೆ, ಅಮುಲ್ ಮೊಸರು ಅರ್ಧ ಲೀಟರ್​ಗೆ 30 ರುಪಾಯಿ ಇದೆ. ಹೀಗಾಗಿ, ಅಮುಲ್ ಅನ್ನು ಯಾವುದೇ ಮಾರುಕಟ್ಟೆಯಲ್ಲಿ ಎದುರಿಸಲು ಕೆಎಂಎಫ್ ಸಜ್ಜಾಗಿರುವುದಂತೂ ಹೌದು.

ಆಂಧ್ರದ ಮೂಲಕ ಕರ್ನಾಟಕ ಪ್ರವೇಶಿಸಲಿದೆ ಅಮುಲ್

ಇನ್ನೂ ಒಂದು ಮುಖ್ಯ ಅಂಶ ಎಂದರೆ, ನೆರೆಯ ಆಂಧ್ರಪ್ರದೇಶದಲ್ಲಿ ಹಾಲು ಸಹಕಾರ ವಲಯಕ್ಕೆ ಪುಷ್ಟಿ ನೀಡಲು ಅಲ್ಲಿನ ಸರ್ಕಾರವು ಅಮುಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದ ಹಲವು ಜಿಲ್ಲೆಗಳೊಂದಿಗೆ ಆಂಧ್ರ ಗಡಿ ಹಂಚಿಕೊಂಡಿದೆ. ಈ ಗಡಿಜಿಲ್ಲೆಗಳ ಮೂಲಕ ಅಮುಲ್ ಹಾಲು ಕರ್ನಾಟಕದ ಮಾರುಕಟ್ಟೆ ಪ್ರವೇಶ ಮಾಡಲು ಸಜ್ಜಾಗಿದೆ. ಆದರೆ, ಕೆಎಂಎಫ್​ನ ಸ್ಪರ್ಧಾತ್ಮಕ ಬೆಲೆ ಎದುರು ಅಮುಲ್ ಹಾಲು ಸ್ಪರ್ಧಿಸುವುದು ಕಷ್ಟವಾಗಬಹುದು.

ಇದನ್ನೂ ಓದಿWork From Home: ‘ಸಂಬಳ ಕಟ್ ಮಾಡಿ, ಮನೆಯಿಂದ ಕೆಲಸ ಮಾಡಲು ಬಿಡಿ’- ಗೋಗರೆಯುತ್ತಿರುವ ಅಮೆರಿಕನ್ನರು ಎಷ್ಟು ಸಂಬಳ ಬಿಟ್ಟುಕೊಡಲು ಸಿದ್ಧ ಗೊತ್ತಾ?

ಇನ್ನು, ಬೆಂಗಳೂರಿಗೆ ಅಮುಲ್ ಬರುವ ವಿಚಾರದಲ್ಲೂ ಕೆಎಂಎಫ್ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬೆಂಗಳೂರಿನಲ್ಲಿ 33 ಲಕ್ಷ ಲೀಟರ್​ನಷ್ಟು ಹಾಲು ದಿನವೂ ವಹಿವಾಟು ಆಗುತ್ತದೆ. ಇದರಲ್ಲಿ 27 ಲಕ್ಷ ಲೀಟರ್ ಹಾಲು ಕೆಎಂಎಫ್​ನ ನಂದಿನಿ ಬ್ರ್ಯಾಂಡ್​ನದ್ದೇ. ಇದರ ಜೊತೆಗೆ ನೆರೆಯ ಆಂಧ್ರ ಮತ್ತು ತಮಿಳುನಾಡಿನ ವಿವಿಧ ಖಾಸಗಿ ಡೈರಿಗಳ ಹಾಲುಗಳು ಬೆಂಗಳೂರಿನಲ್ಲಿ ಮಾರಾಟ ಆಗುತ್ತವೆ. ಇಲ್ಲಿ ಕೆಎಂಎಫ್​ನ ಮಾರುಕಟ್ಟೆ ಹಿಡಿತವನ್ನು ಸಡಿಲಿಸುವುದು ಅಮುಲ್​ಗೆ ಕಬ್ಬಿಣದ ಕಡಲೆ ಆಗುತ್ತದೆ.

ಕೆಎಂಎಫ್​ನ ಫಜೀತಿ ಏನೆಂದರೆ ಅದು ನಿತ್ಯ ಪಡೆಯುತ್ತಿರುವ ಹಾಲು ಸಂಪೂರ್ಣವಾಗಿ ಮಾರಾಟ ಆಗುವುದಿಲ್ಲ. ಹೆಚ್ಚುವರಿ ಹಾಲುಗಳದ್ದೇ ಕೆಎಂಎಫ್​ಗೆ ತಲೆನೋವು. ಈ ಹೆಚ್ಚುವರಿ ಹಾಲನ್ನು ಬಳಸಿ ಸಿಹಿ ತಿಂಡಿ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತದೆಯಾದರೂ ಅದನ್ನು ಇನ್ನಷ್ಟು ಅಗ್ರೆಸಿವ್ ಆಗಿ ಮಾರಾಟ ಮಾಡುವ ಜವಾಬ್ದಾರಿ ಕೆಎಂಎಫ್ ಮೇಲಿದೆ. ಇಂಥ ಹೊತ್ತಲ್ಲಿ ಅಮುಲ್ ಸ್ಪರ್ಧೆಗೆ ಇಳಿಯುವುದು ಕೆಎಂಎಫ್​ಗೆ ತಲೆನೋವು ತರುವುದು ಹೌದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sat, 8 April 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us