ಇಟಿಎಫ್ ರಿಟರ್ನ್​ನ ಮರುಹೂಡಿಕೆ ನಿಯಮ ಸೇರಿದಂತೆ ಇಪಿಎಫ್​ನಲ್ಲಿ ಮಹತ್ವದ ಬದಲಾವಣೆ

EPFO updates: ನಿಮ್ಮ ಇಪಿಎಫ್​ನಲ್ಲಿನ ಹಣವನ್ನು ಇಪಿಎಫ್​ಒ ಸಂಸ್ಥೆ ಇಟಿಎಫ್ ಮತ್ತಿತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುತ್ತದೆ. ಈಗ ಇಟಿಎಫ್ ಹೂಡಿಕೆಯಿಂದ ಬಂದ ಮೊತ್ತವನ್ನು ಸಿಪಿಎಸ್​ಇ ಮತ್ತು ಭಾರತ್ 22 ಫಂಡ್​ಗಳಲ್ಲಿ ಮರು ಹೂಡಿಕೆ ಮಾಡುವ ಹೊಸ ನಿಯಮಕ್ಕೆ ಅನುಮೋದನೆ ಸಿಕ್ಕಿದೆ. ಇದರಿಂದ ಇಪಿಎಫ್ ಹಣಕ್ಕೆ ಹೆಚ್ಚಿನ ಬಡ್ಡಿ ಸಂದಾಯವಾಗುವ ನಿರೀಕ್ಷೆ ಇದೆ.

ಇಟಿಎಫ್ ರಿಟರ್ನ್​ನ ಮರುಹೂಡಿಕೆ ನಿಯಮ ಸೇರಿದಂತೆ ಇಪಿಎಫ್​ನಲ್ಲಿ ಮಹತ್ವದ ಬದಲಾವಣೆ
ಇಪಿಎಫ್​ಒ

Updated on: Dec 02, 2024 | 4:21 PM

ನವದೆಹಲಿ, ಡಿಸೆಂಬರ್ 2: ಮಹತ್ವದ ಬೆಳವಣಿಗೆಯೊಂದರಲ್ಲಿ ಇಪಿಎಫ್​ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಮಂಡಳಿ (ಸಿಬಿಟಿ) ಹೊಸ ಹೂಡಿಕೆ ನೀತಿಗೆ ಅನುಮೋದನೆ ನೀಡಿದೆ. ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳಲ್ಲಿ (ಇಟಿಎಫ್) ಮಾಡಿದ ಹೂಡಿಕೆಯನ್ನು ರಿಟರ್ನ್ ಪಡೆಯುವಾಗಿನ ನೀತಿಯಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಇಟಿಫ್​ಗಳಿಂದ ಬಂದ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನು ಕೇಂದ್ರದ ಸರ್ಕಾರಿ ಉದ್ದಿಮೆಗಳಲ್ಲಿ ಮತ್ತು ಭಾರತ್ 22 ಫಂಡ್​ಗಳಲ್ಲಿ ಮರು ಹೂಡಿಕೆ ಮಾಡಬೇಕೆನ್ನುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳಿಗೆ ಇಪಿಎಫ್​ಒನ ಸೆಂಟ್ರಲ್ ಬೋರ್ಡ್ ಅಫ್ ಟ್ರಸ್ಟೀಸ್ ಅನುಮೋದನೆ ನೀಡಿರುವುದು ತಿಳಿದುಬಂದಿದೆ.

ಶೇ. 50ರಷ್ಟನ್ನು ಸಿಪಿಎಸ್​ಇ ಮತ್ತು ಭಾರತ್ 22 ಫಂಡ್​ಗಳಿಗೆ ಹಾಕಿದಲ್ಲಿ ಅಲ್ಲಿ ಕನಿಷ್ಠ ಹೂಡಿಕೆ ಅವಧಿ 5 ವರ್ಷ ಇರಬೇಕು. ಹಾಗೆಯೇ, ಉಳಿದ ಶೇ. 50ರಷ್ಟು ಹಣವನ್ನು ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿ ಇತರ ಹಣಕಾಸು ಸಾಧನಗಳನ್ನು ಹೂಡಿಕೆ ಮಾಡಲಾಗುತ್ತದೆ ಎಂದು ಫೈನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಕ್ಯೂಐಪಿ ಮೂಲಕ ಈ ವರ್ಷ ಒಂದು ಲಕ್ಷ ಕೋಟಿ ರೂ ದಾಟಿದ ಕಾರ್ಪೊರೇಟ್ ಫಂಡಿಂಗ್; ಇತಿಹಾಸದಲ್ಲೇ ಇದು ದೊಡ್ಡ ಮೊತ್ತ

ಇಪಿಎಫ್ ಸ್ಕೀಮ್​ನಲ್ಲಿ ಮಹತ್ವದ ತಿದ್ದುಪಡಿ

1952ರ ಇಪಿಎಫ್ ಸ್ಕೀಮ್​ಗೆ ಮಹತ್ವದ ತಿದ್ದುಪಡಿ ತರುವ ಕಾರ್ಯಕ್ಕೂ ಸಿಬಿಟಿಯಿಂದ ಅನುಮೋದನೆ ಸಿಕ್ಕಿದೆ. ಈಗಿರುವ ನಿಯಮದ ಪ್ರಕಾರ ಯಾವುದೇ ತಿಂಗಳಲ್ಲಿ 24ನೇ ತಾರೀಖಿನವರೆಗೆ ಸೆಟಲ್ ಆದ ಕ್ಲೇಮ್​ಗಳಲ್ಲಿ ಹಿಂದಿನ ತಿಂಗಳವರೆಗೆ ಮಾತ್ರವೇ ಬಡ್ಡಿ ನೀಡಲಾಗುತ್ತದೆ. ಉದಾಹರಣೆಗೆ, ಜುಲೈ 24ಕ್ಕೆ ನಿಮ್ಮ ಕ್ಲೇಮ್ ಸೆಟಲ್ ಆಗಿದ್ದಲ್ಲಿ ಜೂನ್​ವರೆಗೆ ಮಾತ್ರ ಬಡ್ಡಿ ಸಿಗುತ್ತದೆ. ಜುಲೈ ತಿಂಗಳು ಲೆಕ್ಕಕ್ಕೆ ಇರುವುದಿಲ್ಲ.

ತಿದ್ದುಪಡಿ ಬಳಿಕ ಬರಲಿರುವ ಹೊಸ ನಿಯಮ ಪ್ರಕಾರ ನಿಮಗೆ ಕ್ಲೇಮ್ ದಿನದವರೆಗೂ ಬಡ್ಡಿ ಸಿಗುತ್ತದೆ. ಇದರಿಂದ ಇಪಿಎಫ್ ಸದಸ್ಯರಿಗೆ ತುಸು ಅನುಕೂಲವಾಗುತ್ತದೆ.

ಇದನ್ನೂ ಓದಿ: ಆದಾಯ ತೆರಿಗೆ ಪಾವತಿ: ಮಹಿಳೆಯರ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆ; ಎರಡು ಕೋಟಿಗೂ ಅಧಿಕ ಮಹಿಳೆಯರಿಂದ ಐಟಿಆರ್ ಸಲ್ಲಿಕೆ

ಇಪಿಎಫ್​ಒ ಅಮ್ನೆಸ್ಟಿ ಸ್ಕೀಮ್​ಗೆ ಶಿಫಾರಸು

ಮತ್ತೊಂದು ಮಹತ್ವದ ಕ್ರಮದಲ್ಲಿ ಇಪಿಎಫ್​ಒನ ಸಿಬಿಟಿಯು ಅಮ್ನೆಸ್ಟಿ ಸ್ಕೀಮ್ ಜಾರಿಗೊಳಿಸಲು ಶಿಫಾರಸು ಮಾಡಿದೆ. ಅಮ್ನೆಸ್ಟಿ ಎಂದರೆ ಕ್ಷಮಾದಾನ. ಇಪಿಎಫ್​ಒನ ನಿಯಮಗಳನ್ನು ಉಲ್ಲಂಘಿಸಿದ ಅಥವಾ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಮುಂದಾಗುವ ಕಂಪನಿಗಳಿಗೆ (ಉದ್ಯೋಗದಾತರು) ಸ್ವಯಂ ಆಗಿ ಆ ಮಾಹಿತಿ ಅಥವಾ ವಿವರ ಬಹಿರಂಗಪಡಿಸಲು ಅವಕಾಶ ನೀಡಬೇಕು. ತಪ್ಪು ತಿದ್ದುಕೊಳ್ಳಲು ಮುಂದಾಗುವ ಇಂಥ ಕಂಪನಿಗಳ ಮೇಲೆ ಕಾನೂನು ಕ್ರಮ ಜರುಗಿಸಬಾರದು ಅಥವಾ ದಂಡ ವಿಧಿಸಬಾರದು. ಇದು ಸಿಬಿಟಿ ಶಿಫಾರಸು ಮಾಡಿರುವ 2024ರ ಇಪಿಎಫ್​ಒ ಅಮ್ನೆಸ್ಟಿ ಸ್ಕೀಮ್​ನ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us