ಐದು ದಶಕದಲ್ಲಿ ಭಾರತದ ಸಂಪತ್ತು ಸಾವಿರ ಪ್ರತಿಶತದಷ್ಟು ಹೆಚ್ಚಾಗಲಿದೆ: ಎನ್​ಎಸ್​ಇ ಸಿಇಒ ಆಶೀಶ್ ಕುಮಾರ್ ಚೌಹಾಣ್

|

Updated on: Jun 20, 2024 | 11:58 AM

India wealth may multiply 10 times in 50 years, says NSE CEO: ಭಾರತ ಮುಂದಿನ ಐದು ದಶಕದಲ್ಲಿ ಶೇ. 1000ರಷ್ಟು, ಅಂದರೆ ಐದು ಪಟ್ಟು ಸಂಪತ್ತು ವೃದ್ಧಿ ಕಾಣಲಿದೆ ಎಂದು ಎನ್​ಎಸ್​ಇ ಎಂಡಿ ಆಶೀಶ್ ಕುಮಾರ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾ, ಜಪಾನ್, ಐರೋಪ್ಯ ದೇಶಗಳಲ್ಲಿ ವಯಸ್ಸಾದರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಇದು ಭಾರತಕ್ಕೆ ಅನುಕೂಲವಾಗಲಿದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಐದು ದಶಕದಲ್ಲಿ ಭಾರತದ ಸಂಪತ್ತು ಸಾವಿರ ಪ್ರತಿಶತದಷ್ಟು ಹೆಚ್ಚಾಗಲಿದೆ: ಎನ್​ಎಸ್​ಇ ಸಿಇಒ ಆಶೀಶ್ ಕುಮಾರ್ ಚೌಹಾಣ್
ಹಣ, ಸಾಂದರ್ಭಿಕ ಚಿತ್ರ
Follow us on

ಅಹ್ಮದಾಬಾದ್, ಜೂನ್ 20: ಹೆಚ್ಚುತ್ತಿರುವ ಯುವ ಸಮುದಾಯ ಮತ್ತು ತಂತ್ರಜ್ಞಾನ ಸುಧಾರಣೆಗಳಿಂದಾಗಿ (technological advancements) ಭಾರತದ ಸಂಪತ್ತು ಮುಂದಿನ ಐವತ್ತು ವರ್ಷದಲ್ಲಿ ಸಾವಿರ ಪ್ರತಿಶತದಷ್ಟು ಹೆಚ್ಚಾಗುವ ವಿಶ್ವಾಸ ತನಗೆ ಇದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿರುವ ಆಶೀಶ್ ಕುಮಾರ್ ಚೌಹಾಣ್ (NSE CEO Ashishkumar Chauhan) ಹೇಳಿದ್ದಾರೆ. ಬುಧವಾರ ಇಲ್ಲಿ ಇಡಿಐಐನ 23ನೇ ಘಟಿಕೋತ್ಸವ (convocation) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಈ ಶಿಕ್ಷಣ ಸಂಸ್ಥೆಯಿಂದ ಹೊರಬರುವ ವಿದ್ಯಾರ್ಥಿಗಳು ವ್ಯವಹಾರ ಜಗತ್ತಿನಲ್ಲಿ ಬದಲಾವಣೆಯ ಹರಿಕಾರರಾಗಲಿ ಎಂದು ಕರೆ ನೀಡಿದ್ದಾರೆ.

ಬಡತನ, ಅನಕ್ಷರತೆ, ದುರ್ಬಲ ವಸತಿ, ಕಳಪೆ ಜೀವನ ಸೌಲಭ್ಯ, ಆಹಾರ, ನೀರು, ಚರಂಡಿ, ಆರೋಗ್ಯ ವ್ಯವಸ್ಥೆಯ ಕೊರತೆ ಇತ್ಯಾದಿ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ದೇಶವನ್ನು ಬಾಧಿಸುತ್ತಿವೆ ಎಂಬುದನ್ನು ಒಪ್ಪಿಕೊಂಡ ಎನ್​ಎಸ್​ಇ ಮುಖ್ಯಸ್ಥರು, ಮುಂದಿನ ಐವತ್ತು ವರ್ಷದಲ್ಲಿ ಭಾರತದ ಸಂಪತ್ತು ಹತ್ತು ಪಟ್ಟು ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಡಬಲ್ ಲಾಭ ಕೊಟ್ಟಿವೆ ಈ ಪಿಎಸ್​ಯು ಮ್ಯೂಚುವಲ್ ಫಂಡ್​ಗಳು

‘ಯುವಜನರ ಸಂಖ್ಯೆ, ವೇಗವಾಗಿ ಆಗುತ್ತಿರುವ ತಂತ್ರಜ್ಞಾನ ಆವಿಷ್ಕಾರಗಳು, ಉತ್ಸಾಹೀ ಯುವ ಉದ್ದಿಮೆದಾರರು ಭಾರತದ ಅಗಾಧ ಬೆಳವಣಿಗೆಗೆ ಕಾರಣವಾಗಲಿದ್ದಾರೆ. ಮುಂದಿನ ಐವತ್ತು ವರ್ಷದಲ್ಲಿ ಭಾರತದ ಸಂಪತ್ತು ಶೇ. 1000ರಷ್ಟು, ಅಂದರೆ ಹತ್ತು ಪಟ್ಟು ಹೆಚ್ಚಾಗಲಿದೆ,’ ಎಂದು ಆಶೀಶ್​ಕುಮಾರ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.

‘ಐರೋಪ್ಯ ದೇಶಗಳು, ಜಪಾನ್, ಚೀನಾ ಮೊದಲಾದ ದೇಶಗಳಿಗೆ ವಯಸ್ಸಾಗುತ್ತಿದೆ. ಭಾರತೀಯರು ಅಮೆರಿಕಕ್ಕೆ ವಲಸೆ ಹೋಗೋದನ್ನು ನಿಲ್ಲಿಸಿದರೆ ಆ ದೇಶಕ್ಕೂ ವಯೋಬಾಧೆ ಆಗಲಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಯುವ ಜನಸಂಖ್ಯೆಯ ಅನುಕೂಲ ಇದೆ. ಭಾರತದ ಜನಸಂಖ್ಯೆಯಲ್ಲಿ ಶೇ. 20ರಷ್ಟು ಯುವಕರೇ ಇದ್ದಾರೆ.

ಇದನ್ನೂ ಓದಿ: ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

‘ಮುಂದಿನ ಐವತ್ತು ವರ್ಷದಲ್ಲಿ ವಿಶ್ವದ ಶೇ. 25ರಷ್ಟು ಸಂಪತ್ತನ್ನು ಭಾರತ ನಿರ್ಮಿಸಲು ಯಶಸ್ವಿಯಾದಲ್ಲಿ, ಬಡದೇಶವಾಗಿರುವ ಭಾರತ ಅಧಿಕ ಆದಾಯದ ಗುಂಪಿಗೆ ಸೇರುತ್ತದೆ. ಭಾರತದಲ್ಲಿ ತಲಾ ಜಿಡಿಪಿ ದರ ಬಹಳ ಕಡಿಮೆ ಇದೆ. ಐವತ್ತು ವರ್ಷದಲ್ಲಿ ನಾವು ಸಿರಿವಂತ ದೇಶಗಳ ಸಾಲಿಗೆ ಸೇರಬಹುದು,’ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಎಂಡಿ ಆಶಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ