ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತೀಯ ಕೃಷಿಕರ ಆದಾಯ ಏರುತ್ತದೆ ಎಂದ ಪೀಯೂಶ್ ಗೋಯಲ್
India US trade deal, Indian farmers set to gain from lower tariffs: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತೀಯ ರೈತರ ಆದಾಯ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಕೃಷಿ ಕ್ಷೇತ್ರವನ್ನು ಮಾರಲಾಗಿದೆ ಎಂದು ರೈತ ಸಂಘಟನೆಗಳು ಎತ್ತಿರುವ ಆಕ್ಷೇಪವನ್ನು ಗೋಯಲ್ ತಳ್ಳಿಹಾಕಿದ್ದಾರೆ.

ನವದೆಹಲಿ, ಫೆಬ್ರುವರಿ 8: ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ (US India trade deal) ರೈತರ ಹಿತಾಸಕ್ತಿಯನ್ನು ಬಲಿ ಕೊಡಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್ (Piyush Goyal) ತಳ್ಳಿಹಾಕಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರಕ್ಕೆ ಹಾನಿಯಾಗುವುದಿಲ್ಲ. ಬದಲಾಗಿ, ಕೃಷಿಕರ ಆದಾಯ ಹೆಚ್ಚಲು ಸಹಾಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ಫೆಬ್ರುವರಿ 7ರಂದು ಮಧ್ಯಂತರ ವ್ಯಾಪಾರ ಒಪ್ಪಂದದ ಅಂಶಗಳನ್ನು ಪ್ರಕಟಿಸಲಾಯಿತು. ಅದರ ಪ್ರಕಾರ, ಅಮೆರಿಕದ ಸರಕುಗಳ ಮೇಲೆ ಭಾರತವು ಟ್ಯಾರಿಫ್ ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ. 18ರಷ್ಟು ಟ್ಯಾರಿಫ್ ಹಾಕುತ್ತದೆ.
ಇದನ್ನೂ ಓದಿ: ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ
ಅಮೆರಿಕದ ಸರಕುಗಳಿಗೆ ಶೂನ್ಯ ಟ್ಯಾರಿಫ್, ನಮ್ಮ ಸರಕುಗಳಿಗೆ ಅಧಿಕ ಟ್ಯಾರಿಫ್, ಈ ಕ್ರಮವು ಭಾರತೀಯ ಕೃಷಿ ಕ್ಷೇತ್ರವನ್ನು ಬಲಿಕೊಡುವುದಾಗಿದೆ ಎಂದು ರೈತ ಸಂಘಟನೆಗಳು ಧ್ವನಿ ಎತ್ತಿವೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಕೃಷಿ ಕ್ಷೇತ್ರವನ್ನು ಅರ್ಪಿಸಲಾಗಿದೆ ಎಂದು ಈ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಮೊದಲಾದ ಅನೇಕ ರೈತ ಸಂಘಟನೆಗಳು ಒಟ್ಟಾಗಿ ಸರ್ಕಾರದ ವಿರುದ್ಧ ಫೆಬ್ರುವರಿ 12ರಂದು ಪ್ರತಿಭಟನೆಗಳನ್ನು ನಡೆಸಲು ಯೋಜಿಸಿವೆ.
ಕೃಷಿ ಕ್ಷೇತ್ರ ಬಲಿಕೊಟ್ಟಿಲ್ಲ, ರೈತರ ಆದಾಯ ಹೆಚ್ಚುತ್ತೆ: ಸಚಿವ ಗೋಯಲ್
ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಕಡಿಮೆ ಇದೆ. ಅಮೆರಿಕಕ್ಕೆ ಭಾರತದಿಂದ ವರ್ಷದಲ್ಲಿ 55 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಮತ್ತು ಮೀನು ಉತ್ಪನ್ನಗಳು ರಫ್ತಾಗುತ್ತಿವೆ. ಈಗ ಟ್ಯಾರಿಫ್ ಕಡಿಮೆ ಇರುವುದರಿಂದ ಈ ರಫ್ತು ಮತ್ತಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ, ರೈತರ ಆದಾಯ ಹೆಚ್ಚಲೂ ಸಹಾಯವಾಗುತ್ತದೆ ಎಂದು ಪಿಯೂಶ್ ಗೋಯಲ್ ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಿಂದ ಭಾರತದ ರೈತರು, ಎಂಎಸ್ಎಂಇಗಳಿಗೆ ತೊಂದರೆಯಾಗುವುದಿಲ್ಲ; ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ
ಅಮೆರಿಕದೊಂದಿಗಿನ ಈ ಟ್ರೇಡ್ ಡೀಲ್ನಲ್ಲಿ ತನ್ನ ಕೃಷಿ ಮತ್ತು ಡೈರಿ ಸೆಕ್ಟರ್ ಅನ್ನು ಬಹುತೇಕ ಹೊರಗಿಡಲಾಗಿದೆ ಭಾರತ ಸರ್ಕಾರ ಹೇಳಿಕೊಂಡಿದೆ. ಭಾರತದಲ್ಲಿ ಹೆಚ್ಚು ಬೆಳೆಯದ ಮತ್ತು ಹೆಚ್ಚು ಮಾರಾಟವಾಗದ ಸರಕುಗಳಿಗೆ ಟ್ಯಾರಿಫ್ ಇಳಿಸಲಾಗಿದೆ. ಹೆಚ್ಚಿನ ಕೃಷಿ ಉತ್ಪನ್ನಗಳಿಗೆ ಟ್ಯಾರಿಫ್ ವಿನಾಯಿತಿ ಕೊಟ್ಟಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆ. ಆದರೆ, ಸೋಯಾಬೀನ್ ಎಣ್ಣೆ, ಪಶುಗಳಿಗೆ ನೀಡುವ ರೆಡ್ ಸೋರ್ಗಮ್ ಆಹಾರ, ಒಣಗಿದ ಡಿಸ್ಟಿಲರ್ಸ್ ಗ್ರೈನ್ ಇತ್ಯಾದಿ ವಸ್ತುಗಳಿಗೆ ಸರ್ಕಾರ ಮುಕ್ತ ಪ್ರವೇಶ ಕೊಟ್ಟಿರುವುದು ಭಾರತೀಯ ಕೃಷಿಕರ ಬದುಕಿಗೆ ಎರವಾಗುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ಕೃಷ್ಣ ಪ್ರಸಾದ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




