AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು

India's Economic Divide: ಭಾರತವು ವಿಶ್ವದ ಅತಿ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ರಾಜ್ಯಗಳ ನಡುವೆ ತೀವ್ರ ಅಸಮಾನತೆಗಳಿವೆ. ದೇಶದ ಒಟ್ಟು ಜಿಡಿಪಿಯ ಶೇ. 48ರಷ್ಟು ಪಾಲು ಕೇವಲ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 5 ರಾಜ್ಯಗಳಿಂದ ಬರುತ್ತದೆ. ವಿದೇಶಿ ಹೂಡಿಕೆಯಲ್ಲೂ ಇದೇ ಪ್ರವೃತ್ತಿ. ಉತ್ತರ ಪ್ರದೇಶದ ಬೆಳವಣಿಗೆ ಸಕಾರಾತ್ಮಕವಾಗಿದ್ದು, ಆದರೆ ಆದಾಯ, ಉದ್ಯೋಗ ಸೃಷ್ಟಿಯಲ್ಲಿ ಇತರ ರಾಜ್ಯಗಳು ಹಿಂದುಳಿದಿವೆ. ಸಮಗ್ರ ಅಭಿವೃದ್ಧಿಗೆ ಎಲ್ಲ ರಾಜ್ಯಗಳ ಆರ್ಥಿಕ ಬೆಳವಣಿಗೆ ಅನಿವಾರ್ಯ.

ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು
ಆರ್ಥಿಕತೆImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2026 | 6:42 PM

Share

ನವದೆಹಲಿ, ಮೇ 22: ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದ್ದರೂ, ದೇಶದ ವಿವಿಧ ರಾಜ್ಯಗಳ ನಡುವಿನ ಆದಾಯ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರಿ ಅಸಮಾನತೆ ಇರುವುದು ವರದಿಯೊಂದರಿಂದ ಬಹಿರಂಗಗೊಂಡಿದೆ. ‘ಕ್ಲೈಂಟ್ ಅಸೋಸಿಯೇಟ್ಸ್’ ಸಂಸ್ಥೆ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯನ್ ಸ್ಟೇಟ್ಸ್: 2026’ (State of Indian States: 2026) ಶ್ವೇತಪತ್ರದ ಪ್ರಕಾರ, ಭಾರತದ ಒಟ್ಟು ಆರ್ಥಿಕ ಚಟುವಟಿಕೆಗಳು ಕೇವಲ ಐದು ರಾಜ್ಯಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ. ದೇಶದ ಅರ್ಧದಷ್ಟು ಜಿಡಿಪಿಗೆ (gdp) ಹೊಟ್ಟೆ ತುಂಬಿಸುತ್ತಿರುವುದು ಕರ್ನಾಟಕ ಸೇರಿ ಐದೇ ರಾಜ್ಯಗಳಂತೆ. ಈ ಐದು ರಾಜ್ಯಗಳು ದೇಶದ ಶೇ. 48ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿವೆ ಎಂದು ಈ ವರದಿ ಹೇಳುತ್ತಿದೆ. ಪಾಸಿಟಿವ್ ಸಂಗತಿ ಎಂದರೆ, ಉತ್ತರಪ್ರದೇಶದಂತಹ ರಾಜ್ಯಗಳ ಬೆಳವಣಿಗೆಯ ವೇಗ ಸಕಾರಾತ್ಮಕವಾಗಿದೆ.

ಭಾರತೀಯ ಆರ್ಥಿಕತೆಯ ‘ಬಿಗ್ ಫೈವ್’

ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್, ಈ ಐದು ರಾಜ್ಯಗಳು ಮಾತ್ರವೇ 2025 ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಜಿಡಿಪಿಗೆ (GDP) ಶೇಕಡಾ 48 ರಷ್ಟು ಕೊಡುಗೆ ನೀಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೇಶದ ಕೊನೆಯ ಹತ್ತು ರಾಜ್ಯಗಳ ಒಟ್ಟು ಕೊಡುಗೆ ಕೇವಲ ಶೇ. 3 ಕ್ಕಿಂತ ಕಡಿಮೆಯಿದೆ.

ಭಾರತದ ಆರ್ಥಿಕ ರಾಜಧಾನಿಯಾಗಿರುವ ಮಹಾರಾಷ್ಟ್ರ ರಾಜ್ಯವೊಂದೇ ದೇಶದ ಒಟ್ಟು ಜಿಡಿಪಿಗೆ ಶೇ. 13.3 ರಷ್ಟು ಕೊಡುಗೆ ನೀಡುವ ಮೂಲಕ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದ ಒಟ್ಟು ಆರ್ಥಿಕತೆಯು ಮಿಜೋರಾಂ ರಾಜ್ಯಕ್ಕಿಂತ 133 ಪಟ್ಟು ದೊಡ್ಡದಾಗಿದೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

ಆರ್ಥಿಕ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ರೂಪಾಂತರವು ಎಲ್ಲರ ಗಮನ ಸೆಳೆಯುತ್ತಿದೆ. ಇದರ ಆರ್ಥಿಕತೆಯು ಮೆಕ್ಸಿಕೋ ದೇಶಕ್ಕೆ ಸಮನಾಗಿದ್ದು, ಚೀನಾ ದೇಶಕ್ಕಿಂತಲೂ ವೇಗವಾಗಿ ಬೆಳೆಯುತ್ತಿದೆ.

ಆದಾಯದ ತಾರತಮ್ಯ: ಕೇವಲ ಆರ್ಥಿಕತೆಯ ಗಾತ್ರವಷ್ಟೇ ಜನರ ಏಳಿಗೆಯನ್ನು ನಿರ್ಧರಿಸುವುದಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ. ಗೋವಾ ಮತ್ತು ಸಿಕ್ಕಿಂ ರಾಜ್ಯಗಳ ತಲಾ ಆದಾಯ ಬಿಹಾರಕ್ಕಿಂತ 8 ಪಟ್ಟು ಹೆಚ್ಚಿದೆ. ಬಿಹಾರದ ತಲಾ ಆದಾಯ 69,321 ರೂ ಆಗಿದ್ದರೆ, ಭಾರತದ ಸರಾಸರಿ ತಲಾ ಆದಾಯ 2.58 ಲಕ್ಷ ರೂ ಆಗಿದೆ. ಕೇವಲ 16 ರಾಜ್ಯಗಳು ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಆದಾಯ ಹೊಂದಿವೆ.

ವಿದೇಶಿ ನೇರ ಹೂಡಿಕೆ (FDI): 2025 ರ ಹಣಕಾಸು ವರ್ಷದಲ್ಲಿ ಭಾರತಕ್ಕೆ ಹರಿದು ಬಂದ ಒಟ್ಟು 4.22 ಲಕ್ಷ ಕೋಟಿ ರೂ ವಿದೇಶಿ ಹೂಡಿಕೆಯಲ್ಲಿ, ಬರೋಬ್ಬರಿ ಶೇ. 83.3 ರಷ್ಟು ಹೂಡಿಕೆಯನ್ನು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ದೆಹಲಿ ಮತ್ತು ತಮಿಳುನಾಡು ರಾಜ್ಯಗಳೇ ಹಂಚಿಕೊಂಡಿವೆ. ತಮಿಳುನಾಡು, ಹರಿಯಾಣ ಮತ್ತು ರಾಜಸ್ಥಾನಗಳು ಹೊಸ ಹೂಡಿಕೆ ಹಬ್‌ಗಳಾಗಿ ಹೊರಹೊಮ್ಮುತ್ತಿವೆ.

ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್, ಕರ್ನಾಟಕ ಮುಂದು

ಉದ್ಯೋಗ ಸೃಷ್ಟಿ, ಆರ್ಥಿಕ ಶಿಸ್ತು ಮತ್ತು ಹೂಡಿಕೆ ಆಕರ್ಷಣೆಯ ಆಧಾರದ ಮೇಲೆ ಸಿದ್ಧಪಡಿಸಲಾದ ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಆದರೆ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರಗಳು ಸಾಲದ ಹೊರೆಯಿಂದಾಗಿ ಆರ್ಥಿಕ ಸುಧಾರಣೆಯ ಅಗತ್ಯವಿರುವ ರಾಜ್ಯಗಳ ಪಟ್ಟಿಯಲ್ಲಿವೆ.

ಇದನ್ನೂ ಓದಿ: ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್

ಭಾರತವು 2026 ರಲ್ಲಿ ಶೇ. 7.5 ರಷ್ಟು ಮತ್ತು 2027 ರಲ್ಲಿ ಶೇ. 6.8 ರಷ್ಟು ಜಿಡಿಪಿ ಬೆಳವಣಿಗೆ ಕಾಣುವ ಮುನ್ಸೂಚನೆ ಇದೆ. ಆದರೆ ಈ ಬೆಳವಣಿಗೆಯು ಕೇವಲ ಕೆಲವೇ ರಾಜ್ಯಗಳಿಗೆ ಸೀಮಿತವಾಗದೆ, ಇತರ ರಾಜ್ಯಗಳಿಗೂ ಹರಡಬೇಕಿದೆ. ಹಿಂದುಳಿದ ರಾಜ್ಯಗಳಲ್ಲಿ ಖಾಸಗಿ ವಲಯದ ಹೂಡಿಕೆ, ಕೈಗಾರಿಕೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಭಾರತವು ಮುಂಬರುವ ದಶಕದಲ್ಲಿ ಎರಡಂಕಿ (double-digit) ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More