ಸಣ್ಣ ಮೀನಿಗೆ ತೃಪ್ತರಾಗಬೇಡಿ, ಸ್ಮಗ್ಲಿಂಗ್ ಸಿಂಡಿಕೇಟ್ಗಳ ಮಾಸ್ಟರ್ಮೈಂಡ್ಗಳನ್ನು ಹಿಡಿದುಹಾಕಿ: ನಿರ್ಮಲಾ ಸೀತಾರಾಮನ್ ಕರೆ
Nirmala Sitharaman speaks to DRI officers: ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಗುವ ಸಣ್ಣ ಮೀನಿಗೆ ತೃಪ್ತರಾಗಬಾರದು. ಸೆರೆಗೆ ಬೀಳದೇ ತಪ್ಪಿಸಿಕೊಂಡಿರುವ ತಿಮಿಂಗಲಗಳನ್ನು ಹಿಡಿಯುವುದು ಗುರಿಯಾಗಿರಬೇಕು ಎಂದು ಡಿಆರ್ಐ ಅಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ಸ್ಮಗ್ಲಿಂಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಬೇಕೆಂದರೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಅವರ ಅನಿಸಿಕೆ.

ನವದೆಹಲಿ, ಜೂನ್ 3: ಸ್ಮಗ್ಲಿಂಗ್ ಜಾಲವನ್ನು ಬುಡಸಮೇತ ಕಿತ್ತುಹಾಕಲು ಹೊರಟಂತಿರುವ ನಿರ್ಮಲಾ ಸೀತಾರಾಮನ್ (Nirmala Sitharaman), ಸ್ಮಗ್ಲಿಂಗ್ ಸಿಂಡಿಕೇಟ್ಗಳ ಮಾಸ್ಟರ್ಮೈಂಡ್ಗಳನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಡಿಆರ್ಐ ಅಧಿಕಾರಿಗಳಿಗೆ ಕರೆನೀಡಿದ್ದಾರೆ. ಕೆಳ ಹಂತದ ಸ್ಮಗ್ಲಿಂಗ್ ಆಪರೇಟಿವ್ಗಳನ್ನು ಹಿಡಿದು ತೃಪ್ತರಾಗುವ ಬದಲು, ಅಪರಾಧದ ಮೂಲ ವ್ಯಕ್ತಿಯನ್ನು ಹುಡುಕಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಬೇಕು ಎಂದು ರೆವಿನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯದ ಅಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘ಅಲ್ಲಿ ಇಲ್ಲಿ ಪ್ರಕರಣಗಳನ್ನು ಪತ್ತೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಇಡೀ ಜಾಲವನ್ನು ಭೇದಿಸುವುದು ಗುರಿಯಾಗಿರಬೇಕು. ಈ ಅಂಶವನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ನೀವು ಸಣ್ಣ ಮೀನು ಹಿಡಿಯುವುದರಿಂದ ಪ್ರಯೋಜನ ಇಲ್ಲ. ನಮ್ಮ ಗಾಳಕ್ಕೆ ಸಿಗದ ದೊಡ್ಡ ತಿಮಿಂಗಲಗಳೇ ಇವೆ’ ಎಂದು ಡಿಆರ್ಐನ ಹೊಸ ಮುಖ್ಯಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ಜೆನ್: ಸಂಪೂರ್ಣ ದೇಶೀಯವಾಗಿ ತಯಾರಾದ ಭಾರತದ ಮೊದಲ ಮಲ್ಟಿಮೋಡಲ್ ಎಲ್ಎಲ್ಎಂ; ಸರ್ವಂ ಎಐಗಿಂತ ಇದು ಹೇಗೆ ಭಿನ್ನ?
‘ವ್ಯಾಲ್ಯೂ ಚೈನ್ನಂತೆ ಇಡೀ ಸ್ಮಗ್ಲಿಂಗ್ ಚೈನ್ ಅನ್ನು ಟ್ರ್ಯಾಕ್ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಅದು ಅಷ್ಟು ಸುಲಭ ಅಲ್ಲವಾದರೂ ಅಷ್ಟು ಆಳಕ್ಕೆ ಹೋಗಬೇಕು. ಬಹಳ ಜಾಣತನದಿಂದ ಕೆಲ ಸ್ಮಗ್ಲಿಂಗ್ ಚಟುವಟಿಕೆಗಳನ್ನು ಪತ್ತೆ ಮಾಡಿ ತಡೆದಿದ್ದೇವೆ. ಆದರೆ ಆ ಪ್ರಕರಣಗಳನ್ನು ಸರಿಯಾಗಿ ಫಾಲೋ ಅಪ್ ಮಾಡಲು ಎಡವುತ್ತಿದ್ದೇವೆ.
‘ನಾನು ಒಂದೆರಡು ಪ್ರಕರಣಗಳನ್ನು ಗಮನಿಸಲು ಆರಂಭಿಸಿದ್ದೇನೆ. ಅವುಗಳನ್ನು ನೀವು ತಾರ್ಕಿಕ ಅಂತ್ಯಕ್ಕೆ ಯಾವಾಗ ಮುಟ್ಟಿಸುತ್ತೀರಿ ಎಂದು ಕಾಯುತ್ತಿದ್ದೇನೆ. ತಾರ್ಕಿಕ ಅಂತ್ಯ ಎಂದರೆ, ಒಂದು ಆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ಎರಡನೆಯದು, ಆ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ಗೊತ್ತಾಗಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ಒತ್ತಾಯಿಸಿದ್ದಾರೆ.
ಕಾನೂನಿಗೆ ಮೌಲ್ಯ ಕೊಟ್ಟು ಪಾಲನೆ ಮಾಡುವಂತಾಗಬೇಕು…
‘ಸ್ಮಗ್ಲಿಂಗ್ ಅನ್ನು ನಿಲ್ಲಿಸಿ ಬಯಲುಗೊಳಿಸಿದಾಗ, ಹಾಗೂ ಅದರ ಮೇಲೆ ಸಮರ್ಪಕವಾಗಿ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ಜನರು ಭಯದಿಂದ ಕಾನೂನು ಪಾಲನೆ ಮಾಡಲು ಮುಂದಾಗುವುದಕ್ಕಿಂತ ಹೆಚ್ಚಾಗಿ ಕಾನೂನಿಗೆ ಗೌರವ ಕೊಟ್ಟು ಪಾಲನೆ ಮಾಡಲು ಮುಂದಾಗುತ್ತಾರೆ’ ಎಂದು ಡಿಆರ್ಐ ಅಧಿಕಾರಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಂಆರ್ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್
‘ಸಣ್ಣ ಪ್ರಕರಣ ಪತ್ತೆ ಆದಾಗ ತನಿಖೆ ಮಾಡುವಾಗ ದೊಡ್ಡ ಚಿತ್ರಣ ಕಣ್ಮುಂದಿರಲಿ. ಒಂದು ಸಂಸ್ಥೆ, ಒಬ್ಬ ವ್ಯಕ್ತಿ ಹಾಗೂ ಅವರ ವರ್ತನೆಯ ಮಾದರಿ ಬಗ್ಗೆ ಲಭ್ಯ ಇರುವ ಎಲ್ಲಾ ಮಾಹಿತಿಯನ್ನೂ ಬಳಸಿ ತನಿಖೆ ನಡೆಸಿ’ ಎಂದು ಅವರು ಕರೆನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ