AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆವರಿಸಿದ ಆರ್ಥಿಕ ಹಿಂಜರಿತ ಭೀತಿ: ಕಚ್ಚಾತೈಲ ಉತ್ಪಾದನೆ ಕಡಿತ ಘೋಷಿಸಿದ ಒಪೆಕ್, ಇಂಧನ ಬೆಲೆ ಏರಿಕೆ ಆಘಾತದ ನಿರೀಕ್ಷೆ

ಒಪೆಕ್ ದೇಶಗಳ ಈ ನಿರ್ಧಾರವೂ ಈಗಾಗಲೇ ತೀವ್ರ ಹಣದುಬ್ಬರದಿಂದ ಕಂಗಾಲಾಗಿರುವ ಐರೋಪ್ಯ ದೇಶಗಳ ಪಾಲಿಗೆ ಬಿಸಿತುಪ್ಪವಾಗಿದೆ.

ಆವರಿಸಿದ ಆರ್ಥಿಕ ಹಿಂಜರಿತ ಭೀತಿ: ಕಚ್ಚಾತೈಲ ಉತ್ಪಾದನೆ ಕಡಿತ ಘೋಷಿಸಿದ ಒಪೆಕ್, ಇಂಧನ ಬೆಲೆ ಏರಿಕೆ ಆಘಾತದ ನಿರೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 06, 2022 | 10:20 AM

Share

ವಿಶ್ವದ ಬಲಾಢ್ಯ ಕಚ್ಚಾ ತೈಲ ಉತ್ಪಾದನಾ ದೇಶಗಳ ಒಕ್ಕೂಟವಾಗಿರುವ ‘ಒಪೆಕ್’ (Organisation of the Petroleum Exporting Countries – OPEC) ತೈಲೋತ್ಪಾದನೆ ಕಡಿತಗೊಳಿಸುವುದಾಗಿ ಘೋಷಿಸಿದೆ. ಒಂದು ದಿನಕ್ಕೆ 20 ಲಕ್ಷ ಬ್ಯಾರೆಲ್​ಗಳಷ್ಟು ಉತ್ಪಾದನೆ ಕಡಿತಗೊಳಿಸಲು ಮುಂದಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಬಗೆಯ ಇಂಧನಗಳ ಬೆಲೆ ಹೆಚ್ಚಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಕೊವಿಡ್-19 ಪಿಡುಗು ಕಾಣಿಸಿಕೊಂಡ ನಂತರದ ಅತಿದೊಡ್ಡ ಉತ್ಪಾದನಾ ಕಡಿತ ಇದಾಗಿದೆ. ಈ ಘೋಷಣೆ ಹೊರಬಿದ್ದ ಬೆನ್ನಿಗೇ ಕಚ್ಚಾತೈಲ ವಹಿವಾಟಿನ ಜಾಗತಿಕ ಉತ್ಪನ್ನ ‘ಬ್ರೆಂಟ್ ಕ್ರೂಡ್​’ ಬೆಲೆಯು ಒಂದು ಬ್ಯಾರೆಲ್​ಗೆ 28 ಸೆಂಟ್​ ಅಥವಾ ಶೇ 0.3ರಷ್ಟು ಹೆಚ್ಚಾಗಿದೆ. ಈ ಏರಿಕೆಯೊಂದಿಗೆ ಒಂದು ಬ್ಯಾರೆಲ್ ಕಚ್ಚಾತೈಲವು ಸರಾಸರಿ 92.08 ಡಾಲರ್​ಗೆ (8002.16 ರೂಪಾಯಿ) ಮುಟ್ಟಿದೆ. ಇಂಧನ ಬೆಲೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದ ಒಪೆಕ್ ಪದಾಧಿಕಾರಿಗಳು ಕಳೆದ ಸೆಪ್ಟೆಂಬರ್​ನಲ್ಲಿ ದಿನಕ್ಕೆ 1 ಲಕ್ಷ ಬ್ಯಾರೆಲ್ ಉತ್ಪಾದನೆ ಕಡಿತಗೊಳಿಸುವುದಾಗಿ ಘೋಷಿಸಿದ್ದರು.

ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಬಹುದು ಎಂಬ ಭೀತಿ ಎದುರಾಗಿದ್ದು, ಉದ್ಯಮ ವಲಯದಲ್ಲಿ ಉತ್ಪಾದನೆ, ಪೂರೈಕೆ ಮತ್ತು ಮಾರಾಟ ಸರಪಳಿಯಲ್ಲಿ ಕಳಾಹೀನ ಸ್ಥಿತಿ ಎದುರಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜಗತ್ತು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದರೆ ಸಹಜವಾಗಿಯೇ ಇಂಧನಕ್ಕೂ ಬೇಡಿಕೆ ಕಡಿಮೆಯಾಗುತ್ತದೆ. ಆಗ ತೈಲೋತ್ಪನ್ನಗಳಿಗೆ ಬೆಲೆ ಕುಸಿಯಬಹುದು ಎಂದು ಲೆಕ್ಕ ಹಾಕಿರುವ ತೈಲೋತ್ಪದನಾ ಕಂಪನಿಗಳು ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಉತ್ಪಾದನೆ ತಗ್ಗಿಸಲು ಮುಂದಾಗಿವೆ. ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲಗಳ ಬೆಲೆ ಹೆಚ್ಚಾಗಿತ್ತು. ಇದು ತೈಲ ಉತ್ಪಾದಿಸುವ ಪ್ರಮುಖ ರಾಷ್ಟ್ರವಾದ ಸೌದಿ ಅರೇಬಿಯಾಕ್ಕೆ ಹೆಚ್ಚು ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿತ್ತು.

2020ರ ನಂತರ ಇದು ಅತಿದೊಡ್ಡ ಉತ್ಪಾದನಾ ಕಡಿತವಾಗಿದೆ. ಕೊವಿಡ್ 19 ಪಿಡುಗು ಜಗತ್ತನ್ನು ಆವರಿಸಿದ್ದಾಗ ಒಪೆಕ್ ದೇಶಗಳು ದಿನಕ್ಕೆ 1 ಕೋಟಿ ಬ್ಯಾರೆಲ್ ಉತ್ಪಾದನೆ ತಗ್ಗಿಸುವ ನಿರ್ಧಾರ ತೆಗೆದುಕೊಂಡಿದ್ದವು. ಇದೀಗ ಮತ್ತೊಮ್ಮೆ ಇಂಥದ್ದೇ ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹ ಸಂಗತಿ ಎನಿಸಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದ ನಂತರ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ಮಧ್ಯಪ್ರಾಚ್ಯದ ಒಪೆಕ್ ಒಕ್ಕೂಟ ದೇಶಗಳ ಮೇಲಿನ ಅವಲಂಬನೆ ಹೆಚ್ಚಿಸಿಕೊಂಡಿದ್ದವು. ಅತ್ತ ಉಕ್ರೇನ್ ಬಿಕ್ಕಟ್ಟು ಕೊನೆಯಾಗುತ್ತಿಲ್ಲ, ಇತ್ತ ಒಪೆಕ್ ದೇಶಗಳು ಉತ್ಪಾದನೆ ತಗ್ಗಿಸಿವೆ. ರಷ್ಯಾ ಕೂಡ ನೈಸರ್ಗಿಕ ಅನಿಲ ಸಾಗಿಸುವ ಪೈಪ್​ಲೈನ್​ ತುಂಡರಿಸಿ ಯೂರೋಪ್​ ಖಂಡವನ್ನೇ ಚಳಿಯಲ್ಲಿ ನಡುಗುವಂತೆ ಮಾಡುತ್ತಿದೆ. ಒಪೆಕ್ ದೇಶಗಳ ಈ ನಿರ್ಧಾರವೂ ಈಗಾಗಲೇ ತೀವ್ರ ಹಣದುಬ್ಬರದಿಂದ ಕಂಗಾಲಾಗಿರುವ ಐರೋಪ್ಯ ದೇಶಗಳ ಪಾಲಿಗೆ ಬಿಸಿತುಪ್ಪವಾಗಿದೆ.

ಅಮೆರಿಕದ ವಿರೋಧದ ನಡುವೆಯೂ ರಷ್ಯಾದಿಂದ ಇಂಧನ ಖರೀದಿ ಮತ್ತು ಇತರ ವಹಿವಾಟನ್ನು ರೂಪಾಯಿ-ರೂಬಲ್ ವಿನಿಮಯ ವ್ಯವಸ್ಥೆಯಲ್ಲಿ ಭಾರತವು ಮುಂದುವರಿಸಿರುವುದರಿಂದ ಒಪೆಕ್ ದೇಶಗಳ ನಿರ್ಧಾರದ ಪರಿಣಾಮವು ಯೂರೋಪ್​ ದೇಶಗಳ ಬೀರಿದಷ್ಟು ತೀವ್ರವಾಗಿ ಭಾರತದ ಮೇಲೆ ಬೀರಲಾರದು. ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಾಗುವುದು ನಿಜ. ಆದರೆ ಅದು ಬಿಕ್ಕಟ್ಟು ಸೃಷ್ಟಿಸುವಷ್ಟು ತೀವ್ರವಾಗಲಾರದು ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ