
ಗದಗ, ಮಾರ್ಚ್ 14: ಹೋಳಿ (holi) ಹಬ್ಬದ ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ 16 ವರ್ಷದ ಬಾಲಕ ನೀರುಪಾಲಾಗಿರುವಂತಹ (death) ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ. ದೇವೇಂದ್ರ ಮೃತ ಬಾಲಕ. ಸ್ಥಳೀಯರ ಸಹಾಯದಿಂದ ಬಾಲಕನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅದೇ ರೀತಿಯಾಗಿ ಹೋಳಿ ಆಚರಣೆ ನಂತರ ತುಂಗಭದ್ರಾ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಕ್ಯಾಂಪ್ ಬಳಿ ನಡೆದಿದೆ. ಯರಗೇರಾ ಗ್ರಾಮದ ನಿವಾಸಿ ಗಂಗರಾಮ್(29) ನೀರುಪಾಲಾದ ಯುವಕ.
ಇದನ್ನೂ ಓದಿ: ಮಂಡ್ಯದಲ್ಲೊಂದು ಮನಕಲಕುವ ಘಟನೆ: ಯುವಕನ ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
6 ಜನ ಸ್ನೇಹಿತರ ಜತೆ ಸೇರಿ ಹೋಳಿ ಆಚರಿಸಿದ್ದ ಗಂಗರಾಮ್, ಬಳಿಕ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿದ್ದಾರೆ. ಈ ವೇಳೆ ಈಜು ಬಾರದ ಬಾಲಕನ ರಕ್ಷಣೆ ಮಾಡಲು ಹೋಗಿ ನೀರುಪಾಲಾಗಿದ್ದಾರೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಹೋಳಿ ಬಳಿಕ ಸ್ನಾನಕ್ಕೆ ತೆರಳಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ನಾಪತ್ತೆ ಆಗಿರುವಂತಹ ಘಟನೆ ರಾಯಚೂರು ತಾಲೂಕಿನ ಸುಲ್ತಾನಪುರ ಹೊರವಲಯದಲ್ಲಿ ನಡೆದಿದೆ. ಸ್ನಾನ ಮಾಡಲು ಹೊಂಡಕ್ಕೆ ಜಿಗಿದಿದ್ದ ಸೋಮನಗೌಡ(45) ನಾಪತ್ತೆ ಆಗಿದ್ದಾರೆ. ಹೊಂಡದಲ್ಲಿ ಸಿಲುಕಿರುವ ಶಂಕೆ ಅಥವಾ ಮೊಸಳೆ ಹಿಡಿದಿರುವ ಅನುಮಾನ ವ್ಯಕ್ತವಾಗಿದೆ. ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆದಿದ್ದರಿಂದ ನಿರ್ಮಾಣವಾದ ಗುಂಡಿಯಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು
ಹೊಂಡದಲ್ಲಿ ಮೊಸಳೆ ಇರುವ ಬಗ್ಗೆ ಜನರಲ್ಲಿ ಹಲವು ದಿನಗಳಿಂದ ಆತಂಕವಿತ್ತು. ಈ ಹಿಂದೆ ಇದೇ ಜಾಗದಲ್ಲಿ ಕುರಿ ಮೇಲೆ ಮೊಸಳೆ ದಾಳಿ ನಡೆಸಿತ್ತು. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸೋಮನಗೌಡಗಾಗಿ ಶೋಧ ಕಾರ್ಯ ನಡೆದಿದೆ.
ಹೋಳಿ ಹಬ್ಬ ಹಿನ್ನೆಲೆ ಜಮೀನಿನಲ್ಲಿ ಪಾರ್ಟಿ ವೇಳೆ ಗಲಾಟೆಯಾಗಿ ಓರ್ವ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಕಿರಿಕ್ ಆಗಿದೆ. ಅಲ್ಲೇ ಗುಂಪು ಕಟ್ಟಿಕೊಂಡು ಯುವಕರು ಹೊಡೆದಾಡಿದ್ದಾರೆ. ಗಲಾಟೆ ವೇಳೆ ಪ್ರಕಾಶ್ ಚತುರ್ಗೆ ಚಾಕು ಇರಿಯಲಾಗಿದೆ. ಪ್ರಕಾಶ್ ಚತುರ್ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಾಲಕ ಹಾಗೂ ಅಜ್ಜಿ ನೀರುಪಾಲಾಗಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ. ಅಸಾದ್ ಮುಲ್ಲಾ(12), ಸಲೀಮಾ ಮುಲ್ಲಾ(55) ಮೃತರು. ಮೃತ ಬಾಲಕ ಬಾವಿಗಿಳಿದು ನೀರು ಕುಡಿಯುವಾಗ ಕಾಲುಜಾರಿ ಬಿದಿದ್ದಾನೆ. ಆತನ ರಕ್ಷಣೆಗೆ ಹೋಗಿದ್ದ ವೃದ್ಧೆ ಕೂಡ ಮುಳುಗಿ ಸಾವನ್ನಪ್ಪಿದ್ದಾರೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Fri, 14 March 25