AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರಿಗೆ ಅವಹೇಳನ; ಶಾಲೆಗೆ ಮುತ್ತಿಗೆ

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಅಯೋಧ್ಯೆ ಹಾಗೂ ಶ್ರೀರಾಮ ದೇವರಿಗೆ ಅವಹೇಳನ ಮಾಡಿದ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿದ್ಯಾರ್ಥಿಯ ಪೋಷಕರೊಬ್ಬರು ಶಾಲೆಗೆ ಮುತ್ತಿಗೆ ಹಾಕುವಂತೆ ಸೂಚಿಸುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಣ ಸಂಸ್ಥೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರಿಗೆ ಅವಹೇಳನ; ಶಾಲೆಗೆ ಮುತ್ತಿಗೆ
ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರಿಗೆ ಅವಹೇಳನ; ಶಾಲೆಗೆ ಮುತ್ತಿಗೆ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Rakesh Nayak Manchi|

Updated on:Feb 10, 2024 | 3:33 PM

Share

ಮಂಗಳೂರು, ಫೆ.10: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ (Saint Gerosa Educational Institution) ಶ್ರೀರಾಮ (Sri Ram) ದೇವರ ಅವಹೇಳನ ಆರೋಪ ಕೇಳಿಬಂದಿದೆ. ವೈರಲ್ ಆಡಿಯೋ ಸಂದೇಶದ ಮೇರೆಗೆ ಕೆಲವು ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಶಾಲಾ ಶಿಕ್ಷಕಿಯೊಬ್ಬರು ಅಯೋಧ್ಯೆ ಮತ್ತು ರಾಮ ದೇವರ ಕುರಿತು ಅವಹೇಳನ ಮಾಡಿದ್ದು, ಮುತ್ತಿಗೆ ಹಾಕುವಂತೆ ಸೂಚಿಸುವ ಪೋಷಕರೊಬ್ಬರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಾಹ್ನ 2 ಘಂಟೆಗೆ ಶಾಲಾ ಆವರಣದಲ್ಲಿ ಸೇರಬೇಕಾಗಿ ಸಂದೇಶ ರವಾನಿಸಲಾಗಿದ್ದು, ಆಡಿಯೋ ಹಾಗೂ ಸಂದೇಶ ವೈರಲ್ ಹಿನ್ನೆಲೆ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನ ಮಾಡಲಾಗಿದ್ದಾರೆ. ಅಲ್ಲದೆ ಅವಹೇಳನದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು ನಿರ್ಧರಿಸಿದ್ದು, ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣದಲ್ಲಿ ಸೇರುವಂತೆ ಆಡಿಯೋದಲ್ಲಿ ಹೇಳಲಾಗಿದೆ.

ಅದರಂತೆ, ಶಾಲಾ ಆವರಣದಲ್ಲಿ ಕೆಲ ಹಿಂದೂ ಕಾರ್ಯಕರ್ತರು ಹಾಗೂ ಪೋಷಕರು ಜಮಾವಣೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಬಳಿಕ ಶಾಲೆ ಬಂದ್ ಆಗಿದ್ದರೂ ಕೆಲ ಪೋಷಕರು, ಕಾರ್ಯಕರ್ತರು ಜಮಾಯಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ಶ್ರೀರಾಮನ ಬಗ್ಗೆ ಅವಹೇಳನ: ವಿಡಿಯೋ ಹರಿಬಿಟ್ಟಿದ್ದ ಇಬ್ಬರು ಯುವಕರು ವಶಕ್ಕೆ

ಶಿಕ್ಷಣ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ ಪೋಷಕರು ಹಾಗೂ ಕಾರ್ಯಕರ್ತರು, ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವಿಚಾರವಾಗಿ ಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರು ಆಡಳಿತ ಮಂಡಳಿ ಜೊತೆ ಮಾತನಾಡಿ ಜೆರೋಸಾಶಾಲೆ ಒಳಗಿನಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ತಡೆಯಲು ಮುಂದಾದಾಗ ಪೊಲೀಸರ ವಿರುದ್ಧವೇ ಪೋಷಕರು ಹಾಗೂ ಕಾರ್ಯಕರ್ತರು ವಾಗ್ವಾದ ನಡೆಸಿದರು.

ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕೆಂದು ವಿಎಚ್ ಪಿ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ. ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂಪರಿಷತ್ , ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ತಮ್ಮ ಮಕ್ಕಳು ಕೂಡ ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಹೇಳಿಕೊಂಡೊದ್ದರು ಎಂದು ಟಿವಿ9ಗೆ ಪೋಷಕರು ಮಾಹಿತಿ ನೀಡಿದ್ದಾರೆ. ಸಿಸ್ಟರ್ ಪ್ರಭಾ ಅವರನ್ನು ನಮ್ಮ ಜೊತೆ ಮಾತನಾಡಿಸಿ ಅಂತಾ ಒತ್ತಾಯಿಸಿದರು. ಶ್ರೀರಾಮನ ವಿರುದ್ಧ ಈ ರೀತಿ ಹೇಳಿದಾಗ ಮಂದಿರ ಉದ್ಘಾಟನೆ ಆಗಿರಲಿಲ್ಲ. ಆಗ ನಾನು ಶ್ರೀರಾಮ ಪ್ರಾಣ ಪ್ರತಿಷ್ಠೆ ಆದ ಬಳಿಕ ಇದಕ್ಕೆ ತೀರ್ಮಾನ ಮಾಡು ಅಂತಾ ಬೇಡಿಕೊಂಡಿದ್ದೆವು. ಈಗ ಇದನ್ನು ಪ್ರಶ್ನಿಸುವ ಸಮಯ ಬಂದಿದೆ‌ ಎಂದರು.

ಘಟನೆ ಸಂಬಂಧ ಮಾತನಾಡಿದ ಐವನ್ ಡಿಸೋಜಾ, ವಿದ್ಯಾರ್ಥಿಗಳ ಪೋಷಕರು ನನ್ನ ಬಳಿ ದೂರು ನೀಡಿದ್ದರು. ಆ ಬಗ್ಗೆ ವಿಚಾರಿಸಲು ಶಾಲೆಗೆ ಬಂದಿದ್ದೆ. ಸೋಮವಾರ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮತ್ತು ಅಧ್ಯಾಪಕಿಯನ್ನು ಕರೆದು ಮಾತನಾಡುವುದಾಗಿ ಆಡಳಿತ ಮಂಡಳಿ ಹೇಳಿದೆ. ಸೋಮವಾರದವರೆಗೂ ಕಾಯೋಣ. ಕೊಲೆ ಮಾಡಿದವನು ಅಪರಾಧಿ ಅಂತ ತನಿಖೆ ಬಳಿಕ ಗೊತ್ತಾಗುತ್ತದೆ. ಅದೇ ರೀತಿ ಈ ಘಟನೆಯ‌ ಸತ್ಯಾಸತ್ಯತೆ ತನಿಖೆ ಬಳಿಕ ಗೊತ್ತಾಗಲಿದೆ ಎಂದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Sat, 10 February 24