
ರಾಯಚೂರು, ಸೆಪ್ಟೆಂಬರ್ 12: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಅಮಾವಾಸ್ಯೆಯ ದಿನದಂದೇ ಹತ್ಯೆಯೊಂದು ನಡೆದಿದ್ದು, ಇಡೀ ಪಟ್ಟಣವೇ ಬೆಚ್ಚಿಬಿದ್ದಿದೆ. ಅನೈತಿಕ ಸಂಬಂಧದ ಅನುಮಾನ ಹಿನ್ನೆಲೆ ಮನೆಯಲ್ಲಿ ಊಟ ಮಾಡುತ್ತಿದ್ದ ಹನುಮೇಶ್ (32) ಎಂಬಾತನನ್ನು ಅದೇ ಏರಿಯಾದ ಶಂಕರ್ ಎಂಬಾತ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಆರೋಪಿ ಖುದ್ದು ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಹನುಮೇಶ್ ಅವಿವಾಹಿತನಾಗಿದ್ದು, ಭತ್ತದ ವ್ಯಾಪಾರ ಮಾಡಿಕೊಂಡು ತಂದೆ-ತಾಯಿ ಹಾಗೂ ತಮ್ಮನ ಜೊತೆ ವಾಸವಾಗಿದ್ದ. ಶುಕ್ರವಾರ ಬೆಳಗ್ಗೆ 10:30ರ ಸುಮಾರಿಗೆ ಕುಟುಂಬಸ್ಥರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಹನುಮೇಶ್ ಮನೆಯಲ್ಲಿ ಒಬ್ಬನೇ ಇದ್ದ. ಆತ ಊಟ ಮುಗಿಸಿ ಭತ್ತದ ವ್ಯಾಪಾರಕ್ಕೆ ತೆರಳಲು ಸಜ್ಜಾಗುತ್ತಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ ಶಂಕರ್, ಏಕಾಏಕಿ ಹಿಂಬದಿಯಿಂದ ಅಟ್ಯಾಕ್ ಮಾಡಿ ಹನುಮೇಶ್ನ ತಲೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.
ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿ ಶಂಕರ್ ಹಾಗೂ ಮೃತ ಹನುಮೇಶ್ ಮನೆಗಳು ಅಕ್ಕಪಕ್ಕದಲ್ಲೇ ಇವೆ. ಆರೋಪಿ ಶಂಕರ್ನ ಸಹೋದರಿಯೊಂದಿಗೆ ಹನುಮೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಶಂಕರ್ನಲ್ಲಿತ್ತು.
ಇದನ್ನೂ ಓದಿ: ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಇದೇ ಕಾರಣಕ್ಕೆ ಆತನ ಮೇಲೆ ದ್ವೇಷ ಸಾಧಿಸುತ್ತಿದ್ದ. ಹನುಮೇಶ್ನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.
ಇನ್ನು ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ಶಂಕರ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೈಯಲ್ಲಿ ಮಚ್ಚು ಹಿಡಿದುಕೊಂಡು ನಿಂತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದ. ಕೃತ್ಯ ಎಸಗಿದ ಬಳಿಕ ತಾನೇ ನೇರವಾಗಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಬ್ಲಾಕ್ಮೇಲ್: ರಾಯಚೂರಿನಲ್ಲಿ ಮೂವರು ಖತರ್ನಾಕ್ ಸುಲಿಗೆಕೋರರ ಬಂಧನ!
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.