ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ; ಮೃತನ ಮಗನೂ ಸೇರಿ ಮೂವರ ಬಂಧನ

ಆತ ಶಿವಮೊಗ್ಗ ಪೊಲೀಸರಿಗೆ ತಲೆನೋವಾಗಿದ್ದ ಆಸಾಮಿ. ಮನೆ ಕಳ್ಳತನ, ದರೋಡೆ ಸೇರಿದಂತೆ ಹತ್ತು ಹಲವು ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಸಹ ಅನುಭವಿಸಿದ್ದ‌‌. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಜೈಲಿನಿಂದ ಹೊರಬಂದಿದ್ದ ಮೆಂಟಲ್ ಸೂರಿಯನ್ನು ಶಿವಮೊಗ್ಗದ ನಡುರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ; ಮೃತನ ಮಗನೂ ಸೇರಿ ಮೂವರ ಬಂಧನ
ಮೃತ ವ್ಯಕ್ತಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Apr 27, 2024 | 8:31 PM

ಶಿವಮೊಗ್ಗ, ಏ.27: ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವು ತಂದಿಡುತ್ತಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ(Shivamogga) ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ ಶ್ರೀ ಗಂಗಾಮಸ್ಥರ ದೇವಸ್ಥಾನದ ಸಮೀಪದ ಹೋಟೆಲ್ ಬಳಿ ಭೀಕರವಾಗಿ ಹತ್ಯೆಯಾಗಿತ್ತು. ಈ ಕೊಲೆ ಮಾಡಿದ ಹಂತಕರು ಎಸ್ಕೇಪ್ ಆಗಿದ್ದರು. ಕಳೆದ ಒಂದು ವಾರದ ಹಿಂದೆ ನಡೆದ ಕೊಲೆ ಪ್ರಕರಣವನ್ನು ಕೋಟೆ ಪೊಲೀಸರು ಇದೀಗ ಬೇಧಿಸಿದ್ದಾರೆ. ಮೃತನ ಸಂಬಂಧಿ ರಾಕೇಶ್, ಆತನ ಸ್ನೇಹಿತ ಪ್ರವೀಣ್​ ಮತ್ತು ಮೃತನ ಅಪ್ರಾಪ್ತ ಮಗ ಸೇರಿ ಮೂವರನ್ನು ಬಂಧಿಸಿದ್ದಾರೆ.

ಘಟನೆ ವಿವರ

ಅಂದು ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು, ದಾಳಿಯ ಅರಿವೇ ಇಲ್ಲದೇ ನಿಂತಿದ್ದ ಸೂರಿ ಮೇಲೆ, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್​ನಿಂದ ದಾಳಿ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಮೆಂಟಲ್ ಸೂರಿ ಸ್ಥಳದಲ್ಲೇ ಹೆಣವಾಗಿದ್ದನು. ಇದೊಂದು ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಮೃತನ ಸಂಬಂಧಿ ರಾಕೇಶ್ ಮತ್ತು ಆತನ ಸ್ನೇಹಿತ ಪ್ರವೀಣ್​ ಹಾಗೂ ಮೃತನ ಅಪ್ರಾಪ್ತ ಮಗನೂ ಸೇರಿ ಹತ್ಯೆ ಮಾಡಿದ್ದಾರೆಂದು ಮೃತನ ಸಹೋದರಿ ಆರೋಪ ಮಾಡಿದ್ದರು.

ಇದನ್ನೂ ಓದಿ:ರಾಯಚೂರು: ಪತ್ನಿ ಜೊತೆಗೆ ಮತ್ತೋರ್ವ ವ್ಯಕ್ತಿಯ ಅನೈತಿಕ ಸಂಬಂಧ: ಕೊಲೆಗೈದ ಪತಿ

ಒಂದೆಡೆ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಮೆಂಟಲ್ ಸೂರಿ. ಮತ್ತೊಂದಡೆ ಪತ್ನಿಗೆ ತಲೆನೋವು ಆಗಿದ್ದ. ಇತನ ರಾಕ್ಷಸೀಯ ವರ್ತನೆ ನೋಡಿದ ಪತ್ನಿ ಮತ್ತು ಮಗ ಹಾಗೂ ಸಂಬಂಧಿ ರಾಕೇಶ್ ಬೆಚ್ಚಿಬಿದ್ದಿದ್ದರು.  ಇತ ಗಲಾಟೆ ,ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ರೆ, ಕುಟುಂಬಕ್ಕೆ ನೆಮ್ಮದಿ. ಜೈಲ್​ನಿಂದ ಬಂದ್ರೆ ಸಾಕು ಕುಟುಂಬದಲ್ಲಿ ನರಕ. ಈ ನಡುವೆ ಸಂಬಂಧಿ ರಾಕೇಶ್ ಮತ್ತು ಮೃತನ ಪತ್ನಿಯ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ರಾಕೇಶ್ ಮತ್ತು ಪ್ರವೀಣ್ ಪ್ಲ್ಯಾನ್ ಮಾಡಿ ಸೂರಿ ಕೊಲೆ ಮಾಡಿದ್ದಾರೆ.

ಕೊಲೆಯಾದ ದಿನ ಮದ್ಯಾಹ್ನ ಸೂರಿ, ರಾಕೇಶ್ ಮತ್ತು ಪವೀಣ್ ಮೂವರು ಎಣ್ಣೆ ಹೊಡೆದಿದ್ದಾರೆ. ಬಳಿಕ ಸಂಜೆಯಾಗುತ್ತಿದ್ದಂತೆ ಮತ್ತೆ ರಾಕೇಶ್ ಎಣ್ಣೆ ಹೊಡೆಯಲು ಸೂರಿಗೆ ಕರೆದಿದ್ದಾನೆ. ಈ ನಡುವೆ ಸೂರಿ ಮತ್ತು ಪತ್ನಿ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ರಾಕೇಶ್ ಎಂಟ್ರಿಕೊಟ್ಟಿದ್ದನು. ಸೂರಿಗೆ ಎಷ್ಟೇ ಬುದ್ದಿ ಹೇಳಿದ್ರೂ ಆತನ ಬದಲಾಗಲಿಲ್ಲ. ಇದರಿಂದ ಒಬ್ಬನೇ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೈಕ್ ಮೇಲೆ ಬಂದ ರಾಕೇಶ್ ಮತ್ತು ಪ್ರವೀಣ್ ಮತ್ತು ಅಪ್ರಾಪ್ತನ ಮಗ ಮೂವರು ಸೇರಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕೇವಲ ಬ್ಯಾಟ್ ನಿಂದ ಮಾತ್ರವಲ್ಲ ಸ್ಟಂಪ್​ನಿಂದ ಕೂಡ ಬ್ಯಾಟಿಂಗ್ ಆಡಿದ್ದಾರೆ. ಇದರ ಪರಿಣಾಮ ಮೆಂಟಲ್ ಸೂರಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಪ್ರಕರಣದ ತನಿಖೆಯನ್ನು ಆರಂಭಿಸಿದ ಕೋಟೆ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 pm, Sat, 27 April 24

Loading...
Unable to load recommendations.
Follow Us