ವೇಷ ಬದಲಿಸಿಕೊಂಡು ಬಂದು ಅತ್ತೆಯ ಕಣ್ಣಿಗೆ ಖಾರದಪುಡಿ ಎರಚಿ ಒಡವೆ ದೋಚಿದ ಅಳಿಯ
ಮನುಷ್ಯನ ಅತಿಯಾಸೆ ಮುಂದೆ ಯಾವ ಬಾಂಧವ್ಯ-ಸಂಬಂಧಗಳಿಗೆ ಬೆಲೆಯೇ ಇಲ್ಲವಾಗುತ್ತದೆ. ರಕ್ತ ಸಂಬಂಧಿಗಳಾಗಿದ್ದರೂ ಅವರಿಗೆ ಮೋಸ ಮಾಡುಲು ಹಿಂದೆ ಮುಂದೆ ನೋಡುತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಸೋದರಳಿಯನೇ ಅತ್ತೆಗೆ ಮೋಸ ಮಾಡಿ, ಜೈಲು ಪಾಲಾಗಿದ್ದನು. ಏನಿದು ದರೋಡೆ ಪ್ರಕರಣ? ಇಲ್ಲಿದೆ ಓದಿ.

ವಿಜಯಪುರ, ಮೇ 01: ಸೋದರಳಿಯನೇ ಸ್ವಂತ ಅತ್ತೆಯ ಮೈಮೇಲಿದ್ದ ಚಿನ್ನಾಭರಣ ದರೋಡೆ ಮಾಡಿದ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ. ಇಂಡಿ (Indi) ತಾಲೂಕಿನ ಅಂಜುಟಗಿ ಗ್ರಾಮದ ನಿಂಬೆವ್ವಾ ಪೂಜಾರಿ (70) ಎಂಬುವರು ಸೋದರಳಿಯ ನಿಂಗಪ್ಪ ಪೂಜಾರಿಯನ್ನು ಕರೆದುಕೊಂಡು ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದಲ್ಲಿನ ಸಂಬಂಧಿಕರ ಮನೆಗೆ ಹೋಗಿದ್ದರು.
ಸಾಯಂಕಾಲ ಗುಳೆದಗುಡ್ಡದಿಂದ ನಿಡಗುಂದಿಗೆ ಆಗಮಿಸಿ, ಅಲ್ಲಿಂದ ಝಳಕಿಗೆ ಬಸ್ ಮೂಲಕ ಬಂದಿದ್ದರು. ಝಳಕಿಯಿಂದ ಬೈಕ್ನಲ್ಲಿ ಅಳಿಯನ ಜೊತೆಗೆ ಅಂಜುಟಗಿ ಗ್ರಾಮಕ್ಕೆ ನಿಂಬೆವ್ವಾ ತೆರಳುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಾರ್ಗ ಮದ್ಯೆ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಪೆಟ್ರೋಲ್ ತರುತ್ತೇನೆಂದು ನಿಂಪ್ಪ ಹೋಗಿದ್ದನು.
ಕೆಲ ಸಮಯದ ನಂತರ ನಿಂಗಪ್ಪ ಬಟ್ಟೆಗಳನ್ನು ಬದಲಾಯಿಸಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮತ್ತೋರ್ವನೊಂದಿಗೆ ನಿಂಬೆವ್ವರ ಬಳಿಗೆ ಬಂದು, ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರಕಿ ಅವರ ಮೈ ಮೇಲಿದ್ದ 130 ಗ್ರಾಂಗೂ ಆಧಿಕ ಚಿನ್ನಾಭರಣ ಕಿತ್ತುಕೊಂಡು ಓಡಿ ಹೋಗಿದ್ದರು.
ಬಳಿಕ, ಬಟ್ಟೆ ಬದಲಾಯಿಸಿಕೊಂಡ ಬಂದ ನಿಂಗಪ್ಪ ಅತ್ತೆಯ ಆಭರಣಗಳು ದರೋಡೆಯಾಗಿವೆ ಎಂದು ಝಳಕಿ ಪೊಲೋಸ್ ಠಾಣೆಯಲ್ಲಿ ದೂರು ನೀಡಿದನು.
ಆರಂಭದಲ್ಲಿ ಬೇರೆಯವರು ದರೋಡೆ ಮಾಡಿರಬಹುದು ಎಂದು ಪೊಲೀಸರು ಅಂದುಕೊಂಡಿದ್ದರು. ನಿಂಬೆವ್ವ ಅವರು ಅಳಿಯನ ಮೇಲೆ ಸಂಶಯವಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ, ಪೊಲೀಸರು ಘಟನೆ ನಡೆದ ದಿನದ ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಅಳಿಯ ನಿಂಗಪ್ಪನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದರೊಡೆ ನಾಟಕ ಬಯಲಾಗಿದೆ.
ಯಾವಾಗ ಪೊಲೀಸರ ತನಿಖೆಯಲ್ಲಿ ಘಟನೆ ನಡೆದ ಸಮಯದಲ್ಲಿ ಝಳಕಿಯಿಂದ ಅಂಜುಟಗಿ ಮಾರ್ಗದಲ್ಲಿ ಬೇರೆ ಯಾರೋಬ್ಬರೂ ಪ್ರಯಾಣ ಮಾಡಿರಲಿಲ್ಲ ಎಂಬುದು ಮೊಬೈಕ್ ಟವರ್ ಲೊಕೇಷನ್ ಮೇಲೆ ತಿಳಿದು ಬಂದಿತ್ತು. ಅಲ್ಲದೇ, ನಿಂಬೆವ್ವ ಸಹ ಇದು ಅಳಿಯನದ್ದೇ ಕಿತಾಪತಿ ಎಂಬ ಅನುಮಾನ ವ್ಯಕ್ತಪಡಿಸಿದ್ದು ಸಹ ಪೊಲೀಸರಿಗೆ ಸಹಾಯಕವಾಗಿತ್ತು. ಈ ಹಿನ್ನೆಲೆಯಲ್ಲಿ ನಿಂಗಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಕಲಿ ದರೋಡೆಯ ಕಹಾನಿ ಬಹಿರಂಗವಾಗಿದೆ.
ಘಟನೆ ನಡೆದ ದಿನ ನಿಂಗಪ್ಪ ಪೂರ್ವ ನಿಯೋಜನೆಯಂತೆ ನಿಂಬೆವ್ವ ಅವರನ್ನು ಬೈಕ್ ಮೇಲೆ ಹತ್ತಿಸಿಕೊಂಡು ಬಂದು ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ನಿಂಬೆವ್ವ ಪೂಜಾರಿಯನ್ನು ರಸ್ತೆಯಲ್ಲೇ ನಿಲ್ಲಿಸಿ ಹೋಗಿದ್ದನು.
ನಂತರ, ತನ್ನ ಸ್ನೇಹಿತ ಪರಶುರಾಮ ಬಂದಪಟ್ಟಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಿಂಗಪ್ಪ ಹಾಗೂ ಪರಶುರಾಮ ಬಂದು ನಿಂಬೆವ್ವ ಅವರ ಮೈಮೇಲಿದ್ದ ಚಿನ್ನದ ಬಳೆ ಸರ ಹಾಗೂ ಇತರೆ ಆಭರಣ ದರೋಡೆ ಮಾಡಿ ಹೋಗಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಸದ್ಯ ಝಳಕಿ ಪೊಲೀಸರು ನಿಂಗಪ್ಪ ಪೂಜಾರಿ ಹಾಗೂ ಆತನಿಗೆ ಸಹಾಯ ಮಾಡಿದ ಪರಶುರಾಮ ಬಂದಪಟ್ಟಿ ಮೇಲೆ ಪ್ರಕರಣ ದಾಖಲಿಸಿ ಜೈಲಿಟ್ಟಿದ್ದರು. ಸದ್ಯ ಜಾಮೀನಿನ ಮೇಲೆ ಇಬ್ಬರು ಆರೋಪಿಗಳು ಜೈಲಿನಿಂದ ಹೊರ ಬಂದಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ: ವಿಜಯಪುರದಲ್ಲಿ 40 ಟನ್ ಅಕ್ಕಿ ಜಪ್ತಿ
ಇಲ್ಲಿ ಸೋದರಳಿಯನೇ ಅತ್ತೆಯ ಬಳಿಯಿದ್ದ ಚಿನ್ನಾಭರಣಕ್ಕಾಗಿ ದರೋಡೆಯ ಪ್ಲ್ಯಾನ್ ಮಾಡಿದ್ದ. ಈತನಿಗೆ ಪರಶುರಾಮ ಸಹಾಯ ಮಾಡಿ ದರೋಡೆಯಾಗಿದೆ ಎಂದು ಬಿಂಬಿಸಿ ಕಂಬಿ ಹಿಂದೆ ಹೋಗಿದ್ದು ಇವರಿಗೆ ಪಾಠವಾಗಿದೆ. ಸದ್ಯ ಜಾಮೀbನು ಪಡೆದು ಐತಾತಿ ಅಳಿಯ ನಿಂಗಪ್ಪ ಹಾಗೂ ಆತನ ಗೆಳೆಯ ಪರಶುರಾಮ ಹೊರ ಬಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Thu, 1 May 25