ರಾಯಚೂರು: ಬೇರೆ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳನ್ನು ಕೊಲೆ ಮಾಡಿ ನದಿಗೆ ಎಸೆದ ತಂದೆ, ಪ್ರಕರಣ ಬಯಲಾಗಿದ್ದೇ ರೋಚಕ
ರಾಯಚೂರು ಜಿಲ್ಲೆಯಲ್ಲಿ ಅಂತರ್ಜಾತಿ ಪ್ರೇಮದಿಂದಾಗಿ ತಂದೆಯೊಬ್ಬ ತನ್ನ ಮಗಳನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಣುಕಾ ಎಂಬ ಯುವತಿ ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದಳು. ಕುಟುಂಬದ ವಿರೋಧದ ನಂತರ, ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆದರೆ, ತಂದೆ ಲಕ್ಕಪ್ಪ ಮಗಳನ್ನು ಕೊಲೆ ಮಾಡಿ ಶವವನ್ನು ನದಿಗೆ ಎಸೆದಿದ್ದಾನೆ. ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಲಕ್ಕಪ್ಪ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ರಾಯಚೂರು, ಏಪ್ರಿಲ್ 29: ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿ (Honor Killing) ಶವವನ್ನು ನದಿಗೆ ಎಸೆದಿದ್ದ ಘಟನೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ (Hanchinala) ಗ್ರಾಮದಲ್ಲಿ ನಡೆದಿರುವುದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಆರೋಪಿಯೇ ನ್ಯಾಯಾಲಯದಲ್ಲಿ ಸತ್ಯ ವಿಚಾರ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. 2024ರ ಸೆಪ್ಟೆಂಬರ್ 29ರಂದು ಪುತ್ರಿ ರೇಣುಕಾಳನ್ನು (18) ಕೊಲೆ ಮಾಡಿದ್ದ ತಂದೆ ಲಕ್ಕಪ್ಪ ಕಂಬಳಿ ಶವವನ್ನು ಮೂಟೆಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದ.
ಅನ್ಯ ಜಾತಿಯ ಯುವಕ ಹನುಮಂತನನ್ನ ಪ್ರೀತಿಸಿದ್ದ ರೇಣುಕಾ
ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸಿದ್ದಳು. ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರೂ ಗ್ರಾಮ ಬಿಟ್ಟು ಓಡಿಹೋಗಿದ್ದರು. ಆಗ ರೇಣುಕಾಗೆ 17 ವರ್ಷ ವಯಸ್ಸಾಗಿತ್ತು. ಮಗಳು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆಕೆಯ ತಂದೆ ಲಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಪಟ್ಟು ಬಿಡದ ರೇಣುಕಾಳನ್ನು ಕೊಲೆ ಮಾಡಿದ್ದ ಲಕ್ಕಪ್ಪ
ಪೋಕ್ಸೋ ಪ್ರಕರಣದಡಿ ಪೊಲೀಸರು ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ರೇಣುಕಾ ಮಾತ್ರ ಹನುಮಂತನನ್ನೇ ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದಾದ ಕೆಲವು ದಿನಗಳ ನಂತರ ಹನುಮಂತ ಜಾಮೀನು ಮೇಲೆ ಹೊರ ಬಂದಿದ್ದ. ಬಳಿಕ ಆತನ ಜೊತೆ ರೇಣುಕಾ ಓಡಾಟ ಆರಂಭಿಸಿದ್ದಳು. ಎಷ್ಟೇ ಬುದ್ಧಿ ಹೇಳಿದರೂ ಕೇಳದೆ, ಹನುಮಂತನನ್ನೇ ಮದುವೆ ಆಗುವೆ ಎಂದಿದ್ದಳು. ಇದರಿಂದ ಕೋಪಗೊಂಡು ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ಲಕ್ಕಪ್ಪ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಸತ್ಯ ಬೆಳಕಿಗೆ ಬಂದಿದ್ಹೇಗೆ?
ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಲಕ್ಕಪ್ಪ ತಪ್ಪೊಪ್ಪಿಗೆ ಮಾಡಿದ್ದಾರೆ. ವಿಚಾರಣೆಗೆ ಹಲವು ಬಾರಿ ಪುತ್ರಿ ರೇಣುಕಾ ಗೈರಾದ ಬಗ್ಗೆ ಕೋರ್ಟ್ ಪ್ರಶ್ನೆ ಮಾಡಿತ್ತು. ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ತಾಕೀತು ಮಾಡಿತ್ತು. ಈ ವೇಳೆ ಲಕ್ಕಪ್ಪ ಅನಿವಾರ್ಯವಾಗಿ ತಪ್ಪೊಪ್ಪೊಕೊಳ್ಳಬೇಕಾಗಿ ಬಂತು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು, ಪತಿ ಅರೆಸ್ಟ್
ಮಗಳನ್ನು ಕೊಲೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿರುವುದಾಗಿ ಲಕ್ಕಪ್ಪ ಕೋರ್ಟ್ಗೆ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಮರ್ಯಾದಾ ಹತ್ಯೆ ಪ್ರಕರಣವೊಂದು ಕೊನೆಗೂ ಬಯಲಾದಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 29 April 25







