ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ ಸೇರ್ಪಡೆ ಕುರಿತು ಹೆಚ್​ಡಿ ಕುಮಾರಸ್ವಾಮಿ ಹೇಳಿದಿಷ್ಟು

ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ ಸೇರ್ಪಡೆ ಆಗುವ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ​ಕುಮಾರಸ್ವಾಮಿ, ಕೆಲವರು ಇನ್ನೂ ಅವರವರ ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ ಸೇರ್ಪಡೆ ಕುರಿತು ಹೆಚ್​ಡಿ ಕುಮಾರಸ್ವಾಮಿ ಹೇಳಿದಿಷ್ಟು
ಹೆಚ್ ಡಿ ಕುಮಾರಸ್ವಾಮಿ

Updated on: Apr 13, 2023 | 9:25 PM

ಹಾವೇರಿ: ಈ ಬಾರಿ ವಿಧಾನಸಭೆ ಚುನಾವಣಾ ಟಿಕೆಟ್​ ಕೈತಪ್ಪಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಹರಿದಾಡುತ್ತಿದೆ. ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದು, ಕೆಲವರು ಇನ್ನೂ ಅವರವರ ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಯಾರು ಯಾರು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ. ಇನ್ನೂ ಹಲವಾರು ಜನ ಬರುವವರಿದ್ದಾರೆ. ಜೆಡಿಎಸ್​ ಪರವಾದ ವಾತಾವರಣ ಭಗವಂತನೇ ಸೃಷ್ಟಿ ಮಾಡಿದ್ದಾನೆ. ನನ್ನ ಶ್ರಮ ನೋಡಿ ಒಂದು ಬಾರಿ ಬೆಂಬಲಿಸೋಣ ಅಂತ ಜನ ನಿರ್ಧಾರ ಮಾಡಿದ್ದಾರೆ. ಜೆಡಿಎಸ್​ಗೆ ಶಕ್ತಿ ತುಂಬಲು ಬಹಳ ಜನ ಕಾಯುತ್ತಿದ್ದಾರೆ ಎಂದು ಹೇಳಿದರು.

ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ

ವೈಎಸ್​ವಿ ದತ್ತಾ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ದೇವೆಗೌಡರು, ರೇವಣ್ಣ ಇದಾರೆ ಅವರು ತೀರ್ಮಾನ ಮಾಡುತ್ತಾರೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ಬೀಳ್ಕೊಡುಗೆ ವಿಚಾರವಾಗಿ ಮಾತನಾಡಿ, ಇನ್ನೂ ಇದಾರಲ್ಲಾ ನಾಯಕರು. ಬಿಜೆಪಿ ಸಹವಾಸದಲ್ಲಿ ಯಾರು ಯಾರು ಎಲ್ಲಿ ಬಂದು ನಿಲ್ಲುತ್ತಾರೆ ನೋಡೋಣ ಎಂದರು.

ಇದನ್ನೂ ಓದಿ: Laxman Savadi: ಟಿಕೆಟ್ ತಪ್ಪಿದ್ದರಿಂದ ಪಕ್ಷ ಬಿಡುತ್ತಿಲ್ಲ; ಬಿಜೆಪಿ ಬಿಡುತ್ತಿರುವುದಕ್ಕೆ ಬೇರೆಯೇ ಕಾರಣ ನೀಡಿದ ಲಕ್ಷ್ಮಣ ಸವದಿ

ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ದ ಹೆಚ್​ಡಿಕೆ ವ್ಯಂಗ್ಯ

ಹಿರೇಕೆರೂರಿನ ಮಹಾನುಭಾವ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್, ಪ್ಯೂನ್​ಗಳ ವರ್ಗಾವಣೆಯಲ್ಲೂ ಲೂಟಿ ಹೊಡೆದವರು. ಅಂದು ಹಿರೆಕೇರೂರಿನ ಬಣವೆಗಳಿಗೆ ಬೆಂಕಿ ಬಿದ್ದಾಗ ರೈತರಿಗೆ ನಾನು ದುಡ್ಡು ಕೊಟ್ಟು ಹೋದೆ. ಈ ಮಹಾನುಭಾವ ಫೋಟೋದಲ್ಲಿ ನನ್ನ ಪಕ್ಕ‌ ನಿಂತು ಫೋಟೋ ತೆಗೆಸಿಕೊಂಡ. ಅವನು ಶಾಸಕನಾಗಿ ಅವನ ಜೇಬಿನಿಂದ ದುಡ್ಡು ಕೊಡಲಿಲ್ಲ. ನಾನು ದುಡ್ಡು ಕೊಟ್ಟು ಬಂದಿದ್ದೆ. ಇಂಥವರು ನನ್ನ ಬಗ್ಗೆ ಮಾತನಾಡುತ್ತಾರೆ ಇವತ್ತು ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬೀಳಗಿಯಲ್ಲಿ ನಾಮಪತ್ರ ಸಲ್ಲಿಸಿದ ಮುರುಗೇಶ್ ನಿರಾಣಿ ಹೊಂದಿರುವ ಆಸ್ತಿ ಎಷ್ಟು ಗೊತ್ತಾ?

ಭಾಷಣದ ವೇಳೆ ಆರ್​ಶಂಕರ್​ ವಿರುದ್ಧ ಕಿಡಿ

ಇವತ್ತಿನ ರಾಜಕಾರಣ ಎಲ್ಲಿ ಹೋಗಿ ನಿಂತಿದೆ? ಈ ಜಿಲ್ಲೆಯವರೇ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ರೈತರ ಶಾಶ್ವತ ಬದುಕಿಗೆ ಏನು ಕಾರ್ಯಕ್ರಮ ನೀಡಿದ್ದಾರೆ ಎಂದು ಭಾಷಣದ ವೇಳೆ ಆರ್​ಶಂಕರ್​ ವಿರುದ್ಧ ಕಿಡಿಕಾರಿದರು. ಇಂಡಿಪೆಂಡೆಂಟ್ ಆಗಿ ಆಯ್ಕೆ ಯಾದ ಆ ವ್ಯಕ್ತಿ ಮಂತ್ರಿ ಆಗಿದ್ದರು. ಆ ಮಹಾನುಭಾವನಿಗೆ ಏನು ಅನ್ಯಾಯ ಆಗಿತ್ತು? ಯಾಕೆ ಬಿಟ್ಟು ಹೋದ ಎಂದು ಪ್ರಶ್ನಿಸಿದರು. ಎಂಎಲ್​ಸಿ ಮಾಡಿದ್ರು, ಮಂತ್ರಿ ಸೀಟ್ ಕೊಡಲೇ ಇಲ್ಲ. ಆ ಪುಣ್ಯಾತ್ಮನಿಗೆ ಬಿಜೆಪಿ ನೀಡಿದ ಬಳುವಳಿ ಇದು. ಈಗ ಮತ್ತೆ ಇಂಡಿಪೆಂಡೆಂಟ್ ಆಗಿ ಸ್ಪರ್ಧೆ ಮಾಡೋಕೆ ತಯಾರಾಗಿದ್ದಾರೆ ಎಂದರು.

ರೈತರ ಸಾಲ ಮನ್ನಾ ಮಾಡಿದ ಯಾರಾದರೂ ಸಿಎಂ ಇದ್ದಾರಾ

ಪದೇ ಪದೇ ನನ್ನ ಪಕ್ಷ ಕೈ ಬಿಟ್ಟರೂ ಏಕಾಂಗಿಯಾಗಿ ಬಂದು ಸಹಾಯ ಮಾಡಿದ್ದೇನೆ. ಏನು ತಪ್ಪು ಮಾಡಿದ್ದೇವೆ ಅಂತ ನಮಗೆ ಶಿಕ್ಷೆ ಕೊಡುತ್ತಿದ್ದೀರಿ ಎಂದರು. ನೂರಾರು ಜನ ರೈತರು ಈ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ 75 ಲಕ್ಷ ಕೊಟ್ಟು ಹೋಗಿದ್ದೆ. ಪಂಚರತ್ನ ಕಾರ್ಯಕ್ರಮ ತರೋಕೆ ಹೊರಟಿರೋದು ನಿಮಗಾಗಿ. ಅಧಿಕಾರ ಹಿಡಿಯಬೇಕು ಅಂತ ಅಲ್ಲ. ದೈವಾನುಗ್ರಹದಿಂದ 2 ಸಲ ಸಿಎಂ ಆಗಿದ್ದೇನೆ. ರೈತರ ಸಾಲ ಮನ್ನಾ ಮಾಡಿದ ಯಾರಾದರೂ ಸಿಎಂ ಇದ್ದಾರಾ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Thu, 13 April 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us