ಭಾರತ-ಪಾಕ್ ಯುದ್ಧ ಬೇಡ ಎಂದ ನಟಿ ಐಶ್ವರ್ಯಾ ರಾಜೇಶ್; ಏನು ಇವರ ವಾದ?
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಅವರು ಬೇರೆಯದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯುದ್ಧಕ್ಕಿಂತಲೂ ಶಾಂತಿಯ ಕಡೆಗೆ ಗಮನ ಹರಿಸೋಣ ಎಂಬರ್ಥದಲ್ಲಿ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆ ಆಗುತ್ತಿದೆ.

ಪಾಕ್ ಉಗ್ರರು ಪಹಲ್ಗಾಮ್ನಲ್ಲಿ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತ ಕ್ರಮ ಕೈಗೊಳ್ಳುತ್ತಿದೆ. ಪಾಕಿಸ್ತಾನದಲ್ಲಿ (Pakistan) ಅಡಗಿರುವ ಉಗ್ರರಿಗೆ ಪಾಠ ಕಲಿಸುವ ಸಲುವಾಗಿ ಭಾರತೀಯ ಸೇನೆ ಕಾರ್ಯಪ್ರವೃತ್ತವಾಗಿದೆ. ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ (India Pak War) ಶುರುವಾಗಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ಪಾಕಿಸ್ತಾನದ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲೇಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಅವರು ಬೇರೆಯದೇ ವಾದ ಮಂಡಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಬೇಡ ಎಂದು ಅವರು ಹೇಳುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಐಶ್ವರ್ಯಾ ರಾಜೇಶ್ ಅವರು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಮೊದಲಿಗೆ ಅವರು ಭಾರತೀಯ ಸೇನೆಗೆ ಧನ್ಯವಾದ ಅರ್ಪಿಸಿದ್ದಾರೆ. ‘ಇಡೀ ರಾಷ್ಟ್ರವೇ ನಿಶ್ಚಿಂತೆಯಿಂದ ಮಲಗಿರುವಾಗ ಭಾರತದ 15 ನಗರಗಳನ್ನು ಕಾಪಾಡಿದ್ದಕ್ಕಾಗಿ ಭಾರತದ ಸೇನೆಗೆ ಧನ್ಯವಾದ. ನಾವು ಬದುಕಿರುವುದಕ್ಕೆ ನೀವೇ ಕಾರಣ’ ಎಂದು ಅವರು ಹೇಳಿದ್ದಾರೆ. ಆದರೆ ಮತ್ತೊಂದು ಸ್ಟೋರಿಯಲ್ಲಿ ಯುದ್ಧ ಬೇಡ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
‘ಪ್ರಜಾಪ್ರಭುತ್ವ ರಾಷ್ಟ್ರವಾದ ನಾವು ಸಂಘರ್ಷದ ಬದಲಿಗೆ ಶಾಂತಿ ನೆಲೆಸಲಿ ಎಂದು ಭಾರತ ಮತ್ತು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸೋಣ. ಯುದ್ಧದಿಂದ ಎರಡೂ ದೇಶಗಳಲ್ಲಿ ಹಾನಿ ಮತ್ತು ನೋವು ಆಗುತ್ತದೆ ಅಷ್ಟೇ. ರಾಷ್ಟ್ರೀಯತೆ ಯಾವುದೇ ಆಗಿರಲಿ, ಒಟ್ಟಾಗಿ ನಿಂತು ಹೊಂದಾಣಿಕೆಯನ್ನು ಪ್ರತಿಪಾದಿಸೋಣ’ ಎಂದು ಐಶ್ವರ್ಯಾ ರಾಜೇಶ್ ಬರೆದುಕೊಂಡಿದ್ದಾರೆ.

Aishwarya Rajesh Instagram Story
‘ಪ್ರತಿಭಾವಂತ ವ್ಯಕ್ತಿಗಳು, ಸೈನಿಕರು ಹಾಗೂ ಅಮಾಯಕ ಜನರ ಸಾವನ್ನು ನಾವು ಭರಿಸಲು ಸಾಧ್ಯವಿಲ್ಲ. ನಾವೆಲ್ಲ ಜಾಗೃತಿ ಮೂಡಿಸೋಣ. ಇನ್ನೊಂದು ಯುದ್ಧವನ್ನು ತಪ್ಪಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಬೆಂಬಲಿಸೋಣ. ಈ ಸಂದೇಶವನ್ನು ಹರಡಿರಿ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಂಡಿರುವ ಐಶ್ವರ್ಯಾ ರಾಜೇಶ್ ಅವರು #NoToWar ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಇದನ್ನೂ ಓದಿ: ಯುದ್ಧದ ವೇಳೆ ಸುಳ್ಳು ಸುದ್ದಿ ಹಬ್ಬಿಸಬೇಡಿ: ಸೃಜನ್ ಲೋಕೇಶ್
ನಟಿಯ ಈ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಬೇರೆಯೇ ಇದೆ. ಭಾರತ ತಾನಾಗಿಯೇ ಈ ಯುದ್ಧವನ್ನು ಆರಂಭಿಸಿಲ್ಲ. ಪಾಕ್ ಮಾಡಿದ ಕುತಂತ್ರಕ್ಕೆ ಪ್ರತಿಯಾಗಿ ಯುದ್ಧ ಮಾಡುವ ಸಂದರ್ಭ ಬಂದಿದೆ. ಹಾಗಿದ್ದರೂ ಕೂಡ ಐಶ್ವರ್ಯಾ ರಾಜೇಶ್ ಅವರು ಯುದ್ಧ ಬೇಡ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.