ಆಂಧ್ರ, ತೆಲಂಗಾಣದ ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

ಮೊದಲು 2 ಕೋಟಿ ರೂಪಾಯಿ ದೇಣಿಗೆ ನೀಡಿದ ಪವನ್​ ಕಲ್ಯಾಣ್​ ಅವರು ನಂತರ ಮತ್ತೆ 4 ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಪ್ರವಾಹಕ್ಕೆ ಸಿಕ್ಕ ಅಂದಾಜು 400 ಪಂಚಾಯತ್​ಗಳಿಗೆ ಈ ಹಣದಿಂದ ಸಹಾಯ ಆಗಲಿದೆ. ತೆಲುಗು ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಕೂಡ ಕೋಟ್ಯಂತರ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಂಧ್ರ, ತೆಲಂಗಾಣದ ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್
ಪವನ್​ ಕಲ್ಯಾಣ್​
Follow us
|

Updated on: Sep 04, 2024 | 10:12 PM

ಪ್ರವಾಹದಿಂದಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ರಾಮ್​ ಚರಣ್​, ಪ್ರಭಾಸ್​, ಅಲ್ಲು ಅರ್ಜುನ್​, ನಂದಮೂರಿ ಬಾಲಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಆ ಮೂಲಕ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಟಾಲಿವುಡ್​ ನಟ ಪವನ್​ ಕಲ್ಯಾಣ್​ ಅವರು 6 ಕೋಟಿ ರೂಪಾಯಿ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರರಾಗಿದ್ದಾರೆ.

ಮೊದಲು ಪವನ್​ ಕಲ್ಯಾಣ್​ ಅವರು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದರು. ಆ ನಂತರ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಣ ಸಾಕಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರು. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡುವುದಾಗಿ ಪವನ್​ ಕಲ್ಯಾಣ್​ ಘೋಷಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ 400 ಪಂಚಾಯತ್​ ಕ್ಷೇತ್ರಗಳಲ್ಲಿ ಪುನರ್​ವಸತಿ ಕಲ್ಪಿಸುವ ಸಲುವಾಗಿ ಪವನ್​ ಕಲ್ಯಾಣ್​ ನೀಡಿದ 4 ಕೋಟಿ ರೂಪಾಯಿ ಬಳಕೆ ಆಗಲಿದೆ. ‘ಪ್ರವಾಹದಿಂದ ಆಗಿರುವ ಹಾನಿ ಗಮನಿಸಿದರೆ 1 ಕೋಟಿ ರೂಪಾಯಿಯಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡಲಿದ್ದೇನೆ’ ಎಂದು ಪವನ್​ ಕಲ್ಯಾಣ್​ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡ ಕಲಿಯುವ ಮನಸ್ಸಾಗಿದೆ’: ಕರುನಾಡಿಗೆ ಬಂದು ಆಸೆ ಹೇಳಿಕೊಂಡ ಪವನ್​ ಕಲ್ಯಾಣ್​

‘ನಮ್ಮ ಪಕ್ಕದ ತೆಲಂಗಾಣ ಕೂಡ ಪ್ರವಾಹದಲ್ಲಿ ಸಿಲುಕಿದೆ. ಹಾಗಾಗಿ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನಾನು ನೇರವಾಗಿ ಭೇಟಿ ಮಾಡಿ ಹಣ ನೀಡುತ್ತೇನೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಈ ಸಮಯದಲ್ಲಿ ಮಾನವೀಯತೆ ತೋರಿಸುತ್ತಿದ್ದಾರೆ’ ಎಂದು ಪವನ್​ ಕಲ್ಯಾಣ್​ ಹೇಳಿದ್ದಾರೆ. ಪ್ರವಾಹ ಪೀಡಿತ ಅನೇಕ ಪ್ರದೇಶಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.