ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?

| Updated By: ಮದನ್​ ಕುಮಾರ್​

Updated on: Apr 07, 2022 | 8:14 AM

ರಿಯಲ್​ ಹೀರೋ ಸೋನು ಸೂದ್​ ಅವರಿಗೆ ಟ್ರೋಲ್​ ಎಂಬುದು ಹೊಸದೇನೂ ಅಲ್ಲ. ಅದನ್ನು ಹೇಗೆ ಹ್ಯಾಂಡಲ್​ ಮಾಡಬೇಕು ಎಂಬುದನ್ನು ಅವರು ಚೆನ್ನಾಗಿ ಕಲಿತಿದ್ದಾರೆ.

ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?
ಸೋನು ಸೂದ್​
Follow us on

ನಟ ಸೋನು ಸೂದ್​ (Sonu Sood) ಅವರು ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಸಖತ್ ಫೇಮಸ್​ ಆಗಿದ್ದಾರೆ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅವರ ರಿಯಲ್​ ಲೈಫ್​ ವ್ಯಕ್ತಿತ್ವದ ಕಾರಣಕ್ಕಾಗಿ ಜನರು ಅವರನ್ನು ಇಷ್ಟಪಡುತ್ತಾರೆ. ಮೊದಲ ಬಾರಿ ಲಾಕ್​ಡೌನ್​ ಆದಾಗ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್​ ಅವರು ರಿಯಲ್​ ಹೀರೋ (Real Hero Sonu Sood) ಎನಿಸಿಕೊಂಡರು. ಅವರ ಸಮಾಜ ಸೇವೆ ಅಷ್ಟಕ್ಕೇ ನಿಲ್ಲಲಿಲ್ಲ. ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್​ ಕರೆತರಲು ಕೂಡ ಅವರು ಸಹಾಯ ಮಾಡಿದ್ದರು. ಲಾಕ್​ಡೌನ್ ಮುಗಿದು, ಜನಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕವೂ ಅವರು ಅನೇಕರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಎಷ್ಟೋ ಜನರಿಗೆ ವೈದ್ಯಕೀಯ ನೆರವು ನೀಡಿದ್ದಾರೆ. ಇಂದಿಗೂ ಅವರು ಒಳ್ಳೆಯ ಕಾರ್ಯ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ಬಿಯರ್ (Beer) ದಾನ ಮಾಡಿ’ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸೋನು ಸೂದ್​ ಅವರು ಜಾಣತನದಿಂದ ಉತ್ತರ ನೀಡಿದ್ದಾರೆ. ಅದೀಗ ವೈರಲ್​ ಆಗುತ್ತಿದೆ.

ಸೋನು ಸೂದ್​ ಅವರಿಗೆ ಸಂಬಂಧಿಸಿದಂತೆ ಅನೇಕ ಮೀಮ್ಸ್​ ಹರಿದಾಡುತ್ತಿವೆ. ಆ ಪೈಕಿ ಒಂದು ಮೀಮ್​ ಬಹಳ ಗಮನ ಸೆಳೆದಿದೆ. ‘ಚಳಿಗಾಲದಲ್ಲಿ ಕಂಬಳಿ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್​ ದಾನ ಮಾಡುವುದಿಲ್ಲವೇ’ ಎಂದು ಬರೆದಿರುವ ಮೀಮ್​ ಅನ್ನು ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡಿದ್ದಾರೆ. ಅದನ್ನು ಕಂಡು ಸೋನು ಸೂದ್​ ಉತ್ತರ ನೀಡಿದ್ದಾರೆ. ‘ಬೀಯರ್​ ಜೊತೆ ತಿನ್ನಲು ಖಾರ ನೀಡಿದರೆ ನಡೆಯುತ್ತಾ’ ಎಂದು ಅವರು ಫನ್ನಿಯಾಗಿ ಪ್ರಶ್ನಿಸಿದ್ದಾರೆ. ‘ಖಾರ ಪಡೆಯಲು ಬಿಯರ್​ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಸೋನು ಸೂದ್ ಅವರಿಗೆ ಟ್ರೋಲ್​ ಎಂಬುದು ಹೊಸದೇನೂ ಅಲ್ಲ. ಅದನ್ನು ಹೇಗೆ ಹ್ಯಾಂಡಲ್​ ಮಾಡಬೇಕು ಎಂಬುದನ್ನು ಅವರು ಚೆನ್ನಾಗಿ ಕಲಿತಿದ್ದಾರೆ. ಅನೇಕ ಬಾರಿ ನೆಟ್ಟಿಗರು ಸೋನು ಸೂದ್​ ವಿಚಾರವಾಗಿ ತಮಾಷೆ ಮಾಡಿದ್ದುಂಟು. ಕೆಲವರು ಸೋನು ಸೂದ್​ ಮೇಲೆ ಅನುಮಾನದ ದೃಷ್ಟಿ ಬೀರಿದ್ದೂ ಉಂಟು. ಅವರಿಗೆ ರಾಜಕೀಯಕ್ಕೆ ಸೇರುವ ಉದ್ದೇಶ ಇದೆ ಎಂಬುದಾಗಿಯೂ ಕೆಲವರು ಟೀಕೆ ಮಾಡಿದ್ದರು. ಸಹೋದರಿಯ ರಾಜಕೀಯಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂಬ ಕಾರಣಕ್ಕೂ ಅವರನ್ನು ಕೆಲವು ಟ್ರೋಲ್​ ಮಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಸೋನು ಸೂದ್​ ಅವರು ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ.

ಸೋನು ಸೂದ್​ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ವಿಲನ್​ ರೋಲ್​ ಮಾಡುವ ಮೂಲಕ ಫೇಮಸ್​ ಆಗಿದ್ದಾರೆ. ಆದರೆ ಜನರಿಗೆ ಅವರು ಸಹಾಯ ಮಾಡಲು ಆರಂಭಿಸಿದ ಮೇಲೆ ಅವರ ಇಮೇಜ್​ ಬದಲಾಗಿದೆ. ಸಿನಿಮಾದಲ್ಲೂ ಕೂಡ ಅವರನ್ನು ನೆಗೆಟಿವ್​ ಆಗಿ ನೋಡಲು ಜನರು ಇಷ್ಟಪಡುತ್ತಿಲ್ಲ. ಹಾಗಾಗಿ ಅವರಿಗೆ ಈಗ ವಿಲನ್​ ಪಾತ್ರಗಳನ್ನು ನೀಡಲು ನಿರ್ದೇಶಕರು ಹಿಂದೇಟು ಹಾಕುತ್ತಿದ್ದಾರೆ.

ಸದ್ಯ ಸೋನು ಸೂದ್​ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಎಂಟಿವಿ ರೋಡೀಸ್​ ಕಾರ್ಯಕ್ರಮದ ನಿರೂಪಣೆಯನ್ನು ಸೋನು ಸೂದ್​ ಮಾಡುತ್ತಿದ್ದಾರೆ. ಏ.8ರಿಂದ ಈ ಶೋ ಪ್ರಸಾರ ಆಗಲಿದೆ. ‘ಆಚಾರ್ಯ’, ‘ಪೃಥ್ವಿರಾಜ್​’, ‘ಫತೆ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ವಿಷ್ಣುವರ್ಧನ’ ಸಿನಿಮಾ ಮೂಲಕ ಕನ್ನಡದ ಪ್ರೇಕ್ಷಕರನ್ನೂ ಸೋನು ಸೂದ್​ ರಂಜಿಸಿದ್ದರು. ನಂತರ ಅವರು ‘ಕುರುಕ್ಷೇತ್ರ’ ಚಿತ್ರದಲ್ಲಿ ಅರ್ಜುನನ ಪಾತ್ರ ಮಾಡಿದರು.

ಇದನ್ನೂ ಓದಿ:

ಉಕ್ರೇನ್​: ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್​ ಸಹಾಯ; ಮತ್ತೆ ರಿಯಲ್​ ಹೀರೋ ಆದ ನಟ

ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​