
ಇತ್ತೀಚೆಗೆ ಯುವ ಜನತೆಯನ್ನು (Gen Z) ‘ಜನರೇಷನ್ ಗಟಾರ್’ ಎಂದು ಕರೆದು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ವಿವಾದಕ್ಕೀಡಾಗಿದ್ದರು. ಈಗ ಕಂಗನಾ ಮತ್ತು ಯೋಗ ಗುರು ಬಾಬಾ ರಾಮ್ದೇವ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕಂಗನಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಾಬಾ ರಾಮ್ದೇವ್, ‘ಅವರ ಮಾನಸಿಕ ಸ್ಥಿತಿಯನ್ನು ಪ್ರಶ್ನಿಸಿ ಬಿಜೆಪಿ ನಾಯಕರು ಈ ಬಗ್ಗೆ ಗಮನ ಹರಿಸಬೇಕು’ ಎಂದಿದ್ದರು. ಬಾಬಾ ರಾಮ್ದೇವ್ (Baba Ramdev) ಅವರ ಈ ಹೇಳಿಕೆಗೆ ಕಂಗನಾ ರಣಾವತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅತ್ಯಂತ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಬಾಬಾ ಜಿ, ನನ್ನ ಯೌವನ ಅಥವಾ ಬೆಡ್ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ. ವದಂತಿಗಳು ಮತ್ತು ಗಾಸಿಪ್ಗಳ ಆಧಾರದ ಮೇಲೆ ಮಾತ್ರ ಊಹಿಸಲು ಸಾಧ್ಯ. ಕನಿಷ್ಠ ಪಕ್ಷ ಸುಳ್ಳು ಮತ್ತು ವಂಚನೆಯ ವೈದ್ಯಕೀಯ ಜಾಹೀರಾತುಗಳಿಗಾಗಿ ನನಗೆ ಸುಪ್ರೀಂ ಕೋರ್ಟ್ನಿಂದ ಎಂದಿಗೂ ಛೀಮಾರಿ ಸಿಕ್ಕಿಲ್ಲ. ನನ್ನ ಮೇಲಿನ ಆರೋಪಗಳು ಸತ್ಯದ ಆಧಾರದಲ್ಲಿದೆಯೇ ಹೊರತು ಗಾಸಿಪ್ಗಳಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು ಬಾಬಾ ರಾಮ್ದೇವ್ಗೆ ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿರುವ ಕಂಗನಾ, ‘ಆದ್ದರಿಂದ ನನಗೆ ಚಾರಿತ್ರ್ಯದ ಪಾಠ ಹೇಳಿಕೊಡಲು ಬರಬೇಡಿ. ನಿಮಗಿಂತ ನನ್ನ ಚಾರಿತ್ರ್ಯ ಎಷ್ಟೋ ಪಟ್ಟು ಉತ್ತಮವಾಗಿದೆ. ಇಲ್ಲಿ ಯಾವುದೇ ವಂಚನೆ ಪತ್ತೆಯಾಗಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಈ ಮಾತುಗಳಿಗೆ ಬಾಬಾ ರಾಮ್ ದೇವ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಕಂಗನಾ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಬಾಬಾ ರಾಮ್ದೇವ್, ‘ಆಕೆಯ ಬಾಲ್ಯ ಹೇಗಿತ್ತು? ಆಕೆಯ ಯೌವನ ಮತ್ತು ಹಿಂದಿನ ಸಾಧನೆಗಳು ಹೇಗಿದ್ದವು? ಇಂತಹ ಜನರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ದೇಶದ ಯುವಕರನ್ನು ಗಟಾರ್ ಎಂದು ಕರೆಯುವುದು ಭ್ರಷ್ಟ ಮನಸ್ಸಿನ ಸಂಕೇತ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್ ಮಾಡಿದವರಿಗೆ ಕಂಗನಾ ತಿರುಗೇಟು
2024ರಲ್ಲಿ ನಡೆದ ಪತಂಜಲಿ ಅಸಲಿ-ನಕಲಿ ಜಾಹೀರಾತು ವಿವಾದವನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಜನರ ದಾರಿ ತಪ್ಪಿಸುವ ಪತಂಜಲಿ ಸಂಸ್ಥೆಯ ಜಾಹೀರಾತುಗಳು ಮತ್ತು ಆಧುನಿಕ ವೈದ್ಯಕೀಯ ಪದ್ಧತಿಯನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿತ್ತು. ಈ ಘಟನೆಯನ್ನೇ ನೆನಪಿಸಿ ಕಂಗನಾ ಇದೀಗ ರಾಮ್ದೇವ್ ಅವರಿಗೆ ತಿರುಗೇಟು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.